ಒಬ್ಬರಿಂದ ಇನ್ನೊಬ್ಬರಿಗೆ ನಮ್ಮ ಮನಸ್ಸಿನ ವಿಷಯ ತಿಳಿಸಲು ಇರುವ ಸಾಧನ ಭಾಷೆ. ಅದು ಯಾವ ಭಾಷೆಯಾದರೂ ಸರಿಯೇ, ಭಾವನೆ ವ್ಯಕ್ತವಾಗುತ್ತದೆ. ಹೀಗೆ ಈ ಭಾಷೆ ಈಗ ಕಲಹ ಕೂಡ ಆಗಿದೆ. ಒಂದೇ ಊರು ಆದರೂ ಬೇರೆ ಬೇರೆ ಭಾಷೆಯ ಬಗ್ಗೆ ಜಗಳ, ಭಿನ್ನಾಭಿಪ್ರಾಯ ಇದೆ.
ನಮ್ಮ ಕರ್ನಾಟಕದಲ್ಲಿ ಹಲವಾರು ಭಾಷಿಗರು ಇದ್ದಾರೆ. ಇಲ್ಲಿ ಕೆಲವೊಂದು ಭಾಷೆಗಳ ಬಗ್ಗೆ ತಿಳಿಯುವ ಸಣ್ಣ ಪ್ರಯತ್ನ.
*ಸಂಸ್ಕೃತ

ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿಷ್ಠಾನ ನಗರದಲ್ಲಿದ್ದ ಶಾತವಾಹನ ದೊರೆಗೆ ಸಂಬಂಧಿಸಿದ ‘ಮೋದಕಂ ತಾಡಯ’ದ ಕಥೆ ಬಹುಶಃ ದಕ್ಷಿಣ ಭಾರತದಲ್ಲಿ ಸಂಸ್ಕೃತದ ಹರಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ.
ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಬೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು ‘ದೇವಭಾಷೆ’ ಎಂದೂ ಹಿಂದೆ ಕರೆಯುತ್ತಿದ್ದರು.
ಹಲ್ಮಿಡಿ ಶಾಸನದಿಂದ ಸಂಸ್ಕೃತ ಭಾಷೆ ಕನ್ನಡ ರಚನೆಗಳ ಮೇಲೂ ಪ್ರಭಾವ ಬೀರುವ ಸ್ಥಿತಿಯಲ್ಲಿದ್ದಿತೆಂಬುದನ್ನು ತೋರಿಸುತ್ತದೆ. ಇಲ್ಲಿಂದ ಮುಂದೆ ಸಂಸ್ಕೃತ ಶಿಷ್ಟಭಾಷೆಯಾಗಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿ ತತ್ಕಾಲದ ಉನ್ನತ ವರ್ಗಗಳಿಂದ ಪ್ರೋತ್ಸಾಹ ಗಳಿಸಿತು. ನೂರಾರು ಸಂಸ್ಕೃತ ಶಾಸನಗಳು ಕನ್ನಡದಲ್ಲಿ ರಚಿತವಾದವು. ಅನೇಕ ಕವಿಗಳು, ಶಾಸ್ತ್ರಕಾರರು ಈ ನಾಡಿನಲ್ಲಿ ಆಗಿಹೋದರು. ನೂರಾರು ಸಂಸ್ಕೃತ ಗ್ರಂಥಗಳ ರಚನೆಯಾಯಿತು. ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಗಣ್ಯವಾದುದು. ಹಾಗೆಯೇ ಸಂಸ್ಕೃತದ ಶ್ರುತಿ ಸ್ಮೃತಿ ಪುರಾಣ ಇತಿಹಾಸಗಳು ಕರ್ನಾಟಕದಲ್ಲಿ ಹರಡಿ ಅವು ಹಾಗೂ ಇತರ ಸಂಸ್ಕೃತ ಕೃತಿಗಳು ಕನ್ನಡ ದೇಶದ ಸಂಸ್ಕೃತಿ ಹಾಗೂ ನುಡಿಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತ ಬಂದಿವೆ.
