in ,

ಚಕ್ರದ ಆವಿಷ್ಕಾರದ ಅನಂತರ ಬಳಕೆಯಾಗುತ್ತ ಬಂದ ಒಂದು ವಾಹನ ರಥ

ರಥ ಚಕ್ರ
ರಥ ಚಕ್ರ

ರಥವು ಮನುಕುಲದ ಇತಿಹಾಸದಲ್ಲಿ ಚಕ್ರದ ಆವಿಷ್ಕಾರದ ಅನಂತರ ಬಳಕೆಯಾಗುತ್ತ ಬಂದ ಒಂದು ವಾಹನ ವಿಶೇಷ.

ಶಬ್ದಕಲ್ಪದ್ರುಮ ಗ್ರಂಥದಲ್ಲಿ ರಮ್ಯತೇ ಅನೇಕ ಅತ್ರ ಇತಿ ರಥ ಎಂದು ಹೇಳಿದೆ. ಇದರಲ್ಲಿ ಕುಳಿತು ಆನಂದ ಪಡೆಯುವುದರಿಂದ ರಥ ಎಂದು ಹೆಸರಿಸಲಾಗಿದೆ. ಲೌಕಿಕ ಸಂದರ್ಭದಲ್ಲಿ ಬೇರೆ ಬೇರೆಯ ಉದ್ದೇಶಗಳಿಗೆ ಬಳಕೆಯಾಗುವ ರಥಗಳಿಗೆ ಬೇರೆ ಬೇರೆ ಹೆಸರುಗಳಿವೆ.
*ಯುದ್ಧಕ್ಕೆ ಬಳಸುವ ರಥಗಳಿಗೆ ಚಕ್ರಿಣಿ, ಶತಾಂಗ, ಸೃಂದನವೆಂದೂ
*ಕ್ರೀಡಾ ಉದ್ದೇಶಕ್ಕೆ ಬಳಸುವ ರಥಗಳಿಗೆ ಪುಷ್ಯರಥಗಳೆಂದೂ
*ಪ್ರವಾಸ, ಯಾತ್ರೆಗಳಿಗೆ ಬಳಸುವ ರಥಕ್ಕೆ ಕರ್ಣೀ, ಪ್ರವಹಣ, ಡಯನವೆಂದೂ
*ದೇವತೆಗಳ ಉತ್ಸವಕ್ಕೆ ಬಳಸುವ ರಥಗಳಿಗೆ ಮರುದ್ರಥಗಳೆಂದೂ ಹೆಸರುಗಳಿವೆ.
ಮೊದಮೊದಲು ಉತ್ಸವಾದಿಗಳಿಗೆ ಅಥವಾ ರಾಜರ ಮೆರವಣಿಗೆಗಳಿಗೆ ಬಳಕೆಯಾಗುತ್ತಿದ್ದ ರಥ ಕ್ರಮೇಣ ಯುದ್ಧ, ಸ್ಪರ್ಧೆ ಮತ್ತು ಬೇಟೆ ಇತ್ಯಾದಿ ಉದ್ದೇಶಗಳಿಗೆ ಬಳಕೆಯಾಗತೊಡಗಿತು.

ಪ್ರಾಚೀನ ನಾಗರಿಕತೆಯ ಹಂತದಲ್ಲಿ ಕಂಡುಬರುವ ರಥಗಳ ಕಲ್ಪನೆ ಮತ್ತು ಸ್ವರೂಪಗಳು ಸಾರ್ವತ್ರಿಕವಾದವು. ಕ್ರಿ. ಪೂ. ಸು. 3000 ದ ಹೊತ್ತಿಗೆ ಮೆಸೊಪೊಟೇಮಿಯದಲ್ಲಿ `ರಥ ದ ಕಲ್ಪನೆ, ವಿನ್ಯಾಸ ಉಗಮಗೊಂಡಿತು ಎಂದು ಬಹುಪಾಲು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಉರ್ ಮತ್ತು ಟಟೂಗಳ ಸಂಘರ್ಷಗಳಲ್ಲಿ ಭಾರೀಗಾತ್ರದ ತುಂಬು ಚಕ್ರದ, ಚರ್ಮದ ಹೊದಿಕೆಗಳುಳ್ಳ ರಥಗಳು ಕೆಲವು ಸ್ಮಾರಕಗಳಲ್ಲಿ ಗೋಚರಿಸುತ್ತವೆ.

