in

ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ

ಅಮೋಘವರ್ಷ ನೃಪತುಂಗ
ಅಮೋಘವರ್ಷ ನೃಪತುಂಗ

ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಹೆಸರುವಾಸಿಯಾದ ಚಕ್ರವರ್ತಿಗಳಲ್ಲಿ ನೃಪತುಂಗನೂ ಒಬ್ಬನು. ಇದಕ್ಕೆ ಕೇವಲ ಅವನ ಯುದ್ಧವಿದ್ಯೆಯಲ್ಲಿನ ಪರಿಣತಿ ಕಾರಣವಲ್ಲ. ಕನ್ನಡನಾಡು ಎಂಬ ಪರಿಕಲ್ಪನೆಯನ್ನು ರೂಪಿಸುವುದರಲ್ಲಿ ಅವನು ವಹಿಸಿದ ಪಾತ್ರ ಹಾಗೂ ಕರ್ನಾಟಕದ ಸಂಸ್ಕೃತಿಗೆ ಅವನು ನೀಡಿದ ವಿಶಿಷ್ಟ ಕಾಣಿಕೆಗಳು ಈ ಮನ್ನಣೆಗೆ ಕಾರಣವಾಗಿವೆ. ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ನೃಪತುಂಗನು ತನ್ನ ತಂದೆಯಾದ ಮೂರನೆಯ ಗೋವಿಂದನ ನಂತರ ಪಟ್ಟಕ್ಕೆ ಬಂದನು. ಬರೋಡಾ ಮತ್ತು ಸಂಜಾನಗಳ್ಲಿ ದೊರೆತಿರುವ ತಾಮ್ರಪತ್ರಗಳು, ಮಣ್ಣೆಯಲ್ಲಿ ಸಿಕ್ಕಿರುವ ಶಿಲಾಶಾಸನ ಹಾಗೂ ಅರೇಬಿಯಾದಿಂದ ಬಂದ ಪ್ರವಾಸಿ ಸುಲೈಮಾನನ ಬರವಣಿಗೆಯು ನೃಪತುಂಗನ ಆಳ್ವಿಕೆಯನ್ನು ಕುರಿತು ಸಮೃದ್ಧವಾದ ಮಾಹಿತಿಯನ್ನು ಒದಗಿಸುತ್ತವೆ.

ಮೊದಲನೆಯ ಅಮೋಘವರ್ಷ ನೃಪತುಂಗನು ಕ್ರಿ.ಶ. ೮೧೪ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು. ಇವನು “ನೃಪತುಂಗ” ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ. ರಾಜನಾದಾಗ ಇವನಿಗೆ ಕೇವಲ 14 ವರ್ಷ. ಸ್ವಭಾವತಃ ಶಾಂತಿಪ್ರಿಯನಾಗಿದ್ದರೂ, ಹಲವು ದೀರ್ಘಕಾಲದ ಯುದ್ಧಗಳಲ್ಲಿ ತೊಡಗಿಕೊಳ್ಳಬೇಕಾಯಿತು.

ಉತ್ತರಭಾರತದ ದಿಗ್ವಿಜಯ ಮಾಡಿ ಬಂದ 3ನೆಯ ಗೋವಿಂದನ ಮಗ. ಗೋವಿಂದ ವಿಂಧ್ಯಪರ್ವತದ ತಪ್ಪಲಲ್ಲಿದ್ದ ಶ್ರೀಭವನದಲ್ಲಿ ಬೀಡುಬಿಟ್ಟಿದ್ದಾಗ ಶರ್ವ-ಅಮೋಘವರ್ಷ ಹುಟ್ಟಿದನೆಂದು ಸಂಜಾನ ಶಾಸನದಲ್ಲಿ ಹೇಳಿದೆ. 803ರ ಮಣ್ಣೆಯ ಶಾಸನದಲ್ಲಿ ಗೋವಿಂದ ಶ್ರೀಭವನದಲ್ಲಿದ್ದ ಸಂಗತಿ ಉಕ್ತವಾಗಿದೆಯಾದ ಕಾರಣ ಅಮೋಘವರ್ಷನು 800ರಲ್ಲಿ ಜನ್ಮವೆತ್ತಿರಬಹುದು.