*ಉರ್ದು

ಉರ್ದು ಇದನ್ನು ಲಷ್ಕರಿ ಎಂದೂ ಕರೆಯುತ್ತಾರೆ, ಇಂಡೊ-ಆರ್ಯನ್ ಭಾಷಾ ಪಂಗಡದ ಇಂಡೊ-ಯೂರೋಪಿಯನ್ ಉಪ ಪಂಗಡಕ್ಕೆ ಸೇರಿದ್ದು. ಪರ್ಷಿಯನ್, ಟರ್ಕಿಷ್, ಅರೇಬಿಕ್ ಮತ್ತು ಹಿಂದಿ ಭಾಷೆಗಳ ಪ್ರಭಾವವಿರುವ ಈ ಭಾಷೆ, ದೆಹಲಿಯ ಶಾಹಿ ಮತ್ತು ಮೊಘಲ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಬೆಳೆಯಿತು.
ಪಾರಸಿ ಭಾಷೆಯನ್ನು ಆಡುವವರ ಪ್ರಭುತ್ವ ಮತ್ತು ಸಂಪರ್ಕ ಉಂಟಾಯಿತು. ಸೈನಿಕರು, ವರ್ತಕರು ಪಾರಿಸಿ ಹಾಗೂ ಅರಬ್ಬೀ ಭಾಷೆಗಳನ್ನು ಸ್ಥಳೀಯ ಪ್ರಭಾವದಿಂದ ರೂಪಿಸಿದರು. ಅದು ದಖನೀ ಭಾಷೆಯ ಹುಟ್ಟಿಗೆ ಕಾರಣವಾಯಿತು. ಕನ್ನಡ ಮತ್ತು ಮರಾಠಿ ಪದಗಳೂ ಇದರಲ್ಲಿ ನುಸುಳಿದವು. ಈ ಸಂವಹನದಿಂದ ರೇಖ್ತಾ ಎಂಬ ಭಾಷೆ ಹುಟ್ಟಿತು. ಇದೇ ಮುಂದೆ ದಖ್ಖನೀ ಆಯ್ತು. ಈ ಭಾಷೆ ದಕ್ಷಿಣದಲ್ಲಿ ಪ್ರಸಿದ್ಧಿ ಪಡೆದುದರಿಂದ ಅದನ್ನು ದಖನೀಭಾಷೆಯೆಂದು ಕರೆದರು. ಇದು ಉರ್ದುಭಾಷೆಗೆ ಬೇರು.
ಉರ್ದು ಭಾಷೆಯ ವಿಶಿಷ್ಟತೆ ಎಂದರೆ ಅದು ಯಾವುದೇ ಮತ, ಜಾತಿ, ಪಂಥ ಪಂಗಡಗಳಿಗೆ ಸೇರಿದುದಲ್ಲ. ಈ ಭಾಷೆಯಲ್ಲಿ ಅರಬ್ಬೀ ಗಾಂಭೀರ್ಯ, ಪಾರಸಿ ಮಾಧುರ್ಯ, ಸಂಸ್ಕೃತದ ಹಿರಿತನ ಸಮ್ಮಿಲಿತವಾಗಿದೆ. ಈ ಭಾಷೆಯ ಲಿಪಿಯನ್ನು ಬಲದಿಂದ ಎಡಕ್ಕೆ ಬರೆಯುವುದು ರೂಢಿ.
*ತಮಿಳು

ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು. ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, ಕನ್ನಡ ತೆಲುಗು, ಮಲಯಾಳಂ ಮತ್ತು ತುಳುಗಳಲ್ಲಿ ತಮಿಳು ಭಾಷೆಯು ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ, ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಒಂದು ಭಾಷೆ.
