ಒಣ ಕೆಮ್ಮಿನ ಸಮಸ್ಯೆಗೆ ಆಸ್ಪತ್ರೆಯ ಔಷಧಿಗಳಿಗಿಂತ ಮನೆ ಮದ್ದುಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಶುಂಠಿ, ಜೇನು ತುಪ್ಪ, ಅರಿಶಿನ ಇತ್ಯಾದಿಗಳು ಬಹಳ ಹಳೆಯ ಕಾಲದಿಂದಲೂ ಆಯುರ್ವೇದ ಆರೋಗ್ಯ ಪದ್ಧತಿಯಲ್ಲಿ ಈ ವಿಷಯವಾಗಿ ಬಳಕೆಯಾಗುತ್ತಾ ಬಂದಿವೆ.
ಒಣಕೆಮ್ಮು ಹಿಡಿದರೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ, ಆಗಾಗ ಕೆಮ್ಮು ಬಂದರೆ ಯಾವುದೇ ಕೆಲಸವನ್ನು ಆಸಕ್ತಿವಹಿಸಿ ಮಾಡಲೂ ಸಾಧ್ಯವಾಗುವುದಿಲ್ಲ, ಸುಸ್ತು ಅನಿಸಲಾರಂಭಿಸುತ್ತದೆ. ಕೆಲವೊಂದು ಮನೆಯ ಮದ್ದು ಉಪಯೋಗಿಸಿ ಗುಣಪಡಿಸಿಕೊಳ್ಳಬಹುದು.

ಎರಡು ಏಲಕ್ಕಿಗಳನ್ನು ತೆಗೆದುಕೊಂಡು ಪುಡಿಮಾಡಿಕೊಳ್ಳಿ, ಅದಕ್ಕೆ ಒಂದು ಚಮಚ ತುಪ್ಪ, ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕಲ್ಲುಪ್ಪು ಬೆರೆಸಿದ ಮಿಶ್ರಣವನ್ನು ತೆಗೆದುಕೊಳ್ಳುವುದರಿಂದ ಒಣಕೆಮ್ಮು ಶೀಘ್ರವೇ ನಿವಾರಣೆಯಾಗುತ್ತದೆ.
ಒಣಕೆಮ್ಮು ನಿವಾರಿಸುವಲ್ಲಿ ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಜನ ಶುಂಠಿ ಟೀ ಕುಡಿಯುತ್ತಾರೆ. ಚಹಾದಲ್ಲಿ ಶುಂಠಿ ಮತ್ತು ಜೇನು ಮಿಕ್ಸ್ ಮಾಡಿ ಕುಡಿದರೆ ಇದರಿಂದ ಒಣಕೆಮ್ಮು ಮಂಗಮಾಯವಾಗುತ್ತದೆ. ಆದರೆ, ಎಚ್ಚರವಿರಲಿ, ಅಗತ್ಯಕ್ಕಿಂತ ಹೆಚ್ಚು ಶುಂಠಿ ತಿಂದರೆ ಹೊಟ್ಟೆ ಕೆಡುತ್ತದೆ.
ತುಳಸಿಯ ಚಹವನ್ನು ತಾಯಾರಿಸಿಕೊಂಡು ಕುಡಿಯುವುದು ಸಹ ನಮ್ಮ ಒಣಕೆಮ್ಮು ನಿವಾರಣೆಗೆ ಉತ್ತಮವಾದ ಪರಿಹಾರವಾಗಬಹುದು. ಒಂದು ಕಪ್ ನೀರಿಗೆ ತುಳಸಿ ದಳಗಳನ್ನು (4-8) ಹಾಕಿ ಚೆನ್ನಾಗಿ ಕುಡಿಸಿ, ನಂತರ ಉರಿಯಿಂದ ಇಳಿಸಿ ಆರಲು ಬಿಡಿ. ಉಗುರು ಬೆಚ್ಚಗಿನ ಚಹವನ್ನು ಕುಡಿಯಿರಿ. ಇದು ರೋಗಕಾರಕಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಒಣಕೆಮ್ಮಿಗೆ ಜೇನು ತುಪ್ಪ ರಾಮಬಾಣ. ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಒಣಕೆಮ್ಮಿನ ವಿರುದ್ಧ ಹೋರಾಡುವಲ್ಲಿ ನೆರವಾಗುತ್ತದೆ. ಅಲ್ಲದೆ ಗಂಟಲಿನ ಕಿಚಿಕಿಚಿ ಕೂಡಾ ನಿವಾರಿಸುತ್ತದೆ. ಹರ್ಬಲ್ ಟೀ ಅಥವಾ ಲಿಂಬೆ ನೀರಿಗೆ ಎರಡು ಚಮಚ ಜೇನು ಸೇರಿಸಿ ಕುಡಿದರೆ ಒಣಕೆಮ್ಮು ಜಾಗ ಖಾಲಿ ಮಾಡುತ್ತದೆ.