ರಾಜ್ಯಭಾರ:

ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ
ಅಮೋಘವರ್ಷ ನೃಪತುಂಗ

ಗೋವಿಂದ 814ರಲ್ಲಿ ತೀರಿಕೊಂಡಿದ್ದರಿಂದ ಅಮೋಘವರ್ಷ ಪಟ್ಟಕ್ಕೆ ಬಂದಾಗ 14 ವರ್ಷದ ಚಿಕ್ಕಬಾಲಕನಾಗಿದ್ದ. ಈ ಸಂಧಿಯನ್ನು ಸಾಧಿಸಿ ಕೆಲವು ಚಾಲುಕ್ಯರೂ, ರಾಷ್ಟ್ರಕೂಟರೂ ಬಂಡು ಹೂಡಿ ಅಮೋಘವರ್ಷನನ್ನು ಪಟ್ಟದಿಂದ ತಳ್ಳಿ ರಾಷ್ಟ್ರಕೂಟ ರಾಜ್ಯವನ್ನು ಆಕ್ರಮಿಸಬೇಕೆಂದು ಹೊಂಚು ಹಾಕಿದರು. ಆದರೆ ಬಡೋದಾ ತಾಮ್ರಶಾಸನದಲ್ಲಿ (835) ಹೇಳಿದಂತೆ ಗುಜರಾತಿನ ರಾಜ ಬಂಡುಗಾರರನ್ನು ಗೆದ್ದು ಅಮೋಘವರ್ಷನನ್ನು ಸಿಂಹಾಸನದ ಮೇಲೆ ಸ್ಥಿರಪಡಿಸಿದ. ಸಂಜಾನ ತಾಮ್ರಶಾಸನದಲ್ಲಿ ಪಾತಾಲಮಲ್ಲನೆಂಬ ವೀರಭಟ ಶತ್ರುಗಳನ್ನು ನಿಗ್ರಹಿಸಿ ರಾಜ್ಯದಲ್ಲಿ ಶಾಂತತೆಯನ್ನು ನೆಲೆಗೊಳಿಸಿ ಅಮೋಘವರ್ಷನನ್ನು ತನ್ನ ವಂಶಾನುಗತ ಸಿಂಹಾಸನದ ಮೇಲೆ ಸ್ಥಿರವಾಗಿ ಕೂರಿಸಿದನೆಂದು ಬರೆದಿದೆ. 2ನೆಯ ಕೃಷ್ಣರಾಜನ ತಾಮ್ರಶಾಸನಗಳಲ್ಲಿ ಅಮೋಘವರ್ಷ ಶತ್ರುಗಳನ್ನು ತಾನೇ ನಿರ್ಮೂಲನ ಮಾಡಿ ರಾಜ್ಯವನ್ನು ಸ್ಥಿರಪಡಿಸಿಕೊಂಡನೆಂದು ಹೇಳಿದೆ. ಅಮೋಘವರ್ಷ ಮಹಾಪ್ರತಾಪಶಾಲಿ. ತನ್ನ ತಂದೆ ವಿಸ್ತರಿಸಿದ್ದ ರಾಜ್ಯವನ್ನು ಅತಿ ಸಾಹಸದಿಂದ ಕಾಪಾಡಿಕೊಂಡು ಬಂದ. ಪೂರ್ವದ ಚಾಲುಕ್ಯ ಮತ್ತು ತಲಕಾಡಿನ ಗಂಗರೊಂದಿಗೆ ಹೋರಾಡಿ ಅವರ ರಾಜ್ಯದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡ. ವಿಸ್ತಾರವಾದ ರಾಜ್ಯವನ್ನು ಬಂಕೇಶ ಮೊದಲಾದ ಅನೇಕ ಮಾಂಡಲಿಕರ ಸಹಾಯದಿಂದ ಆಳುತ್ತ ದೇಶದಲ್ಲಿ ಶಾಂತತೆಯನ್ನು ನೆಲೆಗೊಳಿಸಿದ. ಲೋಕೋಪದ್ರವ ಶಾಂತಿಗೆಂದು ತನ್ನ ಎಡಗೈ ಬೆರಳನ್ನು ಮಹಾಲಕ್ಷ್ಮಿಗಾಗಿ ಬಲಿಯಾಗಿ ಕೊಟ್ಟನೆಂದು ಅವನ ಸಂಜಾನ ತಾಮ್ರಶಾಸನದಲ್ಲಿ ಬರೆದಿದೆ.

ಸ್ವತಃ ಕವಿಯೂ ಆಗಿದ್ದ ನೃಪತುಂಗನು ವಿವಿಧ ಮತಗಳ ಕವಿಗಳು, ಪಂಡಿತರಿಗೆ ಆಶ್ರಯದಾತನೂ ಆಗಿದ್ದನು. ಇವನ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಗಳು ಪ್ರವರ್ಧಮಾನವಾದವು. ಕನ್ನಡದಲ್ಲಿ ಲಭ್ಯವಿರುವ ಪ್ರಾಚೀನ ಗ್ರಂಥ ಕವಿರಾಜಮಾರ್ಗದ ಕರ್ತೃ ನೃಪತುಂಗ ಅಥವಾ ಅವನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯ. ಅಮೋಘವರ್ಷನ ಕಾಲದಲ್ಲಿ ಕೆಲವು ಯುದ್ಧಗಳು ಜರುಗಿದರೂ ಅವನ ಸುಮಾರು 62 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಲಲಿತಕಲೆಗಳ ಅಭಿವೃದ್ಧಿಗೆ ಅನುಕೂಲವಾದ ಶಾಂತಿ ಅವನ ರಾಜ್ಯದಲ್ಲಿ ನೆಲೆಸಿತ್ತು.

ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ
ಅಮೋಘವರ್ಷ ನೃಪತುಂಗ

ಈತ ಕನ್ನಡ ಸಾಹಿತ್ಯದಲ್ಲಿ ಉಪಲಬ್ಧಗ್ರಂಥಗಳಲ್ಲಿ ಅತಿ ಪ್ರಾಚೀನ ಗ್ರಂಥವೆನಿಸಿದ ಕವಿರಾಜಮಾರ್ಗವನ್ನೂ ಪ್ರಶ್ನೋತ್ತರ ಮಾಲಿಕಾ ಎಂಬ ಸಂಸ್ಕೃತಗ್ರಂಥವನ್ನೂ ರಚಿಸಿದನೆಂದು ಒಂದು ವಾದವಿದೆ. ಕವಿರಾಜಮಾರ್ಗ ಭಾಮಹ ದಂಡಿಯರ ಅಲಂಕಾರ ಗ್ರಂಥಗಳನ್ನು ಬಹಳಮಟ್ಟಿಗೆ ಅನುಸರಿಸಿದೆ. ಕನ್ನಡ ಅಲಂಕಾರ ಗ್ರಂಥಗಳಲ್ಲಿ ಇದು ಪ್ರಮಾಣಭೂತವಾದುದು. ಅಮೋಘವರ್ಷ ಶ್ರೀವಿಜಯ ಮೊದಲಾದ ವಿದ್ವಾಂಸರಿಗೆ ತನ್ನ ಆಸ್ಥಾನದಲ್ಲಿ ಆಶ್ರಯವಿತ್ತಿದ್ದ. ಪಾಶ್ರ್ವಾಭ್ಯುದಯ, ಪೂರ್ವಪುರಾಣಗಳನ್ನು ಬರೆದ ಜಿನಸೇನಾಚಾರ್ಯರು ಈತನ ಗುರು. ಶಾಕಟಾಯಕನೆಂಬ ಜೈನ ವೈಯಾಕರಣ ಶಬ್ದಾನುಶಾಸನವನ್ನೂ ಅದಕ್ಕೆ ಟೀಕಾರೂಪವಾದ ಅಮೋಘವೃತ್ತಿಯನ್ನೂ ಆಗಲೇ ರಚಿಸಿದ. ಯುವರಾಜ ಕೃಷ್ಣರಾಜನಿಗೆ ಗುರುವಾಗಿದ್ದ ಗುಣಭದ್ರಾಚಾರ್ಯನು ಅಮೋಘವರ್ಷನ ಭಕ್ತಿಗೌರವಗಳಿಗೆ ಪಾತ್ರನಾಗಿದ್ದು ಉತ್ತರಪುರಾಣವನ್ನು ರಚಿಸಿದ. ಗಣಿತಸಾರಸಂಗ್ರಹದ ಕರ್ತನಾದ ವೀರಾಚಾರ್ಯ ತನ್ನ ಗ್ರಂಥ ರಚನೆಯ ಕಾಲದಲ್ಲಿ ಅಮೋಘವರ್ಷ ಸಾರ್ವಭೌಮನಾಗಿದ್ದನೆಂದು ಹೇಳಿದ್ದಾನೆ. ನೃಪತುಂಗನ ರಚನೆಯು ಶಾಸ್ತ್ರಗ್ರಂಥವಾಗಿರುವದು. ಕಾವ್ಯದೋಷಗಳು, ಅಲಂಕಾರಗಳು ಈ ಗ್ರಂಥದಲ್ಲಿ ವರ್ಣಿತವಾಗಿವೆ. ಕನ್ನಡನಾಡಿನ ಜನರು ‘’ಓದದೆಯೇ ಕಾವ್ಯ ಪ್ರಯೋಗದಲ್ಲಿ ನಿಪುಣರು’’ ಎಂದು ನೃಪತುಂಗನು ಹೊಗಳಿದ್ದಾನೆ.

ಮಾನ್ಯಖೇತ ಪಟ್ಟಣವನ್ನು ಕಟ್ಟಿ, ಅದನ್ನು ರಾಷ್ಟ್ರಕೂಟರ ಪ್ರಮುಖ ಪಟ್ಟಣವಾಗುವಂತೆ ಮಾಡಿದನು. ಅರಬ್ ಗ್ರಂಥಕರ್ತೃ ಸುಲೇಮಾನ್ ಅಮೋಘವರ್ಷನನ್ನು ಚೀನಾ, ಬಾಗ್ದಾದ್, ಕಾನ್‌ಸ್ಟಾಂಟಿನೋಪಲ್‌ ರಾ‍ಜರುಗಳಿಗೆ ಹೋಲಿಸಿ ಬರೆದಿದ್ದಾನೆ. ಇವನು ಹಿಂದು ಮತ್ತು ಜೈನ ಧರ್ಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಿದನು.