ಕನ್ನಡದ ಸೋದರ ಭಾಷೆಯಾದ ತಮಿಳು ಕನ್ನಡಕ್ಕಿಂತ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಸಾಹಿತ್ಯಕವಾಗಿ ತೆಲುಗಿನೊಂದಿಗೆ ಹೆಚ್ಚು ಬಾಂಧವ್ಯವನ್ನು ಹೊಂದಿರುವ ಕನ್ನಡ ಭಾಷಾವಿಷಯದಲ್ಲಿ ತಮಿಳಿಗೆ ಸಮೀಪವಾಗಿದೆ. ಆದರೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ತಮಿಳು ಸಾಹಿತ್ಯದೊಂದಿಗೆ ತೌಲನಿಕವಾಗಿ ಪರಿಶೀಲಿಸಿದಾಗ ಈ ಎರಡು ಸೋದರ ಭಾಷೆಗಳಿಗಿರುವ ಸಂಬಂಧ ಬಾಂಧವ್ಯಗಳು ಸಾಹಿತ್ಯಕವಾಗಿಯೂ ಬೆಳೆದುಬಂದಿವೆ ಎಂಬ ವಿಷಯ ವ್ಯಕ್ತವಾಗುತ್ತದೆ.
ಹತ್ತನೆಯ ಶತಮಾನಕ್ಕೆ ಮುಂಚೆ ಕನ್ನಡ ಮತ್ತು ತಮಿಳು ಭಾಷಾ ಸಾಹಿತ್ಯಗಳ ನಡುವೆ ಇದ್ದ ಸಂಬಂಧವನ್ನು ನಿರೂಪಿಸುವ ಮಾಹಿತಿಗಳು ಹೆಚ್ಚಾಗಿ ದೊರಕುವುದಿಲ್ಲ. ಪುರ್ವದ ಹಳಗನ್ನಡದ ಶಾಸನಗಳ ಭಾಷೆ ತಮಿಳು ಶಾಸನಗಳ ಭಾಷೆಯನ್ನು ಹೋಲುತ್ತದೆ ಎಂದು ಹೇಳಬಹುದು. ಹಲ್ಮಿಡಿ ಶಾಸನದ ಕಾಲಕ್ಕೇ ತಮಿಳಿನಲ್ಲಿ ಸಮೃದ್ಧವಾದ ಸಾಹಿತ್ಯವಿತ್ತು. 4-5ನೆಯ ಶತಮಾನಗಳಲ್ಲಿ ಪ್ರಾಚೀನ ತಮಿಳು ಗೀತೆಗಳನ್ನು ಸಂಗ್ರಹಿಸಿ ಕ್ರಮಬದ್ಧವಾದ ಸಂಕಲನಗಳಾಗಿ ವಿಂಗಡಿಸುವ ಕಾರ್ಯ ನಡೆಯಿತು.
*ತೆಲುಗು

ಕನ್ನಡ ಮತ್ತು ತೆಲುಗು ಭಾಷೆಗಳ ಬಾಂಧವ್ಯ ಬಹಳ ಹಿಂದಿನಿಂದಲೂ ಅಂದರೆ ಸಾತವಾಹನರು, ಚಾಳುಕ್ಯರು, ಚೋಳರು, ಕಾಕತೀಯರು, ವಿಜಯನಗರದ ಅರಸರು, ಕೊನೆಗೆ ಮೊನ್ನೆಮೊನ್ನೆಯ ಬ್ರಿಟಿಷರ ಕಾಲದಿಂದ ಈಗಿನವರೆಗೂ ನಡೆದುಕೊಂಡು ಬಂದಿದೆ. ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಭಾಷಿಕವಾಗಿ ನಾನಾಮುಖಗಳಿಂದ ಬೆಳೆದು ಬರುತ್ತಿರುವ ಈ ಬಾಂಧವ್ಯದ ಗುರುತುಗಳನ್ನು ಈ ಎರಡು ಭಾಷೆಗಳ ಸಾಹಿತ್ಯಕ ಕೃತಿಗಳಲ್ಲಿಯೂ ನಾವು ಕಾಣಬಹುದು. ತೆಲುಗರು ಆಂಧ್ರಪ್ರದೇಶದ ಗಡಿಪ್ರದೇಶಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಎಲ್ಲ ಕಡೆಗಳಲ್ಲಿಯೂ ಕಂಡುಬರುತ್ತಾರೆ. ಮುಖ್ಯವಾಗಿ ಕೋಲಾರ ಮತ್ತು ಬಳ್ಳಾರಿ ಜಿಲ್ಲೆ, ಬೆಂಗಳೂರು ನಗರ ಮುಂತಾದ ಪ್ರದೇಶಗಳಲ್ಲಿ ಇವರು ಬಹುಸಂಖ್ಯೆಯಲ್ಲಿ ನೆಲೆಸಿದ್ದಾರೆ.
