in

ಭಾರತದ ವಾಯುಗುಣ ವಿಧಗಳು

ಭಾರತದ ವಾಯುಗುಣ
ಭಾರತದ ವಾಯುಗುಣ

ಉಷ್ಣ ಮತ್ತು ಸಮಶೀತೋಷ್ಣವಲಯಗಳನ್ನು ಬೇರ್ಪಡಿಸುವ ದೇಶದ ಮಧ್ಯಭಾಗದಿಂದ ಹಾದುಹೋಗುತ್ತದಾದರೂ, ಬಹುತೇಕ ಭಾರತದ ವಾಯುಗುಣ ಉಷ್ಣವಲಯದ ಮಾನ್ಸೂನ್ ವಾಯುಗುಣವಾಗಿದೆ. ಭಾರತದ ವಾರ್ಷಿಕ ವಾಯುಗುಣವನ್ನು ನಾಲ್ಕು ಋತುಗಳನ್ನಾಗಿ ವಿಂಗಡಿಸಬಹುದು. ಅವೇನೆಂದರೆ ಚಳಿಗಾಲ ಬೇಸಿಗೆಕಾಲ, ನೈಋತ್ಯ ಮಾನ್ಸೂನ್ ಅಥವಾ ಮಳೆಗಾಲ ಈಶಾನ್ಯ ಮಾನ್ಸೂನ್ ಅಥವಾ ನಿರ್ಗಮನ ಮಾನ್ಸೂನ್ ಕಾಲ. ಕೋಪೆನ್ ಪದ್ಧತಿಯ ಪ್ರಕಾರ ಭಾರತದ ವಾಯುಗುಣವನ್ನು ಆರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು. ಅವೆಂದರೆ ಉಷ್ಣವಲಯದ ತೇವಾಂಶಭರಿತ ವಾಯುಗುಣ ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ ಉಷ್ಣವಲಯದ ಅರೆ ಶುಷ್ಕ ವಾಯುಗುಣ ಮರುಭೂಮಿ ವಾಯುಗುಣ ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ ಆಲ್ಪೈನ್ ವಾಯುಗುಣ.
ಬಹುತೇಕ ಉಷ್ಣವಲಯದ ಪ್ರದೇಶಗಳಂತೆ ಭಾರತದ ವಾಯುಗುಣವೂ ಕೂಡ ಅತ್ಯಂತ ಅಸ್ಠಿರವಾಗಿದ್ದು, ಆಗಾಗ್ಗೆ ಬರ, ಪ್ರವಾಹ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ. ಒಂದು ವ್ಯಾಪಕವಾದ ಒಮ್ಮತಾಭಿಪ್ರಾಯದಂತೆ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಬದಲಾಗುತ್ತಿರುವ ಸಸ್ಯವಲಯಗಳಿಂದಾಗಿ ಪ್ರಾಕೃತಿಕ ವಿಕೋಪಗಳ ಆವರ್ತನ ಬದಲಾಗುತ್ತಿದ್ದು ಅವು ಮತ್ತಷ್ಟು ಹಾನಿಕಾರಕವಾಗುವ ಸಂಭವವಿದೆ.

ಭಾರತವು ವೈವಿಧ್ಯಮಯ ವಾಯುಗುಣಗಳಿಗೆ ನೆಲೆಯಾಗಿದೆ. ಇಲ್ಲಿ ದಕ್ಷಿಣದಲ್ಲಿ ಉಷ್ಣವಲಯದ ವಾಯುಗುಣವಿದ್ದರೆ, ಇನ್ನೊಂದೆಡೆ ಉತ್ತರದಲ್ಲಿ ಆಲ್ಪೈನ್ ವಾಯುಗುಣ ಕಂಡುಬರುತ್ತದೆ. ಈ ದೇಶದ ವಾಯುಗುಣವು ಹಿಮಾಲಯ ಮತ್ತು ಥಾರ್ ಮರುಭೂಮಿಗಳಿಂದ ಅತ್ಯಂತ ಪ್ರಭಾವಿತವಾಗಿದೆ. ಹಿಮಾಲಯ ಮತ್ತು ಪಾಕಿಸ್ತಾನದಲ್ಲಿನ ಹಿಂದೂ ಕುಶ್ ಪರ್ವತಗಳು ಮಧ್ಯ ಏಷ್ಯಾದಿಂದ ಬೀಸುವ ಶೀತಲ ಮಾರುತುಗಳನ್ನು ತಡೆಯುವದರಿಂದ, ಭಾರತವು ಇದೇ ಅಕ್ಷಾಂಶದಲ್ಲಿರುವ ಇತರೆ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಥಾರ್ ಮರುಭೂಮಿಯು, ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳಲ್ಲಿ ಉಂಟಾಗುವ ಭಾರತದ ಬಹುಭಾಗ ಮಳೆಗೆ ಕಾರಣವಾದ ತೇವಾಂಶಭರಿತ ನೈಋತ್ಯ ಮಾರುತಗಳನ್ನು ಭಾರತದೆಡೆಗೆ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಉಷ್ಣವಲಯದ ತೇವಾಂಶಭರಿತ ವಾಯುಗುಣ

