ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ನಾವುಗಳು ಇದಾದರೂ ನಮ್ಮ ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚು ಒಲವು – ಸಮಯ ನೀಡುವುದು ಅವಶ್ಯವಾಗಿದೆ. ಯಾಕೆಂದರೆ ನಾವೆಲ್ಲರೂ ದಿನನಿತ್ಯ ಬಳಕೆ ಮಾಡಿಕೊಳ್ಳುತ್ತಿರುವ ರಾಸಾಯನಿಕ ಪದಾರ್ಥಗಳು, ತಿಂಡಿ ತಿನಿಸುಗಳನ್ನು ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ ಹಾಗೆ ವಯಸ್ಸು ಕ್ಷೀಣಿಸುತ್ತಿದೆ ಎನ್ನುವುದು ನಮ್ಮಗೆಲ್ಲರಿಗೂ ಗೊತ್ತಿರುವ ಸಂಗತಿ ಅಲ್ಲವೇ ?
ಆದಕಾರಣ ಇಂತಹ ಭಯಂಕರ ಜೀವ ಹಾನಿ ಅಂಶಗಳ ಪದಾರ್ಥಗಳನ್ನು ಕೊಡಲೇ ನಿಲ್ಲಿಸುವ ಮೂಲಕ ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಪ್ರದಾಯದ ಸಾವಯವದ ಪದ್ಧತಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕೋಣ. ಬೆಲ್ಲವನ್ನು ದಿನನಿತ್ಯ ತಿನ್ನಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ, ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನು ಕಾಪಾಡಿಕೊಂಡು, ನೆಮ್ಮದಿಯಾಗಿ ಬಾಳೋಣ.
ಬೆಲ್ಲವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಆಗುವ ಲಾಭಗಳೇನು ಎಂಬುದು ಗೊತ್ತಾದರೆ ಯಾರು ಕೂಡ ಬೆಲ್ಲವನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬೆಲ್ಲದ ಬಗೆಗಿನ ಲಾಭವನ್ನು ತಿಳಿಸುತ್ತಲೇ ಬಂದಿದ್ದಾರೆ. ಹಿಂದೆ ಬೆಲ್ಲವನ್ನು ಯಥೇಚ್ಛವಾಗಿ ಪ್ರತಿನಿತ್ಯ ಬಳಸಲಾಗುತ್ತಿತ್ತು ಆದರೆ ಇಂದು ಶೇ 1 ರಷ್ಟು ಜನರು ಮಾತ್ರ ಬೆಲ್ಲವನ್ನು ಬಳಸುತ್ತಿದ್ದಾರೆ . ಇಂದಿನ ದಿನಗಳಲ್ಲಿ ಹಬ್ಬ ಹರಿ ದಿನಗಳನ್ನು ಬಿಟ್ಟರೆ ಬೇರೆ ದಿನಗಳಲ್ಲಿ ಬೆಲ್ಲಗಳನ್ನು ಬಳಸುವುದೇ ಇಲ್ಲ.
ಬೆಲ್ಲ ಮತ್ತು ಆರೋಗ್ಯ

ಸಂಸ್ಕರಿತ ಸಕ್ಕರೆಗಿಂತ ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿವೆ. ಏಕೆಂದರೆ ಇದರಲ್ಲಿ ಕಾಕಂಬಿ ಹೆಚ್ಚಿರುತ್ತದೆ. ಸಂಸ್ಕರಿಸಿದ ಸಕ್ಕರೆಯಲ್ಲಿ ಯಾವುದೇ ವಿಟಮಿನ್ ಮತ್ತು ಖನಿಜಾಂಶ ಇರುವುದಿಲ್ಲ. ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸಂಸ್ಕರಿತ ಸಕ್ಕರೆಗಿಂತ ಬೆಲ್ಲವೇ ಉತ್ತಮ. ಆದರೆ ಮಿತಿ ಮೀರಿ ಬೆಲ್ಲ ಸೇವಿಸಿದರೆ ಸ್ಥೂಲಕಾಯ ಬರುವ ಸಾಧ್ಯತೆ ಇದೆ. ಟೈಪ್ 2 ಮಧುಮೇಹಕ್ಕೆ ಎಡೆಮಾಡಿಕೊಡುತ್ತದೆ. ಕಬ್ಬಿನ ರಸದಿಂದ ತಯಾರಿಸಲಾಗುವ ಉತ್ಪನ್ನ ಬೆಲ್ಲ. ಸಂಸ್ಕರಿಸದ ಸಕ್ಕರೆ ಉತ್ಪನ್ನ ಎಂದೂ ಕರೆಯಲಾಗುತ್ತದೆ. ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಇದೆ. ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತ. ಭಾರತದಲ್ಲಿ ಸುಮಾರು ನಲವತ್ತು ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ 3 ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದು, ಅದರಲ್ಲಿ 36% ಬೆಲ್ಲ ತಯಾರಿಕೆಗೆ ಬಳಸಲಾಗುತ್ತಿದೆ. ಬೆಲ್ಲವನ್ನು ಮುಖ್ಯವಾಗಿ ಕಬ್ಬು ಹಾಗೂ ಖರ್ಜೂರದ ಮರದಿಂದ ತಯಾರಿಸಲಾಗುತ್ತದೆ. ಖರ್ಜೂರದ ರಸದಿಂದ ಮಾಡಲಾಗುವ ಬೆಲ್ಲ ಹೆಚ್ಚು ಬೆಲೆ ಹಾಗೂ ದೊರೆಯುವುದು ಕಡಿಮೆ. ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಕ್ರಿಯೆಯೇ ಇರುವುದು. ಪಶ್ಚಿಮ ಬಂಗಾಳ, ದಕ್ಷಿಣ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾದಲ್ಲಿ ಇದನ್ನು ತಯಾರಿಸಲಾಗುತ್ತದೆ. ಬೆಲ್ಲದ–ಸಂಪ್ರದಾಯ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ಮನೆಗೆ ಬಂದವರಿಗೆ ಬೇಸಿಗೆಯಲ್ಲಿ ಬೆಲ್ಲ ಮತ್ತು ನೀರನ್ನು ಕೊಡುವ ರೂಢಿಯಿದೆ. ಗುಜರಾತ್ನಲ್ಲಿ ದನಿಯಾ ಹಾಗೂ ಬೆಲ್ಲವನ್ನು ನಿಶ್ಚಿತಾರ್ಥ ಸಮಯದಲ್ಲಿ ನೀಡುತ್ತಾರೆ.
ಬೆಲ್ಲದಿಂದ ಆಗುವ ಆರೋಗ್ಯ ಉಪಯೋಗಗಳು :
- ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ.
- ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ.
- ಸಂಧಿವಾತ, ಅಸ್ತಮಾಗಳಿಗೂ ಬೆಲ್ಲ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.
- ಬ್ಯಾಕ್ಟೀರಿಯಾದ ಜೊತೆ ಹೋರಾಡಲು ವಿನಾಯಿತಿ ನೀಡುವಂತಹ ಶಕ್ತಿಯನ್ನು ನೀಡುತ್ತದೆ.
- ತುಂಡು ಬೆಲ್ಲವನ್ನು ಪ್ರತಿದಿನ ನಾವು ತೆಗೆದುಕೊಳ್ಳುವ ಆಹಾರದೊಂದಿಗೆ ಸೇವಿಸಿದರೆ ಮುಖದಲ್ಲಿ ಮೊಡವೆಗಳಾಗುವ ಸಾಧ್ಯತೆಗಳು ಕಡಿಮೆಯಿರುತ್ತವೆ.
- ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ.
- ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ.
- ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.
- ಬೆಲ್ಲವು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಖಿನ್ನತೆಯನ್ನು ಕೂಡ ದೂರ ಮಾಡುತ್ತದೆ.