ಕರ್ನಾಟಕದಲ್ಲಿ ತೆಲುಗು ಭಾಷೆ ಮಾತ್ರವಲ್ಲದೆ ತೆಲುಗು ಸಾಹಿತ್ಯವೂ ಆಶ್ರಯ ಪಡೆಯಿತು. ಕನ್ನಡದ ಆದಿಮಹಾಕವಿಯಾದ ಪಂಪ ತೆಲುಗಿನಲ್ಲಿ ಜಿನೇಂದ್ರ ಪುರಾಣವನ್ನು ಬರೆದಿದ್ದಾನೆ ಎಂಬ ಒಂದು ಅಬಿsಪ್ರಾಯವಿದೆ. ಪೊನ್ನನೂ ತೆಲುಗಿನಲ್ಲಿ ಆದಿಪುರಾಣವನ್ನು ಬರೆದಿದ್ದಾನೆಂದು ಕೆಲವರ ಅಬಿsಪ್ರಾಯ. ಆದರೆ ಈ ಅಬಿsಪ್ರಾಯಗಳು ಸತ್ಯವಾದುವೆಂದು ಅಂಗೀಕರಿಸಲು ದೃಢ ಆಧಾರಗಳು ದೊರೆತಿಲ್ಲ.
*ಹಿಂದಿ

ಹಿಂದಿ ಭಾರತದ ಪ್ರಮುಖ ಭಾಷೆಗಳಲ್ಲೊಂದು. ಭಾರತದ ಉತ್ತರ ಹಾಗೂ ಮಧ್ಯ ಭಾಗದ ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡಲಾಗುತ್ತದೆ. ಇದು ಇಂಡೋ-ಯೂರೋಪಿಯನ್ ಭಾಷಾಬಳಗದ ಇಂಡೋ-ಇರಾನಿಯನ್ ಉಪವರ್ಗಕ್ಕೆ ಸೇರುತ್ತದೆ. ಮಧ್ಯ ಯುಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಾಕೃತ ಭಾಷೆಗಳಿಂದ, ಹಾಗೂ ಅವುಗಳ ಮೂಲಕ ಸಂಸ್ಕೃತದಿಂದ, ಹಿಂದಿ ವಿಕಾಸವಾಗಿದೆ. ಹಿಂದಿಯಲ್ಲಿ ಉಪಯೋಗಿಸುವ ಅನೇಕ ಪದಗಳು ಸಂಸ್ಕೃತದಿಂದ ಬಂದಿದ್ದು, ಉತ್ತರ ಭಾರತದಲ್ಲಿ ಮುಸ್ಲಿಮ್ ಪ್ರಭಾವದ ಪರಿಣಾಮವಾಗಿ ಸಾಕಷ್ಟು ಪರ್ಷಿಯನ್, ಅರಾಬಿಕ್ ಹಾಗೂ ಟರ್ಕಿಷ್ ಭಾಷೆಗಳ ಪದಗಳನ್ನು ಸಹ ಎರವಾಗಿ ಪಡೆದಿದೆ.
ಹಿಂದಿ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದ್ದು, ಭಾರತದ ಕೇಂದ್ರ ಸರ್ಕಾರ ಉಪಯೋಗಿಸುವ ಭಾಷೆಗಳಲ್ಲಿ ಒಂದು.