ಚಕ್ರದ ಆವಿಷ್ಕಾರದ ಅನಂತರ ಬಳಕೆಯಾಗುತ್ತ ಬಂದ ಒಂದು ವಾಹನ ರಥ
ರಥ

ರಥ ಎಂದರೆ, ಸಾಮಾನ್ಯವಾಗಿ ಎರಡು ಚಕ್ರಗಳುಳ್ಳ, ಎರಡು ಕುದುರೆಗಳಿಂದ ಎಳೆಯಲಾಗುವ ಲಘುವಾಹನವೆಂದೇ ತಿಳಿಯಲಾಗಿದೆ. ಯುದ್ಧದಲ್ಲಿ ಮೊತ್ತಮೊದಲು ಸುಮೇರಿಯನ್ನರು ಕ್ರಿ.ಪೂ.ಸು. 2900 ರಲ್ಲಿ ರಥವನ್ನು ಬಳಸಿದರು. ಇದನ್ನು ನಾಲ್ಕು ಹೋರಿಗಳು ಅಥವಾ ಕತ್ತೆಗಳು ಎಳೆಯುತ್ತಿದ್ದವು. ಭಾರೀ ಗಾತ್ರದ ನಾಲ್ಕು ಚಕ್ರಗಳು ಭಾರೀ ವಾಹನದಂತೆ ಇರುತ್ತಿತ್ತು. ಮರದಿಂದ ತಯಾರಾದ ತುಂಬು ಚಕ್ರ ಹಾಗೂ ಈ ಚಕ್ರಕ್ಕೆ ತಾಮ್ರದ ಪಟ್ಟಿಕೆಗಳನ್ನು ಹೊದಿಸಲಾಗುತ್ತಿತ್ತು. ಸಾರಥಿ ಮತ್ತು ರಥಿಕರು ರಥದಲ್ಲಿ ಸೇರಿಕೊಳ್ಳುವ ವ್ಯವಸ್ಥೆ ಇದ್ದು, ಈಟಿ, ಭರ್ಜಿ ಮತ್ತು ಕೊಡಲಿಗಳಂಥ ಆಯುಧಗಳನ್ನು ಇಟ್ಟುಕೊಳ್ಳಲೂ ಸ್ಥಳಾವಕಾಶ ಇರುತ್ತಿತ್ತು. ಹೈಕ್ಸಸ್‍ಗಳು ಈಜಿಪ್ಟಿಯನ್ನರ ಮೇಲೆ ದಿಗ್ವಿಜಯ ಸಾರುವಾಗ ಇಂಥ ವಾಹನವನ್ನು ಬಳಸಿದರು. ಈಜಿಪ್ಟಿಯನ್ನರಲ್ಲಿ ಯುದ್ಧ, ಯಾತ್ರೆ ಅಥವಾ ಸಾಮಾನ್ಯ ನೋಟಕ್ಕೂ ಇದೇ ಸ್ವರೂಪದ ರಥಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಆರು ಅರೆಕಾಲುಗಳುಳ್ಳ ಎರಡು ಚಕ್ರಗಳು ,ಕೆಲವೊಮ್ಮೆ ಎಂಟು ಅಥವಾ ನಾಲ್ಕು ಅರೆಕಾಲುಗಳೂ ಇರಬಹುದು. ಅಚ್ಚು ಮತ್ತು ಅಡ್ಡಪಟ್ಟಿಕೆಗಳನ್ನು ಕೂರಿಸಿ, ಅಚ್ಚಿನ ಮೇಲೆ ರಥದ ನಿರ್ಮಾಣ ಮಾಡಲಾಗುತ್ತಿತ್ತು. ವೈವಿಧ್ಯಮಯವಾಗಿ ರಥಗಳನ್ನು ಸಿಂಗರಿಸಲಾಗುತ್ತಿತ್ತು. ಯುದ್ಧ ಸಂದರ್ಭಗಳಲ್ಲಿ ರಥಕ್ಕೆ ಹೆಚ್ಚಿನ ನಷ್ಟ ಸಂಭವಿಸುತ್ತಿರಲಿಲ್ಲ. ಅಪರೂಪಕ್ಕೆ ಎಂಬಂತೆ ರಥದ ಹಿಂಬದಿಗೋ ಅಥವಾ ಎಳೆಯುತ್ತಿರುವ ಕತ್ತೆ, ಹೋರಿ, ಕುದುರೆಗಳ ಪಕ್ಕೆಲುಬುಗಳಿಗೋ ಸ್ವಲ್ಪ ಏಟು ಬೀಳುತ್ತಿತ್ತು.