ಉಷ್ಣವಲಯದ ಮಳೆಬೀಳುವ ವಾಯುಗುಣದ ಪ್ರದೇಶಗಳು ನಿರಂತರ ಬೆಚ್ಚಗಿದ್ದು, ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ ೧೮°C (೬೪°F) ಗಿಂತ ಕಡಿಮೆಯಾಗುವದಿಲ್ಲ. ಉಷ್ಣವಲಯದ ತೇವಾಂಶಭರಿತ ವಾಯುಗುಣ ಪ್ರದೇಶಗಳು ಅತಿ ಹೆಚ್ಚು ತೇವಾಂಶವನ್ನು ಹೊಂದಿರುತ್ತವೆ. ಮಲಬಾರ್ ತೀರ, ಪಶ್ಚಿಮ ಘಟ್ಟಗಳು, ದಕ್ಷಿಣ ಅಸ್ಸಾಂ ಮತ್ತು ದ್ವೀಪ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಅಂಡಮಾನ್ – ನಿಕೋಬಾರ್ ಗಳಲ್ಲಿ ಇಂಥಹ ಹವಾಗುಣ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ೨೦೦೦ ಮಿ.ಮೀ ಗಿಂತಲೂ ಹೆಚ್ಚು ಮಳೆಯಗುತ್ತದೆ. ಇಲ್ಲಿ ಬಹು ಅಂಶ ಮಳೆ ಮೇ ಮತ್ತು ನವೆಂಬರ್ ತಿಂಗಳುಗಳ ಮಧ್ಯ ಉಂಟಾದರೂ ಇದು ಇಲ್ಲಿನ ಸಸ್ಯ ವರ್ಗ ವರ್ಷವಿಡೀ ಹಚ್ಚ ಹಸಿರಾಗಿರುವಷ್ಟು ತೇವಾಂಶವನ್ನು ವದಗಿಸುತ್ತದೆ. ವ್ಯಾಪಕವಾಗಿ ಸುರಿಯುವ ಮಾನ್ಸೂನ್ ಮಳೆಯಿಂದಾಗಿ ಇಲ್ಲಿ ಅತ್ಯಧಿಕ ಜೈವಿಕ ವೈವಿಧ್ಯತೆ ಕಂಡುಬರುತ್ತದೆ.

ಭಾರತದ ವಾಯುಗುಣ ವಿಧಗಳು
ಲಕ್ಷದ್ವೀಪ ಮತ್ತು ಅಂಡಮಾನ್ ವಾಯುಗುಣ

ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ :

ಉಷ್ಣವಲಯದ ತೇವಾಂಶಭರಿತ ಪ್ರದೇಶಗಳಿಗಿಂತ ಗಮನಾರ್ಹವಾಗಿ ವಣ ಹವೆ ಹೊಂದಿದ್ದು, ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣವು ಪಶ್ಚಿಮ ಘಟ್ಟಗಳ ಮಳೆ ನೆರಳು ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಪರ್ಯಾಯ ದ್ವೀಪದ ಬಹುತೇಕ ಭಾಗಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಛಳಿಗಾಲ ಮತ್ತು ಬೇಸಿಗೆ ಕಾಲಗಳು ಅತ್ಯಂತ ವಣ ಹವೆ ಹೊಂದಿದ್ದು, ಬೇಸಿಗೆ ಕಾಲದಲ್ಲಿ ಉಷ್ಣತೆ ಅತ್ಯಂತ ಹೆಚ್ಚಾಗಿರುತ್ತದೆ. ಮೇ ತಿಂಗಳಿನಲ್ಲಿ ಮೈದಾನ ಪ್ರದೇಶಗಳಲ್ಲಿ ಉಷ್ಣತೆ ೫೦°C ಗಿಂತ ಹೆಚ್ಚಾಗುವ ಸಂಭವವಿದ್ದು, ಉಷ್ಣ ಹವೆಯಿಂದಾಗಿ ಹಲವಾರು ಜನರ ಪ್ರಾಣಕ್ಕೆ ಅಪಾಯವುಂಟಾಗುತ್ತದೆ. ಇಲ್ಲಿ ಮಳೆಗಾಲವು ಜೂನ್ ಮತ್ತು ಸೆಪ್ಟಂಬರ್ ತಿಂಗಳುಗಳ ಮಧ್ಯ ಕಂಡುಬರುತ್ತದೆ. ಈ ಕಾಲದಲ್ಲಿ ಈ ಪ್ರದೇಶದಲ್ಲಿ ಸರಾಸರಿ ೭೫೦-೧೫೦೦ ಮಿ.ಮೀ ಮಳೆ ಸಂಭವಿಸುತ್ತದೆ.

ಉಷ್ಣವಲಯದ ಶುಷ್ಕ ವಾಯುಗುಣ :

