in , ,

ತಾಳೆ ಮರದ ಹಣ್ಣು

ತಾಳೆ ಮರದ ಹಣ್ಣು
ತಾಳೆ ಮರದ ಹಣ್ಣು

ತಾಳೆಮರವು ತೆಂಗು, ಅಡಕೆ, ಈಚಲು ಮರಗಳ ಕುಟುಂಬವಾದ ಪಾಮೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ. ಬೊರ್ಯಾಸಸ್ ಫ್ಲೆಬಲಿಫರ್ ಎಂಬುದು ಇದರ ಸಸ್ಯ ವೈಜ್ಞಾನಿಕ ಹೆಸರು. ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ಪಾಮೈರಾ ಪಾಮ್ ಎಂಬ ಹೆಸರುಂಟು. ಭಾರತ, ಬರ್ಮ, ಶ್ರೀಲಂಕಾ ಮುಂತಾದ ದೇಶಗಳ ಶುಷ್ಕ ಹಾಗೂ ಮರಳು ನೆಲವಿರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ದೇಶಗಳ ಸಮುದ್ರತೀರಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು.

ತೆಂಗಿನ ಕಾಂಡದಂತೆ ಇದರ ಕಾಂಡವೂ ಇದೆ. ಕವಲುಗಳಿಲ್ಲದೆ ಉರುಳೆಯಾಕಾರ, ಇದರ ಎತ್ತರ 15-20ಮೀ. ಕೆಲವು ಸಲ 30ಮೀ. ಎತ್ತರಕ್ಕೂ ಬೆಳೆಯುವುದುಂಟು. ಮರದ ತುದಿಯಲ್ಲಿ 30-40 ಬೀಸಣಿಗೆಯಾಕಾರದ ಎಲೆಗಳಿವೆ. ಒಂದೊಂದು ಎಲೆಗೂ 1/2-1 ಮೀ. ಉದ್ದದ ತೊಟ್ಟು ಉಂಟು. ತೊಟ್ಟು, ಕಾಂಡ ಕಪ್ಪು ಬಣ್ಣದ್ದು, ಇದರ ಹೊರಕವಚ ಕೂಡ ಗಟ್ಟಿಯಾದ ನೀಳವಾದ ನಾರುಗಳಿಂದ ರಚಿತವಾಗಿದೆ. ಮಧ್ಯದ ದಿಂಡು ಮಾತ್ರ ಮೃದುವಾಗಿದ್ದು ಪಿಷ್ಟದ ಹರಳುಗಳಿಂದ ತುಂಬಿದ ಕೋಶಗಳಿಂದ ರೂಪಿತವಾಗಿದೆ. ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ತಾಳೆಮರ ಹೂ ಬಿಡುತ್ತದೆ. ಹೂಗಳಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆಯಾಗಿದ್ದು ಭಿನ್ನಮರಗಳಲ್ಲಿ ಅರಳುವುವು. ಹೂ ಗೊಂಚಲಿನ ದಿಂಡನ್ನು ಕೊಯ್ದರೆ, ಅದರಿಂದ ಸಿಹಿಯಾದ ರಸ ಸೋರುತ್ತದೆ. ಫಲ ದಪ್ಪಗಾತ್ರದ್ದು. ಇದರ ಹೊರಕವಚದಲ್ಲಿ ನಾರು ಉಂಟು. ಹಣ್ಣಿನ ಒಳಗೆ ಮೂರು ಅಂಕಣಗಳಿದ್ದು ಒಂದೊಂದು ಅಂಕಣದಲ್ಲಿ ಒಂದೊಂದು ಬೀಜ ಇದೆ. ಎಳೆಯ ಹಣ್ಣಿನ ತಿರುಳು ಮೃದುವಾಗಿಯೂ ಸಿಹಿಯಾಗಿಯೂ ಇದ್ದು ನೀರಿನಿಂದ ಕೂಡಿದೆ. ಹಣ್ಣಿಗೆ ತಾಟಿನುಂಗು, ಸಿಹಿನುಂಗು, ತಾಳಿಬೊಂಡ ಎಂಬ ಹೆಸರುಗಳುಂಟು. ಎಳನೀರನ್ನು ಉಪಯೋಗಿಸುವಂತೆ ತಾಟಿನುಂಗನ್ನು ಬಳಸುವುದಿದೆ. ಹಣ್ಣಾದಾಗ ಇದರ ಮೃದುಭಾಗ ಗಟ್ಟಿಯಾಗಿ ಮೂಳೆಯಂತ ತಿರುಳಾಗುತ್ತದೆ. ಬೀಜ ಮೊಳೆಯುವಾಗ ಬೇಳೆ ಹಾಲಿನ ಬಣ್ಣವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ.