ಈರುಳ್ಳಿ ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕವಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಅನೇಕ ಉತ್ತಮ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಒಣಕೆಮ್ಮಿನ ನಿವಾರಣೆಗೆ ಚಿಕ್ಕ ಚಿಕ್ಕ ತುಂಡುಗಳಾಗಿಸಿ(5-8) ಅವುಗಳಿಗೆ ಜೇನುತುಪ್ಪವನ್ನು ಸೇರಿಸಿಕೊಂಡು ಸೇವಿಸಿರಿ. ಇದರ ಬದಲು ಈರುಳ್ಳಿಯ ರಸವನ್ನು ಅರ್ಧ ಚಮಚಗಳಷ್ಟು ತೆಗೆದುಕೊಂಡು ಅದಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಮಿಶ್ರ ಮಾಡಿ ಸೇವಿಸುವುದರಿಂದ ಒಣಕೆಮ್ಮು ನಿವಾರಣೆಯಾಗುತ್ತದೆ.
ಒಣಕೆಮ್ಮು ನಿವಾರಿಸುವಲ್ಲಿ ಪೆಪ್ಪರ್ ಮಿಂಟ್ ತುಂಬಾ ಕೆಲಸಕ್ಕೆ ಬರುತ್ತದೆ. ಯಾಕೆಂದರೆ ಇದರಲ್ಲಿ ಮೆಂಥಾಲ್ ಕಂಪೌಂಡ್ ಇರುತ್ತದೆ. ಇದು ಗಂಟಲಲ್ಲಿ ರಿಲ್ಯಾಕ್ಸ್ ಅನುಭವ ನೀಡುತ್ತದೆ. ಗಂಟಲಿನ ಉರಿ, ನೋವು ಕಡಿಮೆ ಮಾಡುತ್ತದೆ. ದಿನಕ್ಕೆ ಮೂರು ಅಥವಾ ನಾಲ್ಕು ಸಲ ಪೆಪ್ಪರ್ ಮೆಂಟ್ ತಿಂದರೆ ಒಣಕೆಮ್ಮು ದೂರ ಆಗಿಬಿಡುತ್ತದೆ.
ನಿಂಬೆರಸ ಮತ್ತು ಜೇನು ಮಿಕ್ಸ್ ಮಾಡಿ ಕುಡಿಯಿರಿ
ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು ಹಾಕಿ ಕುಡಿದರೆ ಸ್ವಲ್ಪ ನೆಮ್ಮದಿ ಅನಿಸುವುದು.

ಕೆಮ್ಮು, ಜ್ವರ ಇದ್ದಾಗ ಚಿಕನ್ ಸೂಪ್ ಕುಡಿಯುವುದು ತುಂಬಾ ಒಳ್ಳೆಯದು. ಚಿಕನ್ ಸೂಪ್ ಸುಸ್ತನ್ನು ನಿವಾರಿಸುವಲ್ಲಿ ಸಹಕಾರಿ.
ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಂಡರೆ ಕೆಮ್ಮು ಶೀತ ಕಡಿಮೆಯಾಗುವುದು. ಹೀಗೆ ಹಬೆ ತೆಗೆದುಕೊಳ್ಳುವಾಗ 2 ಹನಿ ನೀಲಗಿರಿ ಎಣ್ಣೆ ಹಾಕಿದರೆ ಒಳ್ಳೆಯದು.
ಬೆಳ್ಳುಳ್ಳಿ ಮತ್ತು ಜೇನು ಮಿಕ್ಸ್ ಮಾಡಿ ತಿನ್ನಿ
ಹೀಗೆ ಮಾಡುತ್ತಾ ಬಂದರೆ ಕೆಮ್ಮು ಕಡಿಮೆಯಾಗುವುದು. ಒಂದು ವೇಳೆ 3 ವಾರವಾದರೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರ ಭೇಟಿ ಮಾಡಬೇಕು.