ಉತ್ತರ ಭಾರತ ರಾಜ್ಯಗಳ ಅನೇಕ ಭಾಷೆಗಳನ್ನು ಹಿಂದಿ ಭಾಷೆಯಡಿಯಲ್ಲಿ ಒಂದುಗೂಡಿಸಿ ಹೇಳಲಾಗುತ್ತದೆ.
ಭಾರತದಲ್ಲಿ ಸುಮಾರು ೨೫ ಕೋಟಿ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ.
ಆಧುನಿಕ ಯುಗದಲ್ಲಿ ಹಿಂದಿ ಭಾಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನೆಲೆಗೊಳಿಸಲು ಹಾಗೂ ಹಿಂದೀಯನ್ನು ಇಡೀ ರಾಷ್ಟ್ರದ ವಾಣಿಯಾಗಿ ಪ್ರಚುರಪಡಿಸಲು ಮಹಾತ್ಮ ಗಾಂಧೀಜಿಯವರು ಹಿಂದಿಯನ್ನು ಒಂದು ಆಂದೋಲನದಂತೆ ತಮ್ಮ ಕೈಗೆತ್ತಿಕೊಂಡರು. ಗಾಂಧೀಜಿ ತಮ್ಮ ಸಮಗ್ರ ಭಾರತ ಯಾತ್ರೆಯ ಸಂದರ್ಭದಲ್ಲಿ ಭಾರತದಂಥ ಬಹುಭಾಷೀಯ ಹಾಗೂ ಬಹು ಸಂಸ್ಕೃತಿಗಳ ದೇಶದಲ್ಲಿ ಭಾವೈಕ್ಯತೆ ಮತ್ತು ವಿಭಿನ್ನ ಭಾಷೀಯರ ನಡುವೆ ಸಂವಾದಗಳನ್ನು ಏರ್ಪಡಿಸಲು ಸಾಧ್ಯವಾಗುವುದು ಹಿಂದಿಯಿಂದ ಮಾತ್ರವೆಂದು ಭಾವಿಸಿದ್ದರು. ಹೀಗಾಗಿ ದೇಶದ ಪ್ರಾಂತೀಯ ಭಾಷೆಗಳ ವಿಕಾಸಕ್ಕೆ ಪುರ್ಣ ಒತ್ತು ಕೊಟ್ಟು, ಇಂಗ್ಲಿಷ್ನ ಸ್ಥಾನದಲ್ಲಿ ಹಿಂದೀಯನ್ನು, ವ್ಯಾಪಕವಾಗಿ ಉಪಯೋಗಿಸಲು ಕಳಕಳಿ ಹಾಗೂ ಒತ್ತಾಸೆಯಿಂದ ಜನರಲ್ಲಿ ನಿವೇದಿಸಿಕೊಂಡರು.
*ಮರಾಠಿ

ಮರಾಠಿ – ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖಭಾಷೆ. ಮಹಾರಾಷ್ಟ್ರೀ ಅಪಭ್ರಂಶದಿಂದ ವಿಕಾಸಗೊಂಡಿದೆ. ಮಹಾರಾಷ್ಟ್ರ ರಾಜ್ಯದ ಆಡಳಿತ ಭಾಷೆಯಾಗಿರುವ ಇದು 68,022,000(2001) ಜನರ ತಾಯಿನುಡಿಯಾಗಿದ್ದು ಭಾರತೀಯ ಸಂವಿಧಾನ ಮಾನ್ಯತೆ ಪಡೆದಿದೆ.