ಉಷ್ಣವಲಯದ ಶುಷ್ಕ ವಾಯುಗುಣವು ಮಳೆಯಿಂದ ದೊರಕುವ ತೇವಾಂಶಕ್ಕಿಂತ ಬಾಷ್ಪೀಕರಣದಿಂದ ಕಳೆದು ಹೋಗುವ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ; ಇದನ್ನು ಮೂರು ಉಪ ವಾಯುಗುಣಗಳನ್ನಾಗಗಿ ವಿಂಗಡಿಸಬಹುದು. ಮೊದಲನೆಯದಾಗಿ ಉಷ್ಣವಲಯದ ಅರೆ ಶುಷ್ಕ ವಾಯುಗುಣ; ಇದು ಪಶ್ಚಿಮ ಘಟ್ಟಗಳ ಮಳೆ ನೆರಳು ಪ್ರದೇಶಗಳಲ್ಲಿ ಕಂಡುಬರುತ್ತದೆ, ಇಲ್ಲಿ ೪೦೦-೭೦೦ ಮಿ.ಮೀ ಮಳೆ ಉಂಟಾಗುತ್ತದೆ. ಇದು ಕರ್ನಾಟಕದ ಬಯಲು ಪ್ರದೇಶ, ತಮಿಳುನಾಡಿನ ಒಳನಾಡು ಪ್ರದೇಶ, ಪಶ್ಚಿಮ ಆಂಧ್ರ ಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರವನ್ನು ಒಳಗೊಂಡಿದೆ. ಮಾನ್ಸೂನ್ ಆಗಮನದಲ್ಲಿ ಆಗುವ ತಡ ಮತ್ತು ಅನಿಶ್ಚಿತ ಮಳೆಯಿಂದಾಗೆ ಈ ಭಾಗವು ಆಗಾಗ ಬರ ತುತ್ತಾಗುತ್ತದೆ. ಭಾರತದ ಪಶ್ಚಿಮದ ಭಾಗದ ಗುಜರಾತ್ ನಲ್ಲಿ ವಾಯುಗುಣ ವೈವಿಧ್ಯಮಯವಾಗಿದೆ. ಚಳಿಗಾಲದಲ್ಲಿ ಹಗಲಿನ ತಾಪಮಾನ ಸರಾಸರಿ ೨೯°C (೮೪°F) ಆಗಿದ್ದು, ರಾತ್ರಿಯಲ್ಲಿ ಉಷ್ಣತೆ ೧೨°C (೫೪°F)ನ ಆಸುಪಾಸು ಇರುತ್ತದೆ. ಆಕಾಶವು ಹಗಲು ಮತ್ತು ರಾತ್ರಿ ಮೋಡಗಳಿಲ್ಲದೆ ಶುಭ್ರವಾಗಿರುತ್ತವೆ. ಬೇಸಿಗೆಯಲ್ಲಿ ಹಗಲಗಳು ಬಿಸಿ ಮತ್ತು ಶುಷ್ಕವಾಗಿದ್ದು ಸರಾಸರಿ ತಾಪಮಾನ ೪೧ ° C (೧೦೬ ° F) ಇರುತ್ತದೆ. ರಾತ್ರಿಗಳಲ್ಲಿ ಉಷ್ಣತೆ ೨೯ ° C (೮೪ ° F) ಗಿಂತ ಅಧಿಕವಾಗಿರುತ್ತದೆ. ಮಾನ್ಸೂನ್ ಬರುವಿಗೂ ಮೊದಲು ತಾಪಮಾನ ಬೇಸಿಗೆಗಿಂತ ಬೇರೆಯಾಗಿರದಿದ್ದರೂ, ಅತಿಯಾದ ಆರ್ದ್ರತೆಯಿಂದಾಗಿ ವಾತಾವರಣ ಅಹಿತಕರವಾಗಿರುತ್ತದೆ. ಮಾನ್ಸೂನಿನ ಆಗಮನದಿಂದ ಉಷ್ಣತೆ ಕಡಿಮೆ ಮತ್ತು ತೇವಾಂಶ ಅಧಿಕವಾಗುತ್ತದೆ; ಹಗಲಿನಲ್ಲಿ ತಾಪಮಾನ ಸರಾಸರಿ ೩೫°C (೯೫°F) ಮತ್ತು ರಾತ್ರಿ ೨೭°C (೮೧°F) ಇರುತ್ತದೆ. ಈ ಮಳೆ ಋತುವಿನಲ್ಲಿ ಸಂಭವಿಸುತ್ತದೆ ಮತ್ತು ಕೆಲವೊಮ್ಮೆ ತೀವ್ರ ಪ್ರವಾಹಗಳು ಕಂಡುಬರುತ್ತವೆ. ಥಾರ್ ಮರುಭೂಮಿಯ ಪೂರ್ವದಲ್ಲಿರುವ ಪಂಜಾಬ್, ಹರ್ಯಾಣ ಮತ್ತು ಆಸುಪಾಸಿನ ಭಾಗಗಳಲ್ಲಿ ಉಷ್ಣವಲಯದ ಸ್ಟೆಪ್ಪಿ ವಾಯುಗುಣ ಕಂಡುಬರುತ್ತದೆ. ಈ ಭಾಗಗಳಲ್ಲಿನ ತಾಪಮಾನ ಬೇಸಿಗೆಯಲ್ಲಿ ೫೦°C ಇಂದ ಛಳಿಗಾಲದಲ್ಲಿ -೨°C ಗಳಷ್ಟು ಬದಲಾವಣೆ ಕಂಡುಬರುತ್ತದೆ.

ಮರುಭೂಮಿ (ಶುಷ್ಕ) ವಾಯುಗುಣ :