ತೂಕ ಕಡಿಮೆ ಮಾಡಲು ಹೇಗೆ ಸಹಾಯಕಾರಿ :

ಸಣ್ಣ ಇರುವವರಿಗೆ ದಪ್ಪ ಆಗಬೇಕೆಂಬ ಆಸೆ. ದಪ್ಪಗೆ ಇರುವವರಿಗೆ ಎಷ್ಟು ಬೇಗನೆ ಸಣ್ಣ ಆಗುತ್ತೇನೋ ಎಂಬ ತಳಮಳಿಕೆ. ಇದಕ್ಕಾಗಿ ಹಲವಾರು ದೈಹಿಕ ಕಸರತ್ತುಗಳನ್ನು ಮಾಡಿ ತಮ್ಮ ಆಹಾರ ಪದ್ಧತಿಯನ್ನೇ ಬದಲಾಯಿಸಿ ಬೇರೆ ಬೇರೆ ಇಷ್ಟವಿಲ್ಲದ ಆಹಾರಗಳನ್ನು ಸೇವಿಸಿ ಬೇಸತ್ತು ಹೋಗಿರುತ್ತಾರೆ. ತೂಕ ಇಳಿಸಲು ಬೆಲ್ಲದ ಸೇವನೆಯ ಪ್ರಮಾಣವನ್ನು ಅರಿತುಕೊಳ್ಳುವುದು ಅತಿ ಅಗತ್ಯವಾಗಿದೆ. ಬೆಲ್ಲ ಆರೋಗ್ಯಕರವಾಗಿದ್ದರೂ ಮಿತಿಯ ಒಳಗಿದ್ದರೆ ಮಾತ್ರ ಇದರ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಸಾಮಾನ್ಯ ಆರೋಗ್ಯದ ವ್ಯಕ್ತಿಗಳು ಪ್ರತಿದಿನ ಎರಡು ಚಿಕ್ಕ ಚಮಚದಷ್ಟು ಬೆಲ್ಲವನ್ನು ಸೇವಿಸಬಹುದು.
ಬೆಲ್ಲದಲ್ಲಿ ಪೊಟ್ಯಾಶಿಯಂ ಸಹಿತ ಹಲವಾರು ಪ್ರಮುಖ ಖನಿಜಗಳಿವೆ. ಇವು ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ದೇಹದ ಯಾವುದೇ ಕ್ರಿಯೆ ಜರುಗಲು ನೀರು ಅಗತ್ಯವಾಗಿದ್ದು ತೂಕ ಇಳಿಕೆಗೂ ಅಂದರೆ, ಕೊಬ್ಬಿನಾಂಶವನ್ನು ಬಳಸಿಕೊಳ್ಳಲೂ ನೀರು ಅಗತ್ಯವಾಗಿದ್ದು ಈ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವು ನೀಡುತ್ತದೆ. ಹಾಗಾಗಿ ಬೆಲ್ಲವನ್ನು ನಿತ್ಯವೂ ಮಿತಪ್ರಮಾಣದಲ್ಲಿ ಸೇವಿಸುವುದು ಉತ್ತಮವಾಗಿದೆ.
ಬೆಲ್ಲದಲ್ಲಿ ವಿಟಮಿನ್ನುಗಳು ಹಾಗೂ ಖನಿಜಗಳು ಅಧಿಕ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸಲು ಹಾಗೂ ತನ್ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಹಾಗಾಗಿ, ವ್ಯಾಯಾಮ ಮತ್ತು ಆಹಾರ ನಿಯಂತ್ರಣದಿಂದ ದೇಹವನ್ನು ಹುರಿಗಟ್ಟಿಸಲು ನಿತ್ಯದ ಅಹಾರಗಳಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಜಾಣತನವಾಗಿದೆ.
ಪಾಲಿಸಬೇಕಾದ ಎಚ್ಚರಿಕೆಗಳು :
ಬೆಲ್ಲದ ಪ್ರಮಾಣ ದಿನದ ಮಿತಿಯನ್ನು ಮೀರಿದರೆ ಇದರಿಂದ ಆರೋಗ್ಯಕ್ಕೆ ಪ್ರತಿಕೂಲ ಪರಿಣಾಮಗಳಾಗಬಹುದು. ತೂಕ ಇಳಿಯುವ ಬದಲಿಗೆ ಇನ್ನಷ್ಟು ಏರಬಹುದು. ಕೆಲವರಲ್ಲಿ ಯಾವಾಗ ಸಕ್ಕರೆಯಿಂದ ಬೆಲ್ಲಕ್ಕೆ ಆಹಾರಕ್ರಮ ಬದಲಾಯಿತೋ ಆಗ ಗಮನಾರ್ಹ ಮಟ್ಟದಲ್ಲಿ ತೂಕ ಏರಬಹುದು. ಮಧುಮೇಹಿಗಳಿಗೆ ಸಕ್ಕರೆಯಂತೆ ಬೆಲ್ಲವೂ ವರ್ಜಿತವೇ ಹೌದು. ಏಕೆಂದರೆ ಮಧುಮೇಹಿಗಳಿಗೆ ಗ್ಲೂಕೋಸ್ ನಂತೆಯೇ ಸುಕ್ರೋಸ್ ಸಕ್ಕರೆಯನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.
GIPHY App Key not set. Please check settings