ತಾಳೆ ಮರದ ಹಣ್ಣು
ತಾಳೆ ಮರ

ತಾಳೆಮರದ ಸ್ವಾಭಾವಿಕ ವೃದ್ಧಿ ಬೀಜಗಳ ಮೂಲಕ ನಡೆಯುವುದು. ಬೆಳೆವಣಿಗೆಯ ಪ್ರಾರಂಭಿಕ ಹಂತಗಳಲ್ಲಿ ಕಾಂಡದ ಭೂಗತ ಭಾಗ ಮಾತ್ರ ಗಾತ್ರದಲ್ಲಿ ಹೆಚ್ಚುತ್ತದೆ. ಕಾಂಡದ ಮೇಲ್ಭಾಗ ಲಂಬಿತಗೊಂಡು ವಿಶಿಷ್ಟ ರೀತಿಯ ಕಪ್ಪು ಕಾಂಡವಾಗಿ ಬೆಳೆಯುವುದು 15-20 ವರ್ಷಗಳ ತರುವಾಯ ಮಾತ್ರ.

ತಾಳೆಮರದ ಹೂಗೊಂಚಲಿನಿಂದ ಹೆಂಡವನ್ನು ಇಳಿಸುತ್ತಾರೆ. ಹೊಸದಾಗಿ ಇಳಿಸಿದ ರಸಕ್ಕೆ ನೀರಾ ಎಂದು ಹೆಸರು. ಇದರಲ್ಲಿ 12% ರಷ್ಟು ಸೂಕ್ರೋಸ್ ಉಂಟು. ಇದನ್ನು ಸರಿಯಾಗಿ ಸಂಸ್ಕರಿಸದಿದ್ದರೆ ಹುದುಗಲು ಪ್ರಾರಂಭಿಸಿ ಹೆಂಡವಾಗುತ್ತದೆ. ನೀರಾ ಮಧುರವಾದ ವಾಸನೆಯಿಂದ ಕೂಡಿದ ಸಿಹಿ ರಸ.ಇದರ ಬಣ್ಣ ಬಿಳಿ, ಇದರಲ್ಲಿ ಸಕ್ಕರೆಯೊಂದೇ ಅಲ್ಲದೆ ಯೀಸ್ಟ್ ಕೂಡ ಉಂಟು. ಇದಕ್ಕೆ ಔಷಧಿ ಗುಣಗಳಿವೆಯೆಂದೂ ಹೇಳಲಾಗಿದೆ. ಇದು ಉತ್ತೇಜಕ ಮತ್ತು ಕಫ ಹಾರಿ, ತಾಳೆಮರದ ನೀರಾದಿಂದ ಬೆಲ್ಲ ಮಾಡುವುದೂ ಉಂಟು. 2-3 ತಿಂಗಳಿನ ಎಳೆಯ ಸಸಿಯಲ್ಲಿ ಪಿಷ್ಟ ಹೆಚ್ಚಾಗಿರುತ್ತದಾಗಿ ಇದು ತಿನ್ನಲು ಯೋಗ್ಯವಾಗಿದೆ. ಕೆಲವು ವೇಳೆ ಇದರಿಂದ ಪಿಷ್ಟವನ್ನು ಉತ್ಪಾದಿಸುವುದುಂಟು. ಎಲೆಗಳ ತೊಟ್ಟಿನಲ್ಲಿ ತಂತಿಯಂತೆ ಗಟ್ಟಿಯಾಗಿರುವ ನೀಳವಾದ ನಾರು ಉಂಟು. ಈ ನಾರಿನಿಂದ ಬ್ರಷ್ ಮತ್ತು ಬರಲುಗಳನ್ನು ತಯಾರಿಸಲಾಗುತ್ತದೆ. ನೀರಾ ಇಳಿಸುವುದಕ್ಕೆ ಮೊದಲು ಹಳೆಯ ಎಲೆಗಳನ್ನು ಕತ್ತರಿಸಿ ತೊಟ್ಟಿನ ತುದಿಯನ್ನು ಜಜ್ಜಿ ತೊಟ್ಟನ್ನು ಪಟ್ಟೆ ಪಟ್ಟೆಗಳಾಗಿ ಪ್ರತ್ಯೇಕಿಸಲಾಗುತ್ತದೆ. ಮರಕ್ಕೆ ಮೊಳೆಗಳನ್ನು ಬಡಿದು, ಈ ಪಟ್ಟೆಗಳನ್ನು ಬಾಚಿದರೆ ಮೃದು ಅಂಗಾಂಶದಿಂದ ನಾರು ಪ್ರತ್ಯೇಕಗೊಳ್ಳುತ್ತದೆ. ಈ ನಾರಿಗೆ ಬ್ಯಾಸೈನ್ ಎಂದು ಹೆಸರು. ತೊಟ್ಟಿನ ಅಂಚಿನ ಭಾಗದಿಂದ ಲಭಿಸುವ ನಾರು ಉತ್ತಮದರ್ಜೆಯದು. ನಾರು ತೆಗೆಯುವುದು ಒಂದು ಗೃಹ ಕೈಗಾರಿಕೆ, ಕೃಷ್ಣಾ, ಗೋದಾವರಿ, ತಿನ್ನವೆಲ್ಲಿ ಜಿಲ್ಲೆಗಳಲ್ಲಿ, ತಿರುವಾಂಕೂರಿನ ದಕ್ಷಿಣ ಭಾಗದಲ್ಲಿ ಈ ಕೈಗಾರಿಕೆ ಹೆಚ್ಚು. ನಾರನ್ನು ವಿವಿಧ ದರ್ಜೆಗಳಾಗಿ ವಿಂಗಡಿಸಿ 15-45 ಸೆಂ.ಮೀ. ಉದ್ದಕ್ಕೆ ಕತ್ತರಿಸಿ, ನೇರಳೆ ಕಂದು ಬಣ್ಣಕೊಟ್ಟು ಕಂತೆಗಳಾಗಿ ಕಟ್ಟಿ ಸಿದ್ಧಪಡಿಸುವರು. ಮರಗಳನ್ನು ಕತ್ತರಿಸಿ, ಸರಗಳನ್ನು ಮಾಡಿ ಗುಡಿಸಲುಗಳ ನಿರ್ಮಾಣಕ್ಕೆ ಉಪಯೋಗಿಸುತ್ತಾರೆ. ಮರಗಳ ಒಳಗಿನ ಭಾಗವನ್ನು ತೆಗೆದು ಕೊಳವೆಯನ್ನಾಗಿ ಮಾಡಿ ನೀರು ಹಾಯಿಸಲು ಉಪಯೋಗಿಸುವರು. ಎಲೆಗಳಿಂದ ಬೀಸಣಿಗೆ, ಛತ್ರಿ, ಬುಟ್ಟಿ ಮತ್ತು ಚಾಪೆಗಳನ್ನು ಮಾಡುತ್ತಾರೆ. ಮರದಿಂದ ಕಪ್ಪಾದ ಗೋಂದು ದೊರೆಯುತ್ತದೆ. ಆದರೆ ಕರಾವಳಿ ಪ್ರದೇಶದ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುವ ತಾಳೆ ಹಣ್ಣು (ತಾಟಿ ಹಣ್ಣು, ಐಸ್‌ ಆ್ಯಪಲ್‌ ಅಥವಾ ಈರೋಳ್) ಜನರ ಕಣ್ಸೆಳೆಯುತ್ತದೆ ಎಂದು ಹೇಳಬಹುದು.

ಅದರಲ್ಲೂ ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ತಾಟಿ ಹಣ್ಣಿನ ಜ್ಯೂಸ್ ಅಥವಾ ಈ ಹಣ್ಣಿನ ತೊಳೆಗಳನ್ನು ತಿನ್ನಬೇಕು ಎಂದು ಪ್ರತಿಯೊಬ್ಬರೂ ಸಹ ಅಂದುಕೊಳ್ಳುತ್ತಾರೆ. ಅದು ಅಲ್ಲದೆ ಇದು ವರ್ಷಕ್ಕೆ ಕೇವಲ ಒಂದು ಬಾರಿ ಬರುವ ಬೆಳೆ ಮಾತ್ರ.

ತಾಳೆ ಮರದ ಹಣ್ಣು
ತಾಟಿ ಹಣ್ಣು

ನೋಡಲು ಪುಟ್ಟ ತೆಂಗಿನ ಕಾಯಿ ರೀತಿ ಕಾಣುವ ತಾಟಿ ಹಣ್ಣುಗಳು ಮರದಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತವೆ. ತೆಂಗಿನಕಾಯಿಯ ರೀತಿ ಇದನ್ನು ಸಿಪ್ಪೆ ಸುಲಿದು ಒಳಗೆ ಹಲಸಿನ ತೊಳೆಯಂತಹ ಮೂರು ತೊಳೆಗಳು ಕಂಡುಬರುತ್ತವೆ.

ತಿನ್ನಲು ಸ್ವಲ್ಪ ಹುಳಿ ಮತ್ತು ಸಿಹಿ ಪ್ರಭಾವವನ್ನು ಹೊಂದಿರುವ ಇವುಗಳು ಹೆಂಡ ತಯಾರು ಮಾಡುವಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತವೆ ಎಂದು ಹೇಳುತ್ತಾರೆ. ತಾಟಿ ಹಣ್ಣಿನ ಅಥವಾ ತಾಳೆ ಹಣ್ಣಿನ ಕೆಲವು ಆರೋಗ್ಯ ಉಪಯೋಗಗಳು

​ದೇಹದ ತಾಪಮಾನವನ್ನು ನಿರ್ವಹಣೆ ಮಾಡುತ್ತವೆ ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರಿಗೂ ತಮ್ಮ ದೇಹದ ತಾಪಮಾನ ಅಧಿಕವಾಗಿ ಕಂಡುಬರುತ್ತದೆ. ಆದರೆ ಕೆಲವರು ಇದನ್ನು ತಪ್ಪಾಗಿ ಜ್ವರ ಎಂದು ಭಾವಿಸುತ್ತಾರೆ. ಏಕೆಂದರೆ ಅಷ್ಟರಮಟ್ಟಿಗೆ ಬೇಸಿಗೆಯ ಬಿಸಿಲಿನಿಂದ ಬಳಲಿ ಸುಸ್ತಾಗಿರುತ್ತಾರೆ.

ಈ ಹಣ್ಣಿನಲ್ಲಿ ದೇಹದ ತಾಪಮಾನವನ್ನು ತಂಪು ಮಾಡುವ ಗುಣ ಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಇವುಗಳಿಂದ ಜ್ಯೂಸ್ ತಯಾರು ಮಾಡಿ ಸವಿಯಬಹುದು.​ಪೌಷ್ಟಿಕ ಸತ್ವಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ

ಮೊದಲೇ ಹೇಳಿದಂತೆ ತಾಟಿ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಕೆಲವು ಬಗೆಯ ಪೌಷ್ಟಿಕ ಸತ್ವಗಳು ಎನ್ನಲಾದ ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ.
ಬೇಸಿಗೆ ಕಾಲದಲ್ಲಿ ಕೆಲವರಿಗೆ ರಕ್ತದ ಒತ್ತಡದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸುಸ್ತು, ಆಯಾಸ ಜೊತೆಗೆ ಹೃದಯದ ತೊಂದರೆಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತಾಟಿ ಹಣ್ಣಿನ ಸೇವನೆ ಮಾಡಬಹುದು.

ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ನೋಡಿಕೊಂಡು ದೇಹದಲ್ಲಿರುವ ಎಲ್ಲಾ ಬಗೆಯ ಎಲೆಕ್ಟ್ರೋಲೈಟ್ ಅಂಶಗಳ ಸಮತೋಲನವನ್ನು ಕಾಯ್ದುಕೊಂಡು ಅತ್ಯುತ್ತಮ ಆರೋಗ್ಯ ನಿರ್ವಹಣೆಯನ್ನು ಮಾಡಿಕೊಳ್ಳಬಹುದು.


ಸರ್ವ ರೋಗಗಳಿಗೂ ದಿವ್ಯೌಷಧಿ ತಾಳೆ ಹಣ್ಣು. ನಿರ್ಜಲೀಕರಣ ಸಮಸ್ಯೆಯಿಂದ ದೂರವಾಗಬಹುದು
ಬೇಸಿಗೆ ಕಾಲದಲ್ಲಿ ದೇಹದಿಂದ ನೀರಿನ ಅಂಶ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ರೂಪದಲ್ಲಿ ಹರಿದು ಹೊರಬರುತ್ತದೆ. ಇದರ ಜೊತೆಗೆ ನಾವು ಸೇವನೆ ಮಾಡುವ ಆಹಾರ ಜೀರ್ಣ ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ನೀರಿನ ಅಂಶ ಬಳಕೆಯಾಗುತ್ತದೆ.

ಮೂತ್ರ ವಿಸರ್ಜನೆಯಲ್ಲಿ ಅಪಾರ ಪ್ರಮಾಣದ ನೀರಿನ ಅಂಶ ನಮ್ಮ ದೇಹದಿಂದ ನಷ್ಟವಾಗುತ್ತದೆ. ಆದರೆ ಈ ಎಲ್ಲಾ ವಿಚಾರಗಳಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಬೇರೆ ಹಣ್ಣಿನ ಜ್ಯೂಸ್ ಗಳನ್ನು ಸೇವನೆ ಮಾಡುವ ಜೊತೆಗೆ ತಾಟಿ ಹಣ್ಣಿನ ರಸ ಸೇವನೆ ಕೂಡ ತುಂಬಾ ಅತ್ಯಗತ್ಯ ಎಂದು ಹೇಳಬಹುದು.

ತಾಳೆ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಕ್ಯಾಲೊರಿ ಅಂಶಗಳು ಇರುವ ಕಾರಣ ದೇಹದ ಶಕ್ತಿ ಮತ್ತು ಸದೃಢತೆಗೆ ಯಾವುದೇ ಕೊರತೆ ಉಂಟಾಗುವುದಿಲ್ಲ.
ಬೇಸಿಗೆ ಕಾಲದಲ್ಲಿ ವಿಪರೀತ ಆಯಾಸ ಸುಸ್ತು ಎದುರಿಸುವವರು ಈ ಹಣ್ಣಿನ ತೊಳೆಗಳನ್ನು ಆಗಾಗ ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಇದರಿಂದ ದೀರ್ಘ ಕಾಲದವರೆಗೆ ದೇಹದಲ್ಲಿ ಚೈತನ್ಯ ಹಾಗೆ ಉಳಿಯುತ್ತದೆ. ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯದ ಸಾಕಷ್ಟು ಸಮಸ್ಯೆಗಳು ಇದರಿಂದ ದೂರವಾಗುತ್ತವೆ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಗಮನಿಸಬೇಕಾದ ಒಂದು ಅಂಶ
ತಾಟಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ಕ್ಯಾಲೊರಿ ಅಂಶಗಳು ಇರುವ ಕಾರಣ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಸ್ವಲ್ಪ ಆಲೋಚನೆ ಮಾಡಬೇಕು. ಏಕೆಂದರೆ ಇದರಿಂದ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಸಕ್ಕರೆಯನ್ನು ನಿಯಮಿತವಾಗಿ ಬಳಕೆ ಮಾಡಿ.

ಐಸ್ ಆಪಲ್ ಅಥವಾ ತಾಳೆ ಹಣ್ಣಿನ ಮತ್ತೊಂದು ಅದ್ಭುತ ಆರೋಗ್ಯ ಪ್ರಯೋಜನಗಳೆಂದರೆ ಇದು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಖನಿಜಗಳು ಮತ್ತು ಪೋಷಕಾಂಶಗಳನ್ನು ಸರಿಯಾದ ಸಮತೋಲನದಲ್ಲಿ ಇಡುತ್ತದೆ.

ತಾಳೆ ಹಣ್ಣುಗಳು ಫೈಟೊಕೆಮಿಕಲ್ಸ್, ಆಂಥೋಸಯಾನಿನ್ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಗೆಡ್ಡೆಗಳು ಮತ್ತು ಸ್ತನಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗುಲಾಬಿ

ಹೂವುಗಳ ರಾಣಿ ಗುಲಾಬಿ

ರನ್ನಕವಿ

ಕನ್ನಡ ಸಾಹಿತ್ಯದ ಕವಿ ರತ್ನ,ಕವಿಚಕ್ರವರ್ತಿ ರನ್ನ