ಬಿಸಿನೀರಿನಲ್ಲಿ ಪಾನಕ ಮಾಡಿ ಕುಡಿಯುವುದು. ಒಂದು ಲೋಟ ಬಿಸಿ ನೀರಿಗೆ ಕೆಂಪು ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ, ಅರ್ಧ ಲಿಂಬೆರಸ ಸೇರಿಸಬೇಕು. ಬಿಸಿಯಾಗಿಯೇ ಕುಡಿಯಬೇಕು. ಇದರಿಂದ ಕಫವಿದ್ದರೆ ಕರಗುತ್ತದೆ. ಕೆಮ್ಮಿಗೆ ತಕ್ಷಣ ಪರಿಹಾರ ಸಿಗುತ್ತದೆ.
ಕೆಂಪು ಕಲ್ಲುಸಕ್ಕರೆ ಹಾಗೂ ಒಂದು ಇಡೀ ಲಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡುತ್ತ ಚೆನ್ನಾಗಿ ಮಿಕ್ಸ್ ಮಾಡಬೇಕು. ಎರಡು ಲವಂಗವನ್ನು ಸುಟ್ಟು ಅದಕ್ಕೆ ಹಾಕಬೇಕು. ಚೆನ್ನಾಗಿ ಮಿಕ್ಸ್ ಆದ ಬಳಿಕ ಆಗಾಗ ಒಂದು ಚಮಚ ರಸವನ್ನು ತಿಂದರೆ ಗಂಟಲು ಕಿರಿಕಿರಿ ಬಹಳಷ್ಟು ಕಡಿಮೆಯಾಗುತ್ತದೆ. ಇದಕ್ಕೆ ಜ್ಯೇಷ್ಠಮಧುವನ್ನೂ ಸ್ವಲ್ಪ ಸೇರಿಸಿಕೊಳ್ಳಬಹುದು. ಇದರಿಂದ ಕಫ ಕರಗುತ್ತದೆ. ಅಲರ್ಜಿ ಕೆಮ್ಮಿದ್ದರೂ ಕಡಿಮೆಯಾಗುತ್ತದೆ.
ಮನೆಯಲ್ಲಿ ಹುಳಿಮಜ್ಜಿಗೆ ಇದ್ದರೆ ಅದಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು. ಕಫ ಕಟ್ಟಿಕೊಂಡು ಕೆಮ್ಮು ಬರುತ್ತಿದ್ದರೆ ಇದರಿಂದ ಪರಿಹಾರ ಸಿಗುತ್ತದೆ. ಅರ್ಧ ಗ್ಲಾಸ್ ಹುಳಿಮಜ್ಜಿಗೆಗೆ ಸ್ವಲ್ಪ ನೀರು ಹಾಗೂ ಜೋನಿ ಬೆಲ್ಲ ಎರಡು ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಬೇಕು. ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಕರಗಿಸಲು ಇದು ಉತ್ತಮ ಮಾರ್ಗ.

ದೊಡ್ಡಪತ್ರೆ ಸೊಪ್ಪಿನ ರಸವನ್ನು ಕಫ ಕರಗಿಸಲು ಬಳಸಬಹುದು. ದೊಡ್ಡಪತ್ರೆ ಎಲೆಯನ್ನು ಗ್ಯಾಸ್ ಒಲೆಯ ಉರಿಗೆ ಹಿಡಿದು ಬಿಸಿ ಮಾಡಿದರೆ ಅದರಿಂದ ರಸ ತೆಗೆದುಕೊಳ್ಳಬಹುದು. ಈ ರಸಕ್ಕೆ ಅರ್ಧ ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಎದೆ, ಬೆನ್ನಿಗೆ ಹಚ್ಚಿ ಮಸಾಜ್ ಮಾಡಬೇಕು. ಇದರಿಂದ ಕಫ ಕರಗುವುದು ನಿಮ್ಮ ಅರಿವಿಗೇ ಬರುತ್ತದೆ.
ಜೇನುತುಪ್ಪ, ಲಿಂಬೆರಸ ಮತ್ತು ಕೊಬ್ಬರಿ ಎಣ್ಣೆಗಳನ್ನು ಬಳಸಿಕೊಂಡು ಒಂದು ಮನೆಮದ್ದನ್ನು ತಯಾರಿಸಿ ಸೇವಿಸುವುದರಿಂದ ಈ ಸಮಸ್ಯೆಗೆ ಉಪಶಮನ ದೊರೆಯುತ್ತದೆ. ಐದು ಚಮಚಗಳಷ್ಟು ಶುದ್ಧ ಜೀನುತುಪ್ಪವನ್ನು ತೆಗೆದುಕೊಳ್ಳಿ, ಅದಕ್ಕೆ ಎರಡು ಚಮಚ ಕೊಬ್ಬರಿ ಎಣ್ಣೆ ಮತ್ತು ಒಂದು ಚಮಚ ಲಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ. ಈ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಇದರಿಂದ ಶೀಘ್ರವೇ ಒಣಕೆಮ್ಮು ನಿವಾರಣೆಯಾಗುತ್ತದೆ.
ಮೊಸರಿನಲ್ಲಿ ಒಣಕೆಮ್ಮನ್ನು ನಿವಾರಿಸುವ ಶಕ್ತಿಯು ಅಡಕವಾಗಿದೆ. ಹಾಗಾಗಿ ತಾಜಾ ಮೊಸರನ್ನು ಇಂದು ಲೋಟದಷ್ಟು ತೆಗೆದುಕೊಂಡು ಅದಕ್ಕೆ ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿಶ್ರಮಾಡಿ. ಇದನ್ನು ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಕೆಮ್ಮು ಕಡಿಮೆಯಾಗುವವರೆಗೆ ತೆಗೆದುಕೊಳ್ಳಿ. ಬೆಲ್ಲದ ಬದಲು ಸಕ್ಕರೆಯನ್ನು ಬಳಸುವಂತಿಲ್ಲ, ಏಕೆಂದರೆ ಇಲ್ಲಿ ಬೆಲ್ಲವನ್ನು ಸಿಹಿಗಾಗಿ ಬಳಸಿಲ್ಲ ಬದಲಾಗಿ ಆರೋಗ್ಯದ ದೃಷ್ಟಿ ಇಲ್ಲಿ ಅಡಕವಾಗಿದೆ.
ವೈರಸ್ ಮತ್ತು ಸೋಂಕುಗಳಿಂದ ದೇಹಕ್ಕೆ ಉಂಟಾಗುವ ತೊಂದರೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಮತ್ತೊಂದು ಮನೆಮದ್ದೆಂದರೆ ಅರಿಸಿನದ ಹಾಲು. ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಶುದ್ಧ ಅರಿಶಿನವನ್ನು ಬೆರೆಸಿ, ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಬಿಸಿ ಮಾಡಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿಕೊಂಡು ಕುಡಿಯುತ್ತ ಬನ್ನಿರಿ. ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವುದರಿಂದ ದೇಹದ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟು, ರೋಗಕಾರಕಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.
ಕರಿಮೆಣಸು ಸಹ ರೋಗನಿರೋಧಕ ಗುಣಗಳನ್ನು ನಮ್ಮ ದೇಹದಲ್ಲಿ ಅಭಿವೃದ್ಧಿ ಮಾಡುತ್ತದೆ. ಕರಿಮೆಣಸು ಸೇವಿಸುವುದರಿಂದ ಗಂಟಲಿನಿಂದ ಬಿಸಿಯಾಗಿ ಕೆಮ್ಮಿನ ಎಲ್ಲ ಲಕ್ಷಣಗಳು ದೂರವಾಗಲು ಸಹಾಯಮಾಡುತ್ತದೆ. ಅರ್ಧ ಚಮಚದಷ್ಟು (4-6) ಕರಿಮೆಣಸಿನ ಕಾಲನ್ನು ತೆಗೆದುಕೊಂಡು ಪುಡಿಮಾಡಿಕೊಳ್ಳಿ. (ಉಷ್ಣ ಪ್ರಕೃತಿಯವರು ಕಡಿಮೆ ಕರಿಮೆಣಸಿನ ಕಾಲುಗಳನ್ನು ತೆಗೆದುಕೊಳ್ಳುವುದು ಉತ್ತಮ) ಇದಕ್ಕೆ ತುಪ್ಪವನ್ನು ಬೆರೆಸಿಕೊಂಡು ಸೇವಿಸಿರಿ. ಇದರಿಂದ ನಿಮ್ಮ ಎಲ್ಲ ಕೆಮ್ಮುಗಳು ದೂರವಾಗುವುದರಲ್ಲಿ ಸಂಶಯವಿಲ್ಲ.
ಈ ಎಲ್ಲ ವಿಧಾನಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ರೋಗಕಾರಕಗಳ ವಿರುದ್ಧ ಸಮರ್ಥವಾಗಿ ಹೋರಾಡಲು ಸನ್ನದ್ದಗೊಳಿಸುತ್ತವೆ. ಇದರಿಂದಾಗಿ ನಿಮ್ಮ ದೇಹವು ಒಣಕೆಮ್ಮಿನ ವಿರುದ್ಧ ಹೋರಾಡಿ ಅದರ ನಿವಾರಣೆಗೆ ಕಾರಣವಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings