ಕರ್ನಾಟಕ ಜಾನಪದ ನೃತ್ಯ ಮತ್ತು ಬೊಂಬೆಯಾಟದ ಸೇರಿದಂತೆ ವಿವಿಧ ಜಾನಪದ ಕಲೆಗಳನ್ನು ಹೊಂದಿದೆ
ಹಾಗೆಯೇ ಕರ್ನಾಟಕ ಜನಪದ ನೃತ್ಯ , ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ. ಕರ್ನಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ- ಈ ಪ್ರದೇಶಗಳಲ್ಲಿ ವೈಶಿಷ್ಟ್ಯ ಪಡೆದಿರುವ ನೃತ್ಯಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ.

ಸುಗ್ಗಿಯ ಕುಣಿತ :
ಸುಗ್ಗಿಯ ಕುಣಿತ ಅನೇಕ ಕಡೆಗಳಲ್ಲಿ ಪ್ರಚಾರದಲ್ಲಿದೆ. ಅದರಲ್ಲಿ ರಂಗದ ಕುಣಿತ, ಮಾರಿ ಕುಣಿತ ಎಂಬ ವಿಧಾನಗಳಿವೆ. ಸುಗ್ಗಿಯ ಸಂತೋಷ ದುಡಿದ ರೈತನಿಗೆ,ಅವನ ಕಷ್ಟ, ಶ್ರಮ, ಜಾಗರಣೆ, ಮಳೆಯ ಹಂಬಲ, ಇವೆಲ್ಲ ಕಾಳಿನ ರಾಶಿಯನ್ನು ನೋಡುವಾಗ ಮಾಯವಾಗುತ್ತವೆ. ಹಾಡು, ಕುಣಿತಗಳಲ್ಲಿ ಅವನ ಸಂತೋಷ ಹೊರಹೊಮ್ಮುತ್ತದೆ. ಒಂದು ತಮಟೆಯ ತಾಳಕ್ಕೆ ನಾಲ್ಕಾರು ಜನ ಸಾಲಾಗಿ ನಿಂತು ಹೆಜ್ಜೆಹಾಕಲು ಆರಂಭಿಸುತ್ತಾರೆ. ಒಂದು ಕೈಯಲ್ಲಿ ಬಣ್ಣದ ಚೌಕ ಹಿಡಿದು ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಬಳುಕುತ್ತ, ಕುಪ್ಪಳಿಸುತ್ತ ಕುಣಿಯುತ್ತಾರೆ. ಹಳ್ಳಿಯ ಗುಡಿಯ ಹೊರಾಂಗಣದಲ್ಲಿ ಉರಿಹಾಕಿ ತಮಟೆ ಬಾರಿಸಿ ಕೇಕೆ ಹಾಕುತ್ತಿರುವಾಗ ಹಳ್ಳಿಯ ಜನರೆಲ್ಲ ಸೇರಿ ಇದರಲ್ಲಿ ಭಾಗವಹಿಸುತ್ತಾರೆ. ಹೀಗೆಯೇ ಅನೇಕ ಬಗೆಯ ನೃತ್ಯಗಳು ಕರ್ನಾಟಕದಲ್ಲಿ ಲಭ್ಯವಾಗುತ್ತವೆ.
ಕಂಸಾಳೆ :
ಹಳೆಯ ಮೈಸೂರಿನ ಬೀಸುಕಂಸಾಳೆ ನೃತ್ಯಗಳಲ್ಲಿ ಕಂಸಾಳೆಯ ಗತ್ತಿಗನುಸಾರವಾಗಿರುವ ಹಿನ್ನಲೆ ಸಂಗೀತಕ್ಕೆ ಹೊಂದುವಂತೆ ನೃತ್ಯಗಾರರು ಆಕರ್ಷಣೀಯವಾಗಿ ಕುಣಿಯುತ್ತಾರೆ. ಕಂಸಾಳೆ ಕುಣಿತದಲ್ಲಿ ಒಂದು ಕಂಚಿನ ಬಟ್ಟಲು ಮತ್ತು ತಾಳಗಳನ್ನು ಉಪಯೋಗಿಸುತ್ತಾರೆ. ಕಂಸಾಳೆ ಪದ ಲಾವಣಿ ರೂಪದ ಹಾಡು. ನೃತ್ಯಗಾರರ ಜೊತೆಗೆ ಇಬ್ಬರು ಕಂಸಾಳೆ ಬಾರಿಸುತ್ತ ಪಲ್ಲವಿ ಹಾಡುತ್ತಾರೆ. ಒಬ್ಬ ಕಂಸಾಳೆಯನ್ನು ಬಡಿಯುತ್ತ ಬಾಗಿ ಬಳುಕಿ ಕುಣಿಯುತ್ತಾನೆ.
ಲಂಬಾಣಿಯರ ಜನಪದ ನೃತ್ಯಗಳು :
ಗುಡ್ಡಬೆಟ್ಟಗಳಲ್ಲಿ ವಾಸಿಸುವ ಲಂಬಾಣಿಯರ ಜನಪದ ನೃತ್ಯಗಳು ರಮಣೀಯವಾಗಿವೆ. ಕಸೂತಿ, ಮಣಿ, ಕನ್ನಡಿಗಳಿಂದ ಹೊಲೆದಿರುವ ಬಣ್ಣದ ಲಂಗ, ಕುಪ್ಪಸಗಳನ್ನು ತೊಟ್ಟುಕೊಂಡು, ಕಾಲುಬೆರಳುಗಳಿಂದ ತಲೆಯ ಕೂದಲಿನವರೆಗೂ ಆಭರಣಗಳನ್ನು ಧರಿಸಿ, ಕೈಗಳನ್ನು ಜೋತುಹಾಕಿ ಸಾಮೂಹಿಕವಾಗಿ ಕುಣಿಯುವಾಗ ಈ ನೃತ್ಯದ ಚಲನೆಗಳ ಲಾಲಿತ್ಯ ಎದ್ದುಕಾಣುತ್ತದೆ.
ಕೋಲಾಟ :
ಕರ್ನಾಟಕದ ಎಲ್ಲ ಕಡೆಗಳಲ್ಲೂ ಕೋಲಾಟಗಳು ಆಕರ್ಷಣೀಯವಾಗಿರುತ್ತವೆ. ಅವುಗಳಲ್ಲಿ ವೀರರಸ ಹೆಚ್ಚು. ಸೊಗಸಾದ ಗೀತೆಗಳನ್ನು ಹಾಡುತ್ತ ನರ್ತಕರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಸರಿಯಾಗಿ ಗೆಜ್ಜೆಕಾಲಿನ ಹೆಜ್ಜೆಗಳನ್ನು ಹಾಕುತ್ತ, ಕೋಲು ಹೊಯ್ಯುತ್ತ ಕುಣಿಯುತ್ತಾರೆ. ನೃತ್ಯ ಸಾಗಿದಂತೆ ಪದ್ಮ, ಚಕ್ರ, ಕೋಟೆ, ಜಡೆ ಮುಂತಾದ ಆಕೃತಿಗಳಲ್ಲಿ ನರ್ತಿಸುತ್ತಾರೆ. ಪದವನ್ನು ಚೆನ್ನಾಗಿ ಹಾಡುವವನೇ ಮುಖಂಡ. ದಿನವೆಲ್ಲ ದುಡಿದುಸೋತ ರೈತರು ಸುಗ್ಗಿಯ ದಿನಗಳ ರಾತ್ರಿ ಬೆಳದಿಂಗಳಲ್ಲಿ ಕೋಲುಗಳನ್ನು ಕುಟ್ಟುತ್ತ ಪದವನ್ನು ಹಾಡುತ್ತ ಗುಂಪುಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು. ಈ ಪದಗಳಲ್ಲಿ ಉತ್ಸಾಹ ಆನಂದ ರಸಗಳೇ ಪ್ರಧಾನ. ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವೆಡೆ ಹೆಂಗಸರೂ ಆಡುತ್ತಾರೆ. ಕೋಲಾಟಗಳಲ್ಲಿ- ಒಂಟಿಕೋಲು, ಜೋಡಿಕೋಲು, ತೊಟ್ಟಿಲುಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ. ಕೋಲಾಟವಾದ ಮೇಲೆ ಕೋಲುಗಳನ್ನು ಭೂಮಿತಾಯಿಗೆ ಒಪ್ಪಿಸುವುದರಲ್ಲೂ ಒಂದು ರೀತಿ ಇದೆ.
ವೀರಭದ್ರ ಕುಣಿತ :
ವೀರಮಕ್ಕಳ ಕುಣಿತಗಳು ಮೈಸೂರಿನಲ್ಲಿವೆ. ವೀರಕುಣಿತ ವೀರರಿಗೆ ಸಾಧ್ಯ. ಕಾಳಗಕ್ಕೆ ಮುಂಚೆಯೋ ಬೇಟೆಯ ಕೊನೆಯಲ್ಲೋ ಹುಮ್ಮಸ್ಸು ಹುರುಪುಗಳನ್ನು ಹೊರ ಸೂಸುವ ಈ ವೀರಕುಣಿತ ಆವೇಶಭರಿತವಾದುದು. ಕುಣಿವಾಗಿನ ಈ ವೀರರ ಕೇಕೆ ಹಲವಾರು ಮೈಲಿಗಳವರೆಗೆ ಕೇಳುತ್ತಿರುತ್ತದೆ.

ನಂದಿಕಂಬದ ಕುಣಿತ :
ನಂದಿಕಂಬದ ಕುಣಿತವನ್ನು (ನಂದಿಕೋಲು) ಸಾಮಾನ್ಯವಾಗಿ ಮೆರವಣಿಗೆಗಳಲ್ಲಿ ಕಾಣಬಹುದು. ಯಾವುದಾದರೂ ವಿಜೃಂಭಣೆಯ ಮೆರವಣಿಗೆ ಹೊರಟಾಗ ಅಲಂಕೃತವಾದ 30-40 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿಕೊಂಡು ತಮ್ಮಟೆಯ ತಾಳಕ್ಕೆ ಸರಿಯಾಗಿ ಕುಣಿಯುತ್ತ ಕೋಲನ್ನು ನೆಟ್ಟಗೆ ನಿಲ್ಲಿಸುವುದು ಆಶ್ಚರ್ಯಕರ.
ಕರಗದ ಕುಣಿತ :
ಕರಗದ ಕುಣಿತ ಮೈಸೂರಿನ ವಿಶೇಷ ಜನಪದ ನೃತ್ಯ. ಅಲಂಕೃತ ಕರಗವನ್ನು ತಲೆಯ ಮೇಲೆ ಧರಿಸಿ, ಭಕ್ತಿಪರವಶನಾದ ಒಬ್ಬ ನೃತ್ಯಗಾರ ವಿವಿಧ ರೀತಿಯ ಕೈಚಲನೆ, ಕಾಲುಚಲನೆಗಳಿಂದ ನರ್ತಿಸುತ್ತಾನೆ. ವಾದ್ಯಗೋಷ್ಠಿಯ ನಾದಕ್ಕೆ ಸ್ಫೂರ್ತಿಗೊಂಡು ದಿಗ್ಭ್ರಾಂತನಂತೆ ಕುಣಿದರೂ ಆತನ ತಲೆಯ ಮೇಲಿನ ಕರಗ ಒಂದಿಷ್ಟೂ ಅಲುಗಾಡುವುದಿಲ್ಲ, ತುಳುಕುವುದಿಲ್ಲ. ಜೊತೆಗೆ ಖಡ್ಗ ಹಿಡಿದು ಅವನನ್ನು ಹಿಂಬಾಲಿಸುವ ಪಂಗಡ ಆ ದೃಶ್ಯಕ್ಕೆ ಕಳೆ ಕೊಡುತ್ತದೆ. ಜಡೆ ಮತ್ತು ಚಿತ್ರಗೋಪುರ ಎಂಬವು ಕರಗದ ಇತರ ವಿಧಗಳು. ಇವುಗಳಲ್ಲದೆ ಡೊಳ್ಳುಕುಣಿತ, ಬಣಜದ ತಾಂಡ ಕುಣಿತ, ಕುದುರೆ ಕುಣಿತ, ಪುಜಾ ಕುಣಿತ, ವೀರಗಾಸೆ ಕುಣಿತ, ಪಟ್ಟಾ ಕುಣಿತ, ಮುಂತಾದ ಹಲವಾರು ಕುಣಿತಗಳಿವೆ.
ಕೊಡಗಿನ ಜನಪದ ನೃತ್ಯಗಳು :
ಕೊಡಗಿನ ಹುತ್ತರಿ ನೃತ್ಯ ಮತ್ತು ಬೊಳ್ಕಾಟ ನೃತ್ಯಗಳು ಜನಪ್ರಿಯವಾದುವು. ದೇವರ ಪುಜಾವಿಧಾನವಾದ ಈ ನೃತ್ಯವನ್ನು ಧಾರ್ಮಿಕ ಸಂದರ್ಭಗಳಲ್ಲಿ ಗಂಡಸರು ಮಾಡುತ್ತಾರೆ. ಸುಗ್ಗಿಯ ಕಾಲದಲ್ಲಿ, ಉತ್ಸವ, ಮದುವೆ ಸಮಾರಂಭಗಳಲ್ಲಿ ಕೊಡವರು ಕಪ್ಪು ಬಣ್ಣದ ಉದ್ದ ನಿಲುವಂಗಿ, ಧೋತಿ ಧರಿಸಿ, ತಲೆಗೆ ರುಮಾಲು ಸುತ್ತಿ, ಪೀಚ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆನಂದದಿಂದ ನರ್ತಿಸುತ್ತಾರೆ. ಹಾಡುಗಾರಿಕೆಯ ಜೊತೆಗೆ ಚರ್ಮವಾದ್ಯ ಬಾರಿಸುವವರು ಮಧ್ಯದಲ್ಲಿ ನಿಂತು ತಾಳವನ್ನು ಕೊಡುತ್ತಿರಲು ಸುತ್ತಲೂ ನೃತ್ಯಗಾರರು ಡಮರು ನಾದಕ್ಕೆ ಚಾಮರಗಳನ್ನು ಬೀಸಿ ನರ್ತಿಸುವ ದೃಶ್ಯ ಮೋಹಕವಾದುದು.
ತುಳುನಾಡಿನ ಜನಪದ ನೃತ್ಯಗಳು :
ತುಳುನಾಡಿನಲ್ಲಿ ಅನೇಕ ವಿಧದ ಜನಪದ ನೃತ್ಯಗಳು ರೂಢಿಯಲ್ಲಿವೆ. ಅಲ್ಲಿನ ಹರಿಜನರು ಲೇ ಲೇ ಲೇ ಲೋ ಎಂಬ ಪಲ್ಲವಿ ಹಾಡುತ್ತ ದುಡಿಯ ತಾಳಕ್ಕೆ ಕುಣಿಯುತ್ತಾರೆ. ಒಬ್ಬಾತ ದುಡಿಯನ್ನು ಬಾರಿಸುತ್ತಾನೆ. ಹೆಂಗಸರು ಬಳುಕಿ, ಬಾಗಿ, ಕೈ ಅಲುಗಿಸಿ ಹಿಂದೆ ಮುಂದೆ ಸರಿದು ಕೂಟ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕುಂದಾಪುರ, ಉಡುಪಿಯ ಹರಿಜನರಲ್ಲಿ 5-6 ಯುವಕರು ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ.
ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು, ಒಬ್ಬ ಕೊಳಲು ಬಾರಿಸುವವನು ಇರುತ್ತಾರೆ. ಹೆಂಗಸೊಬ್ಬಳು ದೊಡ್ಡ ತಾಳಗಳನ್ನು ಬಾರಿಸುತ್ತಾಳೆ. ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ. ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ. ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ.
ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ. ರಾಣಿಯಾರ್ ಪಂಗಡದವರು ಭಕ್ತಿ ಶಕ್ತಿಗಳಿಂದ ಕೋಲಾಟ ಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ. ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ. ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ, ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ.
ಭೂತನೃತ್ಯ :
ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ. ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು. ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪೂಜಿಸುತ್ತಾರೆ. ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ. ದೆವ್ವದ ಆವೇಶ ಪಡೆಯುವವರ ಜಾತಿಯೇ ಬೇರೊಂದಿದೆ. ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು. ಭಕ್ತರು ತಾವು ನಂಬುವ ಭೂತಗಳ ತೃಪ್ತಿಗಾಗಿ ಅವನ್ನು ಆಹ್ವಾನಿಸಿ, ಉಣಿಸುವರು. ಭೂತದ ಆವೇಶ ಪಡೆಯುವ ಪುಜಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮೂಡುತ್ತದೆ. ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ, ನೃತ್ಯ, ವೇಷ, ಕಿರೀಟ, ಭೂಷಣಗಳಿರುತ್ತವೆ.