ಭಾರತದ ವಾಯುಗುಣ ವಿಧಗಳು
ಮರುಭೂಮಿ ವಾಯುಗುಣ

ರಾಜಸ್ಥಾನದ ಬಹುತೇಕ ಭಾಗಗಳು ಉಷ್ಣವಲಯದ ಶುಷ್ಕ ವಾಯುಗುಣಕ್ಕೆ ಒಳಪಟ್ಟಿವೆ. ಇಲ್ಲಿ ವಾರ್ಷಿಕ ಸರಾಸರಿ ೩೦೦ ಮಿ.ಮೀ ಗಿಂತಲೂ ಕಡಿಮೆ ಮಳೆ ಉಂಟಾಗುತ್ತದೆ. ಇಲ್ಲಿ ಬಹುಭಾಗ ಮಳೆ ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳ ಮಧ್ಯ ಉಂಟಾಗುವ ಮೋಡಗಳ ಸ್ಫೋಟದಿಂದ ಉಂಟಾಗುತ್ತದೆ. ಇಂಥ ಮಳೆ ಅನಿರ್ದಿಷ್ಟವಾಗಿದ್ದು, ಒಂದು ವರ್ಷ ಮಳೆ ಬಂದರೆ ಮತ್ತೆರೆಡು ವರ್ಷ ಮಳೆ ಕಾಣದಿರಬಹುದು. ಗಾಳಿಯಲ್ಲಿ ನಿರಂತರವಾಗಿ ಉಂಟಾಗುವ ಕೆಳಮುಖ ವಾಯು ಪ್ರವಾಹ ಮತ್ತು ಇತರೆ ಕಾರಣಗಳು ವಾತಾವರಣದಲ್ಲಿರುವ ತೇವಾಂಶ ಮಳೆಯಾಗಿ ಸುರಿಯದಂತೆ ತಡೆಯುತ್ತವೆ. ಬೇಸಿಗೆಯ ತಿಂಗಳುಗಳಾದ ಮೇ ಮತ್ತು ಜೂನ್ ನಲ್ಲಿ ಉಷ್ಣತೆ ಅತ್ಯಂತ ಹೆಚ್ಚಾಗಿರುತ್ತದೆ, ಸರಾಸರಿ ಮಾಸಿಕ ಉಷ್ಣತೆ ೩೫°C (೧೨೨°F) ಆಸುಪಾಸು ಇರುತ್ತದೆ. ಕೆಲವು ದಿನಗಳಲ್ಲಿ ಗರಿಷ್ಥ ತಾಪಮಾನ ೫೦°C (೧೨೨°F) ಗಿಂತಲೂ ಹೆಚ್ಚಾಗಿರುತ್ತದೆ. ಮಧ್ಯ ಏಷ್ಯಾದಿಂದ ಬೀಸುವ ಶೀತಲ ಮಾರುತಗಳಿಂದ ಛಳಿಗಾಲದಲ್ಲಿ ಕೆಲವೊಮ್ಮೆ ಉಷ್ಣತೆ ಸೊನ್ನೆ ಡಿಗ್ರಿಗಿಂತಲೂ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ದೈನಂದಿನ ಉಷ್ಣತೆಯ ಶ್ರೇಣಿ ೧೪°C (೨೫.೨°F) ಗಿಂತಲೂ ಅಧಿಕವಾಗಿದ್ದು, ಅದು ಛಳಿಗಾಲದಲ್ಲಿ ಇನ್ನೂ ಹೆಚ್ಚಾಗುತ್ತದೆ.

ಉಪ ಉಷ್ಣವಲಯದ ಮಳೆ ಬೀಳುವ ವಾಯುಗುಣ :

