in

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಅನೇಕ ಸಂಗತಿಗಳು ಇದೆ

ವಿಜಯಪುರ
ವಿಜಯಪುರ

ವಿಜಯಪುರವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ. ವಿಜಯಪುರ ನಗರವು ಬೆಂಗಳೂರಿನಿಂದ ಉತ್ತರ – ಪಶ್ಚಿಮಕ್ಕೆ 520 ಕಿ.ಮೀ. ದೂರದಲ್ಲಿದೆ. ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ, ವಿಜಾಪುರ ಮತ್ತು ಬಿಜಾಪುರ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.

ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.

ಕ್ರಿ.ಶ. 1724ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.

ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು.

ತದನಂತರ ಕ್ರಿ.ಶ. 1956 ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ ಈಗಿನ ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು ಕರ್ನಾಟಕ ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು ಕರ್ನಾಟಕ ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ.

ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.

ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ.

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಅನೇಕ ಸಂಗತಿಗಳು ಇದೆ
ಆಲಿ ಅದಿಲ್ ಷಾ

ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು.

ವಿಜಯನಗರ ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು.

ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ.

ಈ ಕಿರು ಬರಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ.

ಕೋಟೆಯನ್ನು ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ ಫತೇ ದರ್ವಾಜಾ ಎಂಬ ಹೆಸರುಗಳಿಂದ ಗುರುತಿಸಲಾಗಿದೆ.

ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ.

ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ.

ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ.

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಅನೇಕ ಸಂಗತಿಗಳು ಇದೆ
ಗೋಲ್ ಗುಂಬಜ್

ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.

ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು.

ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು.

ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ.

ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು ಕರ್ನಾಟಕದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ.

ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ.

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೂತ್ರಪಿಂಡಗಳು ಮತ್ತು ಅದರ ಕಾರ್ಯ ನಿರ್ವಹಣೆ

ಮೂತ್ರಪಿಂಡಗಳು ಮತ್ತು ಅದರ ಕಾರ್ಯ ನಿರ್ವಹಣೆ

ಅಮೀಬಾ

ಒಂದೇ ಜೀವಕೋಶ ಹೊಂದಿರುವ ಪ್ರಾಣಿ ಅಮೀಬಾ