ಸಾಮಾನ್ಯವಾಗಿ ಭೂತಗಳ ಉಗ್ರಸ್ವರೂಪ ಆಯಾ ವೇಷದಲ್ಲಿ ವ್ಯಕ್ತವಾಗುತ್ತದೆ. ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು. ವೈದ್ಯರೆಂಬ ಪುಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತಾರೆ. ರಂಗಮಂಟಪದಲ್ಲಿ ಮಹಾಶೇಷನ ರಂಗೋಲಿಯನ್ನು ಹಾಕಿಸುತ್ತಾರೆ. ಪುಜಾರಿ ಕೆಂಪು ರೇಷ್ಮೆಯನ್ನುಟ್ಟು ಚದುರಿದ ಕೂದಲನ್ನು ಬಿಟ್ಟು ಸುಬ್ಬರಾಯನಾಗಿ ಬಂದು ನಿಲ್ಲುತ್ತಾನೆ. ಅವನ ಮುಂದೆ ಪ್ರಕೃತಿ ಪುರುಷ ಸೂಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ.
ಹಿಮ್ಮೇಳದ ಗಾಯಕರು ದೇವರ ಲೀಲೆಗಳನ್ನು ಹಾಡುತ್ತಾರೆ. ಒಂದು ಡಮರು, ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನಾಗನರ್ತನ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ. ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ.

ಯಕ್ಷಗಾನ ಬಯಲಾಟ :
ಕನ್ನಡ ನಾಡಿನ ಯಕ್ಷಗಾನ ಬಯಲಾಟದ ಪರಂಪರೆ ಆ ಸಂಸ್ಕೃತಿಯ ಅತ್ಯಂತ ಸುಂದರವಾದ ಅಂಗವಾಗಿದೆ. ಯಕ್ಷಗಾನ ಬಯಲಾಟ ಪ್ರೇಕ್ಷಣೀಯ ನೃತ್ಯ ಸಂಪ್ರದಾಯ. ಮಹಾಭಾರತ ರಾಮಾಯಣಾದಿ ಕಥಾನಕಗಳಲ್ಲಿ ಬರುವ ಪಾತ್ರಗಳು ಅತಿಮಾನುಷ ವೇಷಭೂಷಣ, ಕಿರೀಟ, ಬಣ್ಣಲೇಪನಗಳಿಂದ ಕೂಡಿದ್ದು ಪ್ರೇಕ್ಷಕರನ್ನು ಮೈಮರೆಸುತ್ತಾರೆ. ತಾಳ ನೃತ್ಯಕ್ಕೂ ಸಂಗೀತಕ್ಕೂ ಹೊಂದಿಕೊಂಡು ಭಾವಾವೇಶವನ್ನೂ ಸ್ಫೂರ್ತಿಯನ್ನೂ ಒದಗಿಸುತ್ತದೆ.
ಸಾಹಿತ್ಯ ಪಂಡಿತ ಪಾಮರರನ್ನು ರಂಜಿಸುವಂತಿರುತ್ತದೆ. ಭಾಗವತರು ಚಂಡೆ, ಮದ್ದಳೆ, ಶ್ರುತಿ, ತಾಳಗಳೊಡನೆ ಕಥೆಯನ್ನು ಆರಂಭಿಸುತ್ತಾರೆ. ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ. ಪಾತ್ರಧಾರಿಗಳು ನರ್ತಿಸುತ್ತಿರಲು ಭಾಗವತರು ಜಾಗಟೆ ಕೋಲುಗಳಿಂದ ತಾಳ ಸೂಚಿಸುತ್ತ ಪ್ರಸಂಗದ ಸಾಹಿತ್ಯವನ್ನು ಹಾಡಿ ಸಭಿಕರಾಗಿ ಹಾಸ್ಯಗಾರರಾಗಿ ಕಥಾಸರಣಿಯನ್ನು ಮುಂದುವರಿಸುತ್ತಾರೆ. ಯಕ್ಷಗಾನ ವೀರರಸ ಪ್ರಧಾನವಾದದ್ದು.
ಧನ್ಯವಾದಗಳು.
GIPHY App Key not set. Please check settings