in

ಗೌರಿ ಗಣೇಶ ಹಬ್ಬದ ವಿಶೇಷತೆ

ಗೌರಿ ಗಣೇಶ ಹಬ್ಬದ ವಿಶೇಷತೆ
ಗೌರಿ ಗಣೇಶ ಹಬ್ಬದ ವಿಶೇಷತೆ

ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ..

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ.

ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ.
ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.

ಗೌರಿ ಪಾರ್ವತಿಯ ರೂಪಾಂತರ. ಪೂಜಿಸುವುದರಿಂದ ಸಂತುಷ್ಟಳಾಗಿ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತವೆ. ಚೈತ್ರ ಮೊದಲಾದ ಹನ್ನೆರಡು ಚಾಂದ್ರಮಾಸಗಳಲ್ಲೂ ಬರುವ ಶುಕ್ಲ ತೃತೀಯಾ ಮತ್ತು ಕೃಷ್ಣತೃತೀಯಾ ತಿಥಿಗಳಲ್ಲಿ ಗೌರಿಯನ್ನು ಬೇರೆ ಬೇರೆ ಹೆಸರುಗಳಿಂದ ಪೂಜಿಸುವ ವಿಧಾನ ಪುರಾಣಗಳಲ್ಲಿ ಉಕ್ತವಾಗಿದೆ. ತೃತೀಯಾತಿಥಿ ಮಾತ್ರವಲ್ಲದೆ ವೈಶಾಖ ಶುಕ್ಲಪಂಚಮಿ, ಜೇಷ್ಠ ಶುಕ್ಲ ಪ್ರಥಮಾ ಶ್ರಾವಣಮಾಸದ ಎಲ್ಲ ಮಂಗಳವಾರಗಳು, ಸೂರ್ಯ ಹಸ್ತ ನಕ್ಷತ್ರವನ್ನು ಪ್ರವೇಶಿಸುವ ದಿನ-ಕಾಲಗಳಲ್ಲೂ ಗೌರೀ ಪೂಜೆಯನ್ನು ಮಾಡಬೇಕೆಂದಿದೆ. ಗೌರ, ಹಳದಿ-ಬಿಳುಪು ಮಿಶ್ರ ವರ್ಣದ ಶರೀರದಿಂದ ಕೂಡಿ ಪಾರ್ವತಿ ರೂಪಾಂತರವನ್ನು ತಳೆದುದರಿಂದ ಆಕೆಗೆ ಗೌರೀ ಎಂದು ಹೆಸರು ಬಂದಿದೆ.

ಗೌರಿ ಗಣೇಶ ಹಬ್ಬದ ವಿಶೇಷತೆ
ಗೌರಿ ಪಾರ್ವತಿಯ ರೂಪಾಂತರ

ದಕ್ಷಬ್ರಹ್ಮನಿಗೆ ಕಾಳೀ ಎಂಬ ಮಗಳಿದ್ದಳು. ಆಕೆ ಕನ್ನೈದಿಲೆಯಂತೆ ಕಪ್ಪು ಬಣ್ಣದಿಂದ ಕೂಡಿದ್ದಳು. ದಕ್ಷ ಆಕೆಯನ್ನು ಈಶ್ವರನಿಗೆ ಕೊಟ್ಟು ವಿವಾಹವನ್ನು ಮಾಡಿದ್ದ. ಶಿವನೂ ಆಕೆಯೊಡನೆ ಸಂತೋಷದಿಂದಿದ್ದ. ಒಮ್ಮೆ ಆಸ್ಥಾನ ಮಂಟಪದಲ್ಲಿ ವಿಷ್ಣು ಮತ್ತು ದೇವತೆಗಳೊಡನೆ ಈಶ್ವರ ತನ್ನ ಪತ್ನಿಯನ್ನು ಕೃಷ್ಣ ವರ್ಣಳಾದ ಕಾಳಿಯೇ ಬಾ. ನಿನ್ನ ಬಣ್ಣ ಕಪ್ಪಾಗಿದ್ದರೂ ಸೌಂದರ್ಯದಿಂದ ಕೂಡಿದ ನಿನ್ನ ರೂಪ ನನಗೆ ಪ್ರಿಯವಾಗಿದೆ ಎಂದು ಹೇಳಿದ. ಈ ಮಾತನ್ನು ಕೇಳಿದ ಕಾಳಿ ಲಜ್ಜಿತಳಾಗಿ, ದುಃಖಿಸಿ ತನ್ನ ಕಪ್ಪು ದೇಹವನ್ನು ನೀಗಲು ದೇವ ಸಮುದಾಯದೆದುರಿನಲ್ಲೇ ಅಗ್ನಿಪ್ರವೇಶಮಾಡಿ ಮತ್ತೆ ಪರ್ವತರಾಜನಿಗೆ ಮಗಳಾಗಿ ಗೌರವರ್ಣ ಶರೀರದಿಂದ ಕೂಡಿದವಳಾಗಿ ಹುಟ್ಟಿ ಈಶ್ವರನನ್ನೇ ವಿವಾಹವಾದಳು.