ಅನಂತರ ನೃಪತುಂಗನು ತನ್ನ ಸ್ವಂತ ಮಗನಾದ ಕೃಷ್ಣ ಮತ್ತು ತನ್ನ ಸೇನಾಧಿಪತಿಯಾಗಿದ್ದ ಬಂಕೆಯನ ಮಗ ಧ್ರುವನ ವಿರೋಧವನ್ನು ಎದುರಿಸಬೇಕಾಯಿತು. ಗುರ್ಜರ ಪ್ರತಿಹಾರ ವಂಶಕ್ಕೆ ಸೇರಿದ ಮೊದಲನೆಯ ಭೋಜನು ಇನ್ನೊಬ್ಬ ಪ್ರಬಲ ಶತ್ರುವಾಗಿದ್ದನು. ಈ ಎಲ್ಲ ಸಂಘರ್ಷಗಳಲ್ಲಿ ಬಹುಮಟ್ಟಿಗೆ ಜಯಶಾಲಿಯಾಗಿಯೇ ಉಳಿದಿದ್ದು ನೃಪತುಂಗನ ಸಾಮರ್ಥ್ಯ ಹಾಗೂ ಧೈರ್ಯಗಳಿಗೆ ಸಾಕ್ಷಿಯಾಗಿದೆ. ಇವರಲ್ಲದೆ ಅಂಗ, ವಂಗ, ಮಗಧ ಮತ್ತು ಮಾಳವ ರಾಜರುಗಳ ಮೇಲೆ ಕೂಡ ಅವನು ವಿಜಯಿಯಾದನೆಂದು ಹೇಳಲಾಗಿದೆ. ನರಲೋಕಚಂದ್ರ ಮತ್ತು ಸರಸ್ವತೀ ತೀರ್ಥಾವತಾರ ಎನ್ನುವುದು ಅವನ ಅನೇಕ ಬಿರುದುಗಳಲ್ಲಿ ಎರಡು.
ಅಮೋಘವರ್ಷನಿಗೆ ಶರ್ವ, ನೃಪತುಂಗ ಎಂಬ ಹೆಸರುಗಳಿವೆ. ಅತಿಶಯಧವಳ, ವೀರನಾರಾಯಣ, ಲಕ್ಷ್ಮೀವಲ್ಲಭೇಂದ್ರ, ಶ್ರೀವಲ್ಲಭ ಮತ್ತು ಮಾರ್ತಾಂಡ ಮುಂತಾದ ಬಿರುದುಗಳಿದ್ದುವು. ಇವನಿಗೆ ಶಂಖಾದೇವಿ, ಚಂದ್ರೊಬ್ಬಲಬ್ಬೆ ಎಂಬ ಇಬ್ಬರು ಹೆಣ್ಣುಮಕ್ಕಳೂ ಕೃಷ್ಣರಾಜನೆಂಬ ಮಗನೂ ಇದ್ದರು. ಈತ ಶಾಂತಿಪ್ರಿಯನಾದುದರಿಂದ ಶತ್ರುಗಳಾದ ಗಂಗ ಮತ್ತು ಪಲ್ಲವರನ್ನು ಸೋಲಿಸಿ ಅವರೊಡನೆ ಬಾಂಧವ್ಯವನ್ನು ಬೆಳೆಸಿದ. ರಾಷ್ಟ್ರಕೂಟವಂಶದಲ್ಲಿ 3ನೆಯ ಗೋವಿಂದ ದಿಗ್ವಿಜಯಗಳಿಂದ ಪ್ರಸಿದ್ಧನಾಗಿದ್ದರೆ ಅವನ ಮಗನಾದ ಅಮೋಘವರ್ಷ ತನ್ನ ರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿ ಲಲಿತಕಲೆಗಳಿಗೆ ಪ್ರೋತ್ಸಾಹವನ್ನು ಕೊಟ್ಟು ಕರ್ನಾಟಕದ ಕೀರ್ತಿಯನ್ನು ಬೆಳೆಗಿಸಿದ.

ಅಮೋಘವರ್ಷನು ಸುಮಾರು ಕ್ರಿ.ಶ.೮೭೮ರಲ್ಲಿ ನಿಧನ ಹೊಂದಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಿಳಿ ಎಕ್ಕದ ಗಿಡ

ಬಿಳಿ ಎಕ್ಕದ ಗಿಡ ವಾಸ್ತುಗೂ ಸೈ, ಆರೋಗ್ಯಕ್ಕೂ ಸೈ

ಜನಪದ ನೃತ್ಯ

ಕರ್ನಾಟಕದ ಕೆಲವೊಂದು ಜನಪದ ನೃತ್ಯಗಳು