in ,

ಅನ್ನ ದೇವರು

ಅನ್ನ ದೇವರು
ಅನ್ನ ದೇವರು

ಅಕ್ಕಿಯು ಒಂದು ಏಕದಳ ಸಸ್ಯವಾದ ಆರೈಝಾ ಸಟೀವಾದ ಬೀಜ. ಒಂದು ಧಾನ್ಯವಾಗಿ ವಿಶ್ವದ ಮಾನವ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಅದು ಅತ್ಯಂತ ಪ್ರಮುಖವಾದ ಅಗತ್ಯದ ಆಹಾರ ವಾಗಿದೆ, ವಿಶೇಷವಾಗಿ ಭಾರತದ ಕರ್ನಾಟಕ, ಕೇರಳ, ಆಂದ್ರಪ್ರದೇಶಗಳಲ್ಲಿ ಏಷ್ಯಾ, ದಕ್ಷಿಣ ಏಷ್ಯಾ, ದಕ್ಷಿಣಪೂರ್ವ ಏಷ್ಯಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕ, ಮತ್ತು ವೆಸ್ಟ್ ಇಂಡೀಸ್‌ನಲ್ಲಿ. ಅದು ಮೆಕ್ಕೆ ಜೋಳದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಉತ್ಪಾದನೆಯಾಗುವ ಧಾನ್ಯವಾಗಿದೆ.

ಅನ್ನವೆಂದರೆ ಮನುಷ್ಯನ ಜೀವನದ ಜೀವಧಾತು, ಜೀವಧ್ವನಿಯಾಗಿದೆ. ಪುರಾಣ, ಮಹಾಕಾವ್ಯಗಳಲ್ಲಿ ಅನ್ನ ಪ್ರತಿಮೆಯಾಗಿ ಬಳಕೆಗೊಂಡಿದೆ. ಅನ್ನ ಬ್ರಹ್ಮ, ಅನ್ನದಾತ, ಅನ್ನಪೂರ್ಣೇಶ್ವರಿ, ಅನ್ನ ದಾಸೋಹ, ಅನ್ನದ ಋಣ ಎನ್ನುವ ಪದಗಳು ಅನ್ನಕ್ಕಿರುವ ಮಹತ್ವವನ್ನು ಹೇಳುತ್ತವೆ.

ಪ್ರಾಚೀನ ಕಾಲದ ಬಡ ಜನರು ಅಕ್ಕಿಯನ್ನು ವರ್ಷಕ್ಕೆ ಒಂದೆರಡು ಬಾರಿ, ಅದೂ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳಸುತ್ತಿದ್ದರು. ಸಂಕ್ರಾಂತಿಯ ಹಬ್ಬದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಯಲ್ಲಿ ಮುಖ್ಯವಾಗಿ ಬೆಳ್ತಕ್ಕಿ, ಕುಸುಬಲಕ್ಕಿ, ನುಚ್ಚಕ್ಕಿ ಎಂದು ಮೂರು ಪ್ರಧಾನ ವಿಭಾಗಗಳಿವೆ. ದೋಸೆಯಿಂದ ಹಿಡಿದು ಕರಿದ ತಿಂಡಿಗಳವರೆಗೂ ಅಕ್ಕಿ ಬಳಕೆ ಕಂಡು ಬರುತ್ತದೆ.
ಅಕ್ಕಿಯಲ್ಲಿ ಮಾಡುವಂತಹ ಬಗೆ ಬಗೆ ಖಾದ್ಯ-ಅಡುಗೆಗಳನ್ನು ಬಹುಶ: ಬೇರಾವುದೇ ಧಾನ್ಯಗಳಲ್ಲೂ ಮಾಡಲಾಗುವುದಿಲ್ಲ. ಅಕ್ಕಿಯ ಬಳಕೆಯ ಸುತ್ತ ಇರುವ ಆಚರಣೆಗಳಲ್ಲಿ ನಂಬಿಕೆಗಳು ಬಹಳ ಮುಖ್ಯ. ಗೌತಮನು ಇಡೀ ಮಾನವ ಜನಾಂಗವನ್ನು ಹತ್ತು ಭಾಗ ಮಾಡುವಾಗ ಅಕ್ಕಿಗೆ ಎರಡನೇ ಸ್ಥಾವನ್ನು ಕೊಟ್ಟಿದ್ದಾನೆ. ಶುಭಸಮಾರಂಭಗಳಲ್ಲಿ ಅದರಲ್ಲೂ ವಿವಾಹಕ್ಕೆ ಸಂಬಂಧ ಪಟ್ಟ ಕೆಲಸ ಕಾರ್ಯಗಳಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ.

ನಿಶ್ಚಿತಾರ್ಥ ಅಥವ ಒಪ್ಪಂದ ಶಾಸ್ತ್ರದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಶಾಸ್ತ್ರದ ಸಂದರ್ಭದಲ್ಲಿ ವಧುವಿನ ಮಡಿಲಿಗೆ ಸೇರಕ್ಕಿ, ಬೆಲ್ಲ,ಕೊಬ್ಬರಿ, ಹುರಿಗಡಲೆಗಳಿಂದ ಮಡಿಲು ತುಂಬಿ ಸೋಗ್ಲು ಕಟ್ಟುತ್ತಾರೆ. ಹರಸುವಾಗ ಅಕ್ಷತೆಯ ರೂಪದಲ್ಲೂ ಅಕ್ಕಿಯನ್ನ ಬಳಸಿ, ಅಕ್ಷತೆಯನ್ನು ವಧು-ವರರ ತಲೆಯ ಮೇಲೆ ಹಾಕಿ ಶುಭವನ್ನು ಹಾರೈಸುವರು.
ಮದುಮಗಳು ತವರಿಂದ ಹೊರಬರುವ ಸಂದರ್ಭದಲ್ಲಿ, ಅವಳ ತೌರು ಮನೆಯೊಳಗೆ ಅಪ್ಪ,ಅಣ್ಣ-ತಮ್ಮ, ಬಂಧು-ಬಳಗದವರನ್ನು ಕೂರಿಸಿ ಅವರ ತಲೆಯ ಮೇಲೆ ಮದುಮಗಳ ಕೈಯಿಂದ ಮೂರು ಬೊಗಸೆ ಅಕ್ಕಿಯನ್ನು ಎರಚುವಾಗ, ಮೂರು ಬಾರಿ ಆಕೆ “ನಮ್ಮಪ್ಪನ ಮನೆ ಹಾಲುಕ್ಕುವಂತೆ ಉಕ್ಕಲಿ”ಎಂದು ಹಾರೈಸುತ್ತಾ ಅಕ್ಕಿಯನ್ನು ಅವರ ಮೇಲೇರಚಿ ದು:ಖದಿಂದ ಕಣ್ತುಂಬಿ ಕೊಳ್ಳುತ್ತಾಳೆ.

ಅನ್ನ ದೇವರು
ಒಪ್ಪಂದ ಶಾಸ್ತ್ರ

ಧಾರೆಯಾದ ಬಳಿಕ ಮನೆದೇವರನ್ನು ತಂದ ನೀರಿನಲ್ಲಿ ಅಕ್ಕಿಯನ್ನು ನೆನೆಹಾಕಿ ಬೆಲ್ಲದನ್ನ ಮಾಡಿ ಬಂಧು-ಬಳಗದವರಿಗೆ ಹಂಚುವ ಪರಿಪಾಠವಿದೆ. ಹೊಸದಾಗಿ ಅತ್ತೆ ಮನೆ ಪ್ರವೇಶಿಸುವ ಸೊಸೆ ತಲೆಬಾಗಿಲ ಹೊಸ್ತಿಲಿನ ಮೇಲೆ ಅಕ್ಕಿ,ಬೆಲ್ಲವನ್ನಿಟ್ಟ ಸೇರನ್ನು ತನ್ನ ಬಲಗಾಲಿನಿಂದ ಒದ್ದು ಮನೆಯನ್ನು ಪ್ರವೇಶಿಸುತ್ತಾಳೆ. ಇದಕ್ಕೆ “ಪಡಿಯಕ್ಕಿ” ಇಡುವ ಶಾಸ್ತ್ರ ಎನ್ನುತ್ತಾರೆ.
ಸ್ತ್ರೀ ಗರ್ಭಿಣಿಯಾದಾಗ ಅವಳ ಬಸಿರೊಸಗೆಯ ಸಮಯದಲ್ಲಿ ಮಡಿಲಕ್ಕಿಶಾಸ್ತ್ರ ಮಾಡುವರು. ವ್ಯಕ್ತಿಯು ಸತ್ತಾಗ ಅವನ/ಳ ಬಾಯಿಗೆ ಅಕ್ಕಿ ತುಂಬುತ್ತಾರೆ. ಹೀಗೆ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅಕ್ಕಿ ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂದು ಅಕ್ಕಿ ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಪ್ರಸಿದ್ದ ಧಾನ್ಯ.

ಕನಕದಾಸರ “ರಾಮಧಾನ್ಯ ಚರಿತೆ”ಯಲ್ಲಿ ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುತ್ತಿರುತ್ತವೆ. ಈ ವಿಷಯ ರಾಮನ ಕಿವಿಗೂ ಮುಟ್ಟಿ ಅವನು ಇವೆರಡನ್ನು ಕರೆಸಿ, ಅವರಿಬ್ಬರ ವಾದವನ್ನು ಕೇಳುತ್ತಾನೆ. ಮೊದಲು ಮಾತನಾಡಿದ ಭತ್ತ ಈ ಜಗತ್ತಿಗೆ ತನ್ನ ಅನಿವಾರ್ಯತೆ ಅಗತ್ಯತೆಗಳನ್ನು ಒತ್ತಿ ಹೇಳುತ್ತದೆ.


ಭತ್ತ : ಪ್ರಭು ರಾಗಿಗಿಂತ ನಾನೇ ಶ್ರೇಷ್ಠ. ಹೇಗೆಂದರೆ ಭೂಸುರರು ಬಳಸುವುದು ನನ್ನನ್ನೇ, ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ರೀತಿಯ ಜನರು ನನ್ನನ್ನು ಬಳಸುತ್ತಾರೆ. ನಾನಿಲ್ಲದೆ ಶುಭಕಾರ್ಯಗಳಾಗಲಿ ಅಶುಭಕಾರ್ಯಗಳಾಗಲಿ ನಡೆಯುವುದಿಲ್ಲ. ಈ ಲೋಕವು ನನ್ನನ್ನು ಹೆಚ್ಚಾಗಿ ಬಳಸುವುದರಿಂದ ನಾನೇ ಹೆಚ್ಚು.

ಅನ್ನ ದೇವರು
ರಾಗಿ ಮತ್ತು ಭತ್ತ

ರಾಗಿ : ಮಹಾಪ್ರಭು ಪ್ರಪಂಚದಲ್ಲಿ ನನ್ನ ಬಳಕೆಯೇ ಹೆಚ್ಚು. ಹೇಗೆಂದರೆ ಈ ಲೋಕದಲ್ಲಿ ಶ್ರೀಮಂತರಿಗಿಂತ ಬಡವರೆ ಹೆಚ್ಚು. ನಾನು ಬಡವರ ಅನುರಾಗಿ. ಕೂಲಿ ಕೆಲಸ ಮಾಡುವವರಿಂದ ಹಿಡಿದು, ಶ್ರೀಮಂತರವರೆಗೂ ನನ್ನನ್ನು ಬಳಸುತ್ತಾರೆ. ನನ್ನನ್ನು ತಿಂದವರು ಬಲಶಾಲಿಗಳಾಗುತ್ತಾರೆ. ಹಿಟ್ಟಂ ತಿಂದವ ಬೆಟ್ಟವ ಕಿತ್ತಿಟ್ಟಂ ಎಂಬ ಗಾದೆ ನನ್ನನ್ನು ನೋಡೆ ಮಾಡಿದ್ದು ಆದುದರಿಂದ ನಾನೇ ಹೆಚ್ಚು.
ರಾಮನಿಗೆ ಇವರಿಬ್ಬರ ವಿತಂಡವಾದವನ್ನು ಕೇಳಿ ಸಿಟ್ಟು ಬಂದು ಅವೆರಡನ್ನು ಕಾರಾಗೃಹಕ್ಕೆ ತಳ್ಳುವಂತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ. ಒಂದಾರು ತಿಂಗಳು ತನ್ನ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಅವನ್ನು ಮರೆತು ಬಿಡುತ್ತಾನೆ. ಆರು ತಿಂಗಳ ನಂತರ ಅವುಗಳ ನೆನಪು ಬಂದು ಅವನ್ನು ವಿಚಾರಣೆಗೆ ಕರೆಸಿದಾಗ, ರಾಗಿ ಗುಂಡಣ್ಣನಂತೆ ಉರುಳಿ ಕೊಂಡು ಬರುತ್ತದೆ. ಭತ್ತ ಅನಾರೋಗ್ಯದಿಂದ ಸಾಯುವ ಸ್ಥಿತಿ ತಲುಪಿರುತ್ತದೆ.
ಆಗ ರಾಮ ಅವರಿಬ್ಬರಲ್ಲಿ ಯಾರು ಶ್ರೇಷ್ಠ ಈಗ ಹೇಳಿ ಎಂದಾಗ ಭತ್ತ ನಾಚಿಕೆಯಿಂದ ತಲೆ ತಗ್ಗಿಸುತ್ತದೆ. ರಾಮ ರಾಗಿಯನ್ನು ಕರೆದು ಅದನ್ನು ನೇವರಿಸಿ,ಅದಕ್ಕೆ “ರಾಮಧಾನ್ಯ” ಎಂಬ ಹೆಸರನ್ನು ಕೊಡುತ್ತಾನೆ. ಹೀಗಾಗಿ ಭತ್ತ ಪುರಾಣಗಳ ಕಾಲದಿಂದಲೂ ಇರುವುದು ಖಚಿತವಾಗುತ್ತದೆ. ಭತ್ತ ಬಾಲ್ಯವಾದರೆ, ಅಕ್ಕಿ ಯೌವನ, ಅನ್ನ ಮುಪ್ಪು. ಏಕೆಂದರೆ ಅಕ್ಕಿಯನ್ನು ಬೇಯಿಸಿದರೆ ಅದು ಅಂತ್ಯವಾದಂತೆ. ಅನ್ನವಾದ ನಂತರ ಅದಕ್ಕೆ ಮರು ಹುಟ್ಟು ಇರುವುದಿಲ್ಲ.

• ಅಕ್ಕಿಯನ್ನಾಗಲಿ, ಅನ್ನವನ್ನಾಗಲಿ ಕಾಲಿನಿಂದ ತುಳಿಯಬಾರದು, ತುಳಿದರೆ ಸಾಯೊ ಹೊತ್ತಿಗೆ ತುತ್ತು ಅನ್ನವು ಸಿಗೋದಿಲ್ಲ
• ಅನ್ನ ನೀರಿನ ದಾನ ಮಾಡುವವರಿಗೆ ಸಿರಿ-ಸಂಪತ್ತು, ಪುಣ್ಯ ಲಭಿಸುತ್ತದೆ. ಪಾಪ ನಿವಾರಣೆಯಾಗುತ್ತದೆ.
• ಕೆಂಪಕ್ಕಿ ದಾನ ಕೊಟ್ಟರೆ ಅಂತಹವರ ಮನೆತನ ಏಳಿಗೆಯಾಗುತ್ತದೆ.
ಅಕ್ಕಿ ಅಥವಾ ಅನ್ನವನ್ನು ಹಿಯಾಳಿಸಿದರೆ ಅಂತಹವರ ವಂಶಕ್ಕೆ ದರಿದ್ರ ಸುತ್ತಿಕೊಳ್ಳುತ್ತದೆ.
• ಕೆಂಪಕ್ಕಿ ಅನ್ನ ತಿಂದ್ರೆ ಆರೋಗ್ಯ ಕೆಡೋದಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪೀಚ್ ಹಣ್ಣು

ಪೀಚ್ ಹಣ್ಣು ಉತ್ಪಾದನೆ ಮತ್ತು ಆರೋಗ್ಯಕರ ಲಾಭಗಳು

ಮೈಸೂರ್ ಪಾಕ್

ಮೈಸೂರಿನಲ್ಲಿ ಹುಟ್ಟಿದ ಮೈಸೂರ್ ಪಾಕ್