ರಥಗಳ ಬೆಳೆವಣಿಗೆಯ ಹಂತ ಕೂಡ ಕುತೂಹಲಕರವಾದುದು. ಪ್ರಾರಂಭಿಕ ಹಂತದಲ್ಲಿ ತುಂಬು ಚಕ್ರಗಳ ಭಾರೀ ರಥಗಳನ್ನು ನಾಲ್ಕಾರು ಕತ್ತೆ ಹೋರಿಗಳು ಎಳೆಯುತ್ತಿದ್ದುದನ್ನು ನೋಡಿದರೆ ಕ್ರಿ.ಪೂ.ಸು. 1500ರ ವೇಳೆಗೆ ಕಂಡುಬರುವ ಅರೆಕಾಲುಗಳುಳ್ಳ ಚಕ್ರದ ಶೋಧನೆ. ಎರಡು ಚಕ್ರಗಳ ರಥದ ಆವಿಷ್ಕಾರಕ್ಕೆ ಕಾರಣವಾಯಿತು. ಇದರಿಂದ ರಥದ ಸ್ವರೂಪ ಸರಳವಾಯಿತು. ಗಾತ್ರವೂ ಕಿರಿದಾಗಿ ಹಗುರ ಪ್ರಮಾಣದ ರಥನಿರ್ಮಾಣ ಮೊದಲಾಯಿತು. ಈ ಎಲ್ಲ ಬೆಳೆವಣಿಗೆಗಳು ಮತ್ತು ಬದಲಾವಣೆಗಳು ರಥದ ಚಲನೆಯ ವೇಗವನ್ನು ಹೆಚ್ಚಿಸಿದವು. ವೇಗವರ್ಧನೆ ರಥವನ್ನು ಸಮರ ಸಂದರ್ಭದಲ್ಲಿ ಹೆಚ್ಚು ಉಪಯುಕ್ತಗೊಳಿಸಿತು. ಕ್ರಿ.ಪೂ.ಸು. 2000ದ ವೇಳೆಗೆ ಕತ್ತೆ, ಹೋರಿಗಳ ಬದಲಿಗೆ ಕುದುರೆಗಳನ್ನು ಬಳಸಿದ್ದು ರಥಗಳ ಅಭಿವೃದ್ಧಿ ಅಥವಾ ಬೆಳೆವಣಿಗೆಯಲ್ಲಿ ಗುರುತಿಸಬಹುದಾದ ಅಂತಿಮ ಹಂತ. ಇದರಿಂದಾಗಿ ರಥಗಳ ಚಲನೆಯ ವೇಗ ಇನ್ನೂ ಹೆಚ್ಚಾಯಿತು. ರಥಗಳಲ್ಲಿ ಕಂಡುಬಂದ ಈ ಬೆಳೆವಣಿಗೆ ಕ್ರಿ.ಪೂ. 2000ದಲ್ಲಿ ಹೈಕೂಗಳು ಈಜಿಪ್ಟಿಯನ್ನರ ಮೇಲೂ ಹಿಟ್ಟೇಗಳು ಅನಾತೋಲಿಯಾ ಮೇಲೂ ಉತ್ತರ ಭಾರತದ ಮೇಲೆ ಆರ್ಯನ್ನರೂ ಗ್ರೀಸ್ ದೇಶದ ಮೇಲೆ ಮೈಸೀನಿಯನರೂ ದಿಗ್ವಿಜಯ ಸಾಧಿಸಲು ಮೂಲ ಕಾರಣಗಳಲ್ಲೊಂದಾಯಿತು.

ಕ್ರಿ.ಪೂ. 5ನೆಯ ಶತಮನದ ವೇಳೆಗೆ ಕೆಲ್ಟ್‍ರಿಗೆ ರಥದ ಪರಿಚಯವಾಯಿತು. ಕೆಲ್ಟ್‍ರ ರಥಗಳು ಗ್ರೀಕ್ ರಥಗಳಿಗಿಂತ ತುಂಬು ಚಕ್ರಗಳ ಭಾರೀಸ್ವರೂಪದವು. ಇದರ ಸಾಮ್ರಾಜ್ಯ ಪತನಗೊಂಡ ಮೇಲೂ ಅಂದರೆ ಕ್ರಿ.ಶ. ಸು. 4ನೆಯ ಶತಮಾನದವರೆಗೂ ರಥದ ಬಳಕೆ ಕಂಡುಬರುತ್ತದೆ. ರಥಗಳು ತಮ್ಮ ಜನಪ್ರಿಯತೆಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಆವಿಷ್ಕಾರಗೊಂಡ ಛಾವಣಿ ರಹಿತ ನಾಲ್ಕು ಚಕ್ರಗಳ ಕಾರು, ಜೀಪು ಮೊದಲಾದ ವಾಹನಗಳನ್ನು ಯುರೋಪಿನಲ್ಲಿ ತೀರ ಇತ್ತೀಚಿನವರೆಗೂ ‘ಚ್ಯಾರಿಯಟ್ ಎಂದೇ ಕರೆಯುತ್ತಿದ್ದುದನ್ನು ಗಮನಿಸಬಹುದು.

ಚಕ್ರದ ಆವಿಷ್ಕಾರದ ಅನಂತರ ಬಳಕೆಯಾಗುತ್ತ ಬಂದ ಒಂದು ವಾಹನ ರಥ
ರಥೋತ್ಸವ

ರಥಗಳು ದೇವಾಲಯಗಳ ಅವಿಭಾಜ್ಯ ಅಂಗಗಳೆನಿಸಿವೆ. ಆಯಾ ದೇವತೆಗಳ ವಿಶೇಷ ಉತ್ಸವಾದಿಗಳಲ್ಲಿ ರಥೋತ್ಸವ ಸಾಮಾನ್ಯವಾಗಿ ಕಂಡುಬರುತ್ತದೆ. ಪುರಿಯ ಜಗನ್ನಾಥ ದೇವಾಲಯದ ರಥೋತ್ಸವ ಜಗತ್ಪ