ಇನ್ನೊಂದು ಕಥೆ ಇದೆ. ಶುಂಭ ನಿಶುಂಭರೆಂಬ ದೈತ್ಯರು ಲೋಕಕಂಟಕರಾಗಿ ದೇವತೆಗಳನ್ನು ತೊಂದರೆಪಡಿಸುತ್ತಿರಲು ದೇವತೆಗಳೆಲ್ಲ ಪಾರ್ವತಿಯನ್ನು ಮೊರೆ ಹೊಕ್ಕರು. ಆಗ ಪಾರ್ವತಿಯ ಶರೀರದಿಂದ ಕೌಶಿಕಿ ಎಂಬ ಸುಂದರಿ ಆವಿರ್ಭವಿಸಿ ಆ ರಾಕ್ಷಸರನ್ನು ಸಂಹರಿಸಿದಳು. ಕೌಶಿಕಿ ಆವಿರ್ಭವಿಸಿದಮೇಲೆ ಪಾರ್ವತಿ ಕಪ್ಪಾಗಿ ಕಂಡಳು, ಶಿವ ಆಕೆಯನ್ನು ಕಾಳಿ ಎಂದು ಕರೆದ. ಆಗ ಪಾರ್ವತಿ ತಪಸ್ಸುಮಾಡಿ ಗೌರಶರೀರವನ್ನು ಪಡೆದಳು.

ಕಥೆಯ ನಿರೂಪಣೆಯಲ್ಲಿ ಬದಲಾವಣೆ ಇದ್ದರೂ ಕಪ್ಪುಶರೀರವನ್ನು ತ್ಯಜಿಸಿ ಗೌರ ಶರೀರವನ್ನು ಪಡೆದ ಕಾರಣ ಪಾರ್ವತಿಗೆ ಗೌರಿ ಎಂಬ ಅನ್ವರ್ಥನಾಮ ಬಂತು ಎಂಬ ವಿಷಯ ಸತ್ಯ. ಭಾದ್ರಪದ ಶುದ್ಧ ತೃತೀಯಾ ದಿವಸಾದಿಯಾಗಿ ಪಾರ್ವತಿ-ಆವಿರ್ಭವಿಸಿದುದರಿಂದ ಆ ದಿವಸ ಸ್ವರ್ಣಗೌರೀವ್ರತವನ್ನು ತಪ್ಪದೆ ಆಚರಿಸುವುದು ಕರ್ನಾಟಕದಲ್ಲಿ ರೂಢಿಯಲ್ಲಿದೆ.

ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.
ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

ಗೌರಿ ಗಣೇಶ ಹಬ್ಬದ ವಿಶೇಷತೆ
ಸ್ವರ್ಣಗೌರಿಯ ಮಾನಸ ಪುತ್ರ

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.
ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.

ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು.

ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು.
ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು.

ಪೂಜೆಯ ನಂತರ ಹತ್ತುದಿನಗಳ ವರೇಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು. ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ

ಕರಿ ಮೆಣಸು

ಕರಿ ಮೆಣಸು ಬೆಳೆಯುವ ರೀತಿ ಮತ್ತು ಆರೋಗ್ಯಕರ ಲಾಭಗಳು