ಭೌಗೋಳಿಕವಾಗಿ ನೆರೆಯ ರಾಜ್ಯಗಳಾಗಿರುವ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸಾಮರಸ್ಯ ಶತಮಾನಗಳಿಂದ ಕ್ರಮವಾಗಿ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದ ಬಹುಭಾಗ ಕವಿರಾಜಮಾರ್ಗದ ಕಾಲಕ್ಕೆ ಕರ್ನಾಟಕದಲ್ಲಿ ಐಕ್ಯವಾಗಿತ್ತೆಂದು ತಿಳಿಯುತ್ತದೆ. ಮಹಾರಾಷ್ಟ್ರದಲ್ಲಿ ಇಂದಿಗೂ ಇರುವ ಕೆಲವು ಊರುಗಳ ಹೆಸರುಗಳು ಕನ್ನಡ ಹೆಸರಿನ ರೂಪಾಂತರವಾಗಿವೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ವಿಜಯನಗರದ ಪತನಾನಂತರ ಮಹಮ್ಮದೀಯರ ದಕ್ಷಿಣ ಭಾರತ ದಾಳಿಯ ಜೊತೆ ಜೊತೆಯಲ್ಲಿಯೇ ಮಹಾರಾಷ್ಟ್ರೀಯರು ಇನ್ನೂ ದಕ್ಷಿಣವನ್ನು ಆಕ್ರಮಿಸತೊಡಗಿದರು. ಬೆಂಗಳೂರು ಜಹಗೀರಿಯಾಗಿ ದೊರೆತಮೇಲಂತೂ ಶಿವಾಜಿಯ ತಂದೆ ಶಹಾಜಿ ಕೋಲಾರ ಮತ್ತು ದೊಡ್ಡಬಳ್ಳಾಪುರಗಳಲ್ಲಿ ನಿಂತು ಪ್ರಾಬಲ್ಯ ಹೊಂದಿ ಮರಾಠಿ ಭಾಷೆ, ಕಂದಾಯ ಪದ್ಧತಿ ಮತ್ತು ಲೆಕ್ಕಪತ್ರಗಳ ರೀತಿಯನ್ನು ಕರ್ನಾಟಕದಲ್ಲಿ ಅಳವಡಿಸಿದನೆಂದು ತಿಳಿಯುತ್ತದೆ. ಸು. 1640ರಲ್ಲಿ ಶಿವಾಜಿ ಬೆಂಗಳೂರಿನಲ್ಲಿಯೇ ನೆಲಸಿದ್ದ. ಇಂದಿಗೂ ಶಹಾಜಿಯ ಸಮಾಧಿ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿದೆ ಎನ್ನಲಾಗಿದೆ. ಮುಗಲ್ ಚಕ್ರವರ್ತಿ ಔರಂಗಜೇಬನ ಬೆದರಿಕೆಯನ್ನು ಅಲಕ್ಷಿಸಿ ಶಿವಾಜಿಯ ಮಗ ರಾಜಾರಾಮನಿಗೆ ಕೆಳದಿಯ ಚೆನ್ನಮ್ಮ ರಕ್ಷಣೆಯನ್ನು ಒದಗಿಸಿದಳು. ಪೇಶ್ವೆಗಳ ಆಡಳಿತ ಬಂದಮೇಲೆಯೂ ಕರ್ನಾಟಕದ ಮೇಲೆ ಮರಾಠಿಯ ಪ್ರಭಾವ ಗಾಢವಾಗಿಯೇ ಇದ್ದಿತು. ಬ್ರಿಟಿಷರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಮೇಲೆ ಸ್ವಉಪಯೋಗಕ್ಕಾಗಿ ಕರ್ನಾಟಕದ ಹಲವು ಭಾಗಗಳನ್ನು ಮುಂಬಯಿ ಪ್ರಾಂತಕ್ಕೆ ಸೇರಿಸಿದರು.