ಬಹುತೇಕ ಈಶಾನ್ಯ ಭಾರತ ಮತ್ತು ಉತ್ತರ ಭಾರತದ ಬಹುಭಾಗ ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ ಹೊಂದಿವೆ. ಈ ಭಾಗಗಳಲ್ಲಿ ಬೇಸಿಗೆ ಕಡುವಾದರೂ ಚಳಿಗಾಲದಲ್ಲಿ ಕನಿಷ್ಟ ತಾಪಮಾನ ೦°C (೩೨°F) ಗಿಂತಲೂ ಕಡಿಮೆ ಆಗಬಹುದು. ಸಾಕಷ್ಟು ಮಾನ್ಸೂನ್ ಮಳೆಯ ಕಾರಣ, ಕೋಪೆನ್ ಪದ್ಧತಿಯ ಪ್ರಕಾರ ಈ ಹವಾಮಾನದ ಉಪಮಾದರಿ ಕೇವಲ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಶಕ್ತಿಶಾಲಿ ಪ್ರತಿಚಕ್ರವಾತ ಮತ್ತು ಮಧ್ಯ ಏಷ್ಯಾದ ಎತ್ತರದ ಪ್ರದೇಶಗಳಿಂದ ಬೀಸುವ ಶೀತಲ ಮಾರುತಗಳಿಂದಾಗಿ ಚಳಿಗಾಲದಲ್ಲಿ ಅತಿ ಕಡಿಮೆ ಮಳೆ ಬೀಳುತ್ತದೆ. ಚಳಿಗಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಿಂದ ಬೀಸುವ ಆವರ್ತಮಾರುತಗಳಿಂದ ಕೆಲವೊಮ್ಮೆ ಮಳೆ ಮತ್ತು ಹಿಮಪಾತ ಉಂಟಾಗುತ್ತವೆ. ಬೇಸಿಗೆಯಲ್ಲಿ ಬಹುಪಾಲು ಮಳೆ ಪ್ರಬಲ ಗುಡುಗು ಮಿಂಚುಗಳಿಂದ ಕೂಡಿದ ಬಿರುಗಾಳಿ ಮಳೆಯಿಂದಾಗಿ ಸಂಭವಿಸುವುದು. ಮುಖ್ಯವಾಗಿ ಮನ್ಸೂನ್ ಮಾರುತಗಳಿಂದಾಗಿ ಈ ಭಾಗದ ಪಶ್ಚಿಮದಲ್ಲಿ ೧,೦೦೦ ಮಿ.ಮೀ ನಿಂದ ಈಶಾನ್ಯದಲ್ಲಿ ೨,೫೦೦ ಮಿ.ಮೀ ವಾರ್ಷಿಕ ಮಳೆ ಬೀಳುತ್ತದೆ. ಈ ಪ್ರದೇಶದ ಸಮುದ್ರದಿಂದ ಅತ್ಯಂತ ದೂರ ಇದ್ದು, ಖಂಡಾತರ ಹವಾಮಾನವನ್ನು ಹೊಂದಿದೆ. ಆದ್ದರಿಂದ ಇಲ್ಲಿ ಸರಾಸರಿ ತಾಪಮಾನದಲ್ಲಿ ೨೭°C (೮೧°F) ನಷ್ಟು ವ್ಯತ್ಯಾಸ ಕಂಡುಬರುತ್ತದೆ.

ಪರ್ವತ ಮಾದರಿ ವಾಯುಗುಣ :

ಭಾರತದ ಉತ್ತರದ ತುದಿಯ ಹಿಮಾಲಯ ಶ್ರೇಣಿಗಳಲ್ಲಿ ಪರ್ವತೀಯ ಅಥವಾ ಆಲ್ಪೈನ್ ವಾಯುಗುಣ ಕಂಡುಬರುತ್ತದೆ. ಸೂರ್ಯನ ನೇರ ಕಿರಣ ಬೀಳುವ ಮತ್ತು ಸೂರ್ಯನ ನೆರಳಿಗೆ ಒಳಪಡುವ ಇಳಿಜಾರು ಪ್ರದೇಶಗಳ ಮಧ್ಯದ ತಾಪಮಾನದ ವ್ಯತ್ಯಾಸ, ತಾಪಮಾನದಲ್ಲಿ ಉಂಟಾಗುವ ದೈನಿಂದನ ಏರಿಳಿತ, ಮತ್ತು ಪರ್ವತದ ಎತ್ತರದ ಮೇಲೆ ಅವಲಂಬಿತ ಮಳೆಯಿಂದಾಗಿ ಹಿಮಾಲಯ ಪರ್ವತಗಳಲ್ಲಿ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಅತಿ ಹೆಚ್ಛು ತಾಪಮಾನದ ವ್ಯತ್ಯಾಸ ಕಂಡುಬರುತ್ತದೆ. ಉತ್ತರ ಹಿಮಾಲಯದ ವಾಯುಗುಣ ವಣ ಹವೆ ಹೊಂದಿರುವ ತಂಪು ಮರುಭೂಮಿಯಾಗಿದೆ. ಇಲ್ಲಿ ಕೇವಲ ಹಿಮಪಾತದ ರೂಪದಲ್ಲಿ ಮಳೆ ಉಂಟಾಗುತ್ತದೆ. ಆದರೆ, ಹಿಮಾಲಯದ ದಕ್ಷಿಣ ಭಾಗಗಳು ಮಾನ್ಸೂನಿನಿಂದ ಪ್ರಭಾವಿತವಾಗಿದ್ದು, ಇಲ್ಲಿ ಮಳೆ ಉಂಟಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಗ್ನಿ ದೇವತೆ

ಅಗ್ನಿ : ಹಿಂದೂ ದೇವತೆ

ಮೃದಂಗ

ಮೃದಂಗ ಲಯ ವಾದ್ಯ