ಸಾಮಾನ್ಯವಾಗಿ ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ, ಕೆಮ್ಮು ಮತ್ತು ಶೀತ ಬರುವುದು ಸಹಜ. ಅದು ಈಗ ಕರೋನ ರಾಜ್ಯಭಾರ ಮಾಡುತ್ತಿದೆ. ಹಿಂದೆ ಎಲ್ಲ ಶೀತ,ಕೆಮ್ಮು ಮಾಮೂಲಿಯಾಗಿತ್ತು. ಈಗ ಒಂದು ಕೆಮ್ಮು ಬಂದರೂ ನೋಡುವ ದೃಷ್ಟಿ ಬೇರೆ ಇರುತ್ತದೆ. ಪರಿಸ್ಥಿತಿ ಅಷ್ಟು ಕೆಟ್ಟುಹೋಗಿದೆ. ಮಾತ್ರೆಗಳ ಮೊರೆ ಹೋಗುವ ಮೊದಲು ನೈಸರ್ಗಿಕ ಚಿಕಿತ್ಸೆಯೇ ಉತ್ತಮವಾಗಿದ್ದು. ಮನೆಮದ್ದುಗಳನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಅನುಸರಿಸುತ್ತಾ ಬಂದಿದ್ದಾರೆ. ಒಣ ಕೆಮ್ಮಿನ ಸಮಸ್ಯೆಗೆ ಆಸ್ಪತ್ರೆಯ ಔಷಧಿಗಳಿಗಿಂತ ಮನೆ ಮದ್ದುಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಶುಂಠಿ, ಜೇನು ತುಪ್ಪ, ಅರಿಶಿನ ಇತ್ಯಾದಿಗಳು.
ಕೆಲವೊಂದು ಮನೆಯಲ್ಲಿ ತಯಾರಿಸಬಹುದಾದ ಕಷಾಯ ಅಥವಾ ಮನೆಮದ್ದುಗಳು
೧.ಕರಿಮೆಣಸು ಕಷಾಯ :

ಕರಿಮೆಣಸು ಕಷಾಯ
ಬೇಕಾಗುವ ಸಾಮಗ್ರಿಗಳು- ಕರಿಮೆಣಸಿನ ಪುಡಿ,ಬೆಲ್ಲ, ಈರುಳ್ಳಿ,ಕೊತ್ತಂಬರಿ ಬೀಜ,ಶುಂಠಿ, ಜೀರಿಗೆ,ನೀರು.
ಮಾಡುವ ವಿಧಾನ: ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಕರಿಮೆಣಸು ಪುಡಿ (ಕುಟ್ಟಿ ಪುಡಿ ಮಾಡಿದ್ದರೆ ಒಳ್ಳೆಯದು),ಜೀರಿಗೆ, ಕೊತ್ತಂಬರಿ (ಕುಟ್ಟಿ ಪುಡಿ ಮಾಡಿ),ಶುಂಠಿ ಜಜ್ಜಿ ಹಾಕಿ,ಬೆಲ್ಲ, ಅರ್ದ ಈರುಳ್ಳಿ ಕತ್ತರಿಸಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಶೋಧಿಸಿ ಕುಡಿಯಿರಿ. ಈ ಕಷಾಯ ಒಂದು ದಿನಕ್ಕಿಂತ ಹೆಚ್ಚು ದಿನ ಇಡಬೇಕಾದರೆ ಈರುಳ್ಳಿ ಹಾಕುವುದು ಬೇಡ.
೨.ಅರಿಶಿನ ಮಿಶ್ರಿತ ಹಾಲು :

ಅರಿಶಿನ ಮಿಶ್ರಿತ ಹಾಲು
ನಿಮ್ಮ ಗಂಟಲು ತೆರವುಗೊಳಿಸಲು ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿದರೆ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು: ಟೀ ಚಮಚ ಅರಿಶಿನ ಹುಡಿ,ಒಂದು ಲೋಟ ಹಾಲು, ಅರ್ಧಕಪ್ ನೀರು,2-3 ಚೆನ್ನಾಗಿ ಜಜ್ಜಿದ ಕರಿಮೆಣಸು,
ಮಾಡುವ ವಿಧಾನ: ಹಸಿ ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಿ,ನಂತರ ಖಾಲಿ ಗಲೋಟಕ್ಕೆ ಹಾಲು ಹಾಕಿ,ಅರಿಶಿನ ಪುಡಿ ಮತ್ತು ಜಜ್ಜಿರುವ ಕರಿಮೆಣಸಿನ ಕಾಳು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.ಕುಡಿಯುವಾಗ ಹಾಲು ಉಗುರುಬೆಚ್ಚಗೆ ಇದ್ದರೆ ಒಳ್ಳೆಯದು.ರಾತ್ರಿ ಮಲಗುವ ಮೊದಲು ಇದನ್ನು ಒಂದು ವಾರಗಳ ಕಾಲ ಸೇವಿಸುತ್ತಾ ಬಂದರೆ, ಆರೋಗ್ಯಕ್ಕೂ ಒಳ್ಳೆಯದು, ಕೆಮ್ಮು ಕೂಡ ಕೂಡಲೇ ಕಡಿಮೆ ಆಗುವುದು. ಹಾಲು ಯಾವಾಗಲು ಬಿಸಿ ಬಿಸಿ ಕುಡಿಯಬೇಕು.
೩.ಕೆಮ್ಮಿನ ಸಿರಪ್:

ಬೇಕಾಗುವ ಸಾಮಗ್ರಿಗಳು : ಒಂದು ಕಪ್ ನೀರು, ಎರಡು ಇಂಚು ಶುಂಠಿ, ಒಂದು ಚಮಚ ಸಕ್ಕರೆ, ಎರಡು ಚಮಚ ಜೇನುತುಪ್ಪ, ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಎರಡು ಚಮಚ ನಿಂಬೆ ರಸ
ಮಾಡುವ ವಿಧಾನ: ಸಕ್ಕರೆಯೊಂದಿಗೆ ಬಾಣಲೆಗೆ ನೀರನ್ನು ಸೇರಿಸಿ. ಅದನ್ನು ಚೆನ್ನಾಗಿ ಕುದಿಸಿ. ಈಗ ಮಿಶ್ರಣಕ್ಕೆ ಸ್ವಲ್ಪ ತುರಿದ ಶುಂಠಿಯನ್ನು ಸೇರಿಸಿ.ಸಕ್ಕರೆ ಮತ್ತು ಕರಿಮೆಣಸಿನ ಪುಡಿ ಸೇರಿಸಿ.ಚೆನ್ನಾಗಿ ಕಲಸಿ ಮತ್ತು ಮಿಶ್ರಣವು ಸುಮಾರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಯಲು ಬಿಡಿ ಮತ್ತು ದಪ್ಪವಾಗಲು ಬಿಡಿ.ಕೊನೆಯದಾಗಿ, ನಿಂಬೆ ರಸವನ್ನು ಸೇರಿಸಿ ಉರಿ ನಿಲ್ಲಿಸಿ.ಇದನ್ನು ಸಂಗ್ರಹಿಸಿ ಇಡಬಹುದು.
೪.ಅಮೃತ ಬಳ್ಳಿ ರಸ/ಕಷಾಯ :

ದೀರ್ಘಕಾಲದ ಕೆಮ್ಮಿನ ಸಂದರ್ಭದಲ್ಲಿ ಅಮೃತ ಬಳ್ಳಿ ರಸ ಸೇವಿಸಿದರೆ ಒಳ್ಳೆಯ ಪರಿಣಾಮ ಕಾಣಬಹುದು.
ಬೇಕಾಗುವ ಸಾಮಾಗ್ರಿಗಳು : ನೀರು,ಅಮೃತಬಳ್ಳಿಯ ರಸ,
ಮಾಡುವ ವಿಧಾನ: ಎರಡು ಟೇಬಲ್ ಚಮಚ ಅಮೃತ ಬಳ್ಳಿ ರಸ,ಸಮ ಪ್ರಮಾಣದ ನೀರನ್ನು ಸೇರಿಸಿ, ದಿನಕ್ಕೆ ಒಂದು ಬಾರಿ ಸೇವಿಸಿ.ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸಿ. ಸಮಸ್ಯೆ ಗುಣಮುಖವಾಗುವವರೆಗೂ ಇದನ್ನು ಸೇವಿಸಬಹುದು.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ವಾತಾ, ಪಿತ್ತಾ ಮತ್ತು ಕಫ ಎಂಬ ಮೂರು ದೋಶಗಳಲ್ಲಿ ಸಮತೋಲನವನ್ನು ತರುತ್ತದೆ.ಇದು ಅಲರ್ಜಿಯ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಹೊಗೆ, ಮಾಲಿನ್ಯ ಅಥವಾ ಪರಾಗಕ್ಕೆ ಅಲರ್ಜಿಯ ಪ್ರತಿಕ್ರಿಯೆಯಿಂದ ಉಂಟಾಗುವ ಕೆಮ್ಮಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
೫.ಕಫಕ್ಕೆ ಪಾಕ :

ಬೇಕಾಗುವ ಸಾಮಾಗ್ರಿಗಳು: ನಿಂಬೆ,ಕಲ್ಲು ಸಕ್ಕರೆ ಮತ್ತು ಕಾಳುಮೆಣಸು
ಮಾಡುವ ವಿಧಾನ: ನಿಂಬೆಯ ರಸ ತೆಗೆದು,ಕಲ್ಲುಸಕ್ಕರೆ ಮತ್ತು ಕಾಳುಮೆಣಸು ಪುಡಿ ಹಾಕಿ ಕಲಸಿ, ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
೬.ಜೇನುತುಪ್ಪ ಉಪಯೋಗಿಸಿ :

ಜೇನುತುಪ್ಪವು ದೊಡ್ಡ ಉರಿಯೂತ ಗುಣಲಕ್ಷಣಗಳ ನಿವಾರಣೆಗೆ ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು: ಟೀ ಚಮಚ ಜೇನುತುಪ್ಪ, ಟೀ ಚಮಚ ಮುಲೇತಿ ಪುಡಿ, ಟೀ ಚಮಚ ದಾಲ್ಚಿನ್ನಿ ಪುಡಿ.
ಮಾಡುವವಿಧಾನ: ಅರ್ಧ ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀ ಚಮಚ ಜೇನುತುಪ್ಪ, .ಒಂದು ಸಣ್ಣ ಟೀ ಚಮಚ ಮುಲೇತಿ ಪುಡಿ ಮತ್ತು ಒಂದು ಸಣ್ಣ ಟೀ ಚಮಚ ದಾಲ್ಚಿನ್ನಿ ಪುಡಿ ಸೇರಿಸಿ, ಚೆನ್ನಾಗಿ ಕಲಸಿ ಸೇವಿಸಿ. ಪ್ರತಿ ದಿನ ಬೆಳಿಗ್ಗೆ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಬೇಕು. ಪರಿಣಾಮಕಾರಿ ಕೆಲಸ ಮಾಡುವುದರ ಮೂಲಕ ಕೆಮ್ಮನ್ನು ನಿಯಂತ್ರಿಸುತ್ತದೆ.
೭. ಕರಿಮೆಣಸು ಉಪಯೋಗಿಸಿ ಇನ್ನೊಂದು ಮದ್ದು :

ಕರಿಮೆಣಸು ಕೆಮ್ಮಿನ ತೊಂದರೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು: ಒಂದು ಚಮಚ ಕರಿಮೆಣಸಿನ ಪುಡಿ ,ಒಂದು ಚಮಚ ದೇಸಿ ತುಪ್ಪ.
ಮಾಡುವ ವಿಧಾನ: ಒಂದು ಬೌಲ್ ನಲ್ಲಿ ಅರ್ಧ ಟೀ ಚಮಚ ಕರಿಮೆಣಸಿನ ಪುಡಿ ಮತ್ತು ಒಂದು ಟೀ ಚಮಚ ದೇಸಿ ತುಪ್ಪ ಸೇರಿಸಿ. ಎರಡು ಸಾಮಾಗ್ರಿಯನ್ನು ಚೆನ್ನಾಗಿ ಮಿಶ್ರಗೊಳಿಸಿ, ನಂತರ ಅದನ್ನು ಸೇವಿಸಿ.ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಕನಿಷ್ಠ ಎರಡು ಮೂರು ಬಾರಿ ಈ ಮಿಶ್ರಣವನ್ನು ಸೇವಿಸಬೇಕು.
೮. ದಾಳಿಂಬೆ ರಸ ಉಪಯೋಗಿಸಿ :

ದಾಳಿಂಬೆ ರಸದಲ್ಲಿ ವಿಟಮಿನ್ ಎ ಮತ್ತು ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು: ಅರ್ಧ ಕಪ್ ದಾಳಿಂಬೆ ರಸ,ಒಂದು ಚಿಟಕೆ ಶುಂಠಿ ಪುಡಿ, ಒಂದು ಚಿಟಕೆ ಇಪ್ಪಲಿ/ಪಿಪ್ಪಾಲಿ ಪುಡಿ
ಮಾಡುವ ವಿಧಾನ: ಒಂದು ಬೌಲ್ ಅಲ್ಲಿ ಅರ್ಧ ಕಪ್ ದಾಳಿಂಬೆ ರಸ ಸೇರಿಸಿ. ಅದಕ್ಕೆ ಒಂದು ಚಿಟಕೆ ಶುಂಠಿ ಪುಡಿ ಮತ್ತು ಒಂದು ಚಿಟಕೆ ಇಪ್ಪಲಿ ಪುಡಿ ಸೇರಿಸಿ, ಚೆನ್ನಾಗಿ ಕಡದಿಸಿ ಕುಡಿಯಬೇಕು.ಈ ವಿಧಾನವನ್ನು ಮಕ್ಕಳು ಹಾಗೂ ವಯಸ್ಕರು ಸಹ ಸೇವಿಸಬಹುದು. ವಯಸ್ಕರು ಶುಂಠಿಯ ಬದಲು ಕರಿಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಬಹುದು. ಗಣನೀಯವಾಗಿ ಈ ಮಿಶ್ರಣವನ್ನು ಕುಡಿದರೆ ಕೆಮ್ಮು ಶಮನವಾಗುವುದು.
೯.ಮಸಾಲೆ ಚಹಾ :

ಬೇಕಾಗುವ ಸಾಮಾಗ್ರಿಗಳು: 1/2 ಟೀ ಚಮಚ ಶುಂಠಿ ಪುಡಿ,ಒಂದು ಚಿಟಕಿ ದಾಲ್ಚಿನ್ನಿ,1-2 ಲವಂಗ, 1ಏಲಕ್ಕಿ
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಕುದಿಯಲು ಇಡಿ.ಅದಕ್ಕೆ ಅರ್ಧಟೀ ಚಮಚ ಶುಂಠಿ ಪುಡಿ, ಒಂದು ಚಿಟಕಿ ದಾಲ್ಚಿನ್ನಿ ಮತ್ತು 1 ಅಥವಾ 2 ಲವಂಗ ,1ಏಲಕ್ಕಿ ಹಾಕಿ. ಚೆನ್ನಾಗಿ ಕುದಿ ಬಂದ ಬಳಿಕ, ಉರಿಯಿಂದ ಕೆಳಗಿಳಿಸಿ. ಇನ್ನು ಮಿಶ್ರಣವನ್ನು ಸೋಸಿ, ಚಹಾದಂತೆ ಬಿಸಿ-ಬಿಸಿ ಇರುವಾಗಲೇ ಸೇವಿಸಿ.ಸಿಹಿ ಬೇಕಾದಲ್ಲಿ ಬೆಲ್ಲ ಅಥವಾ ಕಲ್ಲು ಸಕ್ಕರೆ ಸೇರಿಸಬಹುದು.
೧೦.ಬೆಳ್ಳುಳ್ಳಿ ಉಪಯೋಗಿಸಿ :

ಬೇಕಾಗುವ ಸಾಮಗ್ರಿಗಳು: ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ
ಮಾಡುವ ವಿಧಾನ: ತಳ ಆಳವಿರುವ ಪಾತ್ರೆಯಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿ ಮಾಡಿಕೊಳ್ಳಿ, ಬಳಿಕ ಇದಕ್ಕೆ, ಬೆಳ್ಳುಳ್ಳಿಯ ಒ೦ದೆರಡು ದಳವನ್ನು ಜಜ್ಜಿ ಇದಕ್ಕೆ ಸೇರಿಸಿಕೊಂಡು ಹುರಿಯಬೇಕು, ನಂತರ ಈ ಮಿಶ್ರಣವನ್ನು ಒಂದು ದೊಡ್ಡ ಗ್ಲಾಸ್ನಷ್ಟು ಉಗುರು ಬೆಚ್ಚಗಿನ ಬಿಸಿನೀರಿಗೆ ಸೇರಿಸಿ ಹಾಗೂ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಕಲಸಿಕೊಂಡು, ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ, ಕೆಮ್ಮಿನ ಸಮಸ್ಯೆ ಕೂಡಲೇ ಕಡಿಮೆಯಾಗುತ್ತಾ ಬರುತ್ತದೆ.
ಧನ್ಯವಾದಗಳು
GIPHY App Key not set. Please check settings