*ಕೊಂಕಣಿ

ಕೊಂಕಣಿ ಭಾಷೆ ಕರ್ನಾಟಕಕ್ಕೆ ಹಿಂದಿನಿಂದ ಪರಿಚಿತವಾಗಿದೆ. ಉತ್ತರ ಭಾರತದಲ್ಲಿ ಹುಟ್ಟಿದ ಈ ಭಾಷೆ ಪಶ್ಚಿಮ ಕರಾವಳಿಯ ದಾರಿಯಾಗಿ ಇಳಿದು ಉತ್ತರ ಕನ್ನಡದ ಗಂಗಾವತಿ ನದಿಯವರೆಗೆ ಬಂತು. ಕೊಂಕಣಿ ಭಾಷೆಯಲ್ಲಿ ಅನೇಕ ಸುಧಾರಣೆಗಳನ್ನು ತಂದ ಸಾರಸ್ವತರು ಗೋವೆಗೆ ಬಂದು ನೆಲೆನಿಂತಾಗ ಅದು ಗೋವ ಕದಂಬರ ಆಳಿಕೆಗೆ ಒಳಪಟ್ಟಿತ್ತು. ಅವರ ಆಡಳಿತ ಭಾಷೆ ಕನ್ನಡವಾಗಿದ್ದುದರಿಂದ ಕನ್ನಡಕ್ಕೂ ಕೊಂಕಣಿಗೂ ಸಂಬಂಧ ಏರ್ಪಟ್ಟಿತು. ಇದರಿಂದಾಗಿ ಈ ಶೆಣೈ ವ್ಯಾಪಾರಿಗಳು ಹಾಗೂ ದಲಾಲರು ಕನ್ನಡ ಲಿಪಿಯನ್ನು ಬಳಸಿಕೊಂಡು ಕೊಂಕಣಿ ಭಾಷೆಯಲ್ಲಿ ತಮ್ಮ ಅಂಗಡಿಯ ಲೆಕ್ಕಪತ್ರಗಳನ್ನು ಬರೆದರು. ಹೀಗೆ ಆರಂಭವಾದ ಕನ್ನಡ-ಕೊಂಕಣಿ ಸಂಬಂಧ ಕನಿಷ್ಠ ಪಕ್ಷ ಲಿಪಿಯ ಮಟ್ಟದಲ್ಲಾದರೂ ಪೋರ್ಚುಗೀಸರ, ಡಚ್ಚರ ಕಾಲದಲ್ಲಿ ಉಳಿದಿತ್ತು.
*ಇಂಗ್ಲಿಷ್

ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ಮೇಲೆ ಇಂಗ್ಲಿಷ್ ಭಾಷೆ ಭಾರತದಲ್ಲಿ ಪ್ರಚಾರಕ್ಕೆ ಬಂತು. ಭಾಷೆಯೊಂದಿಗೆ ಆ ಭಾಷೆಯ ಸಾಹಿತ್ಯವೂ ಭಾರತೀಯರಿಗೆ ಪರಿಚಿತವಾಯಿತು. ಕರ್ನಾಟಕ ಇದಕ್ಕೆ ಹೊರತಾಗಿಲ್ಲ. ಶ್ರೀಮಂತವೂ ಸಂಕೀರ್ಣವೂ ಆದ ಇಂಗ್ಲಿಷ್ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಅಪಾರ. ಕನ್ನಡ ವಾಙ್ಮಯದಲ್ಲಿ ಇಂಗ್ಲಿಷಿನ ಪ್ರಭಾವ ಪ್ರತ್ಯೇಕಿಸಿ ತೋರಿಸುವುದು ಕಠಿಣ ಎನ್ನುವಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ. ಇಂದಿನ ಅನೇಕ ಸಾಹಿತ್ಯ ಪ್ರಕಾರಗಳು ನೇರವಾಗಿ ಇಂಗ್ಲಿಷಿನಿಂದ ಬಂದವು ಅಥವಾ ಅದರ ಸಂಪರ್ಕದಿಂದ ಸಿದ್ಧವಾದವು. ಪ್ರಭಾವದ ಜೊತೆಗೆ ಅನುಕರಣ ಅನುವಾದಗಳನ್ನೂ ಲೆಕ್ಕಿಸಿದರೆ ಇಂಗ್ಲಿಷ್ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿರುವುದು ತಿಳಿಯುತ್ತದೆ.
ಧನ್ಯವಾದಗಳು.
GIPHY App Key not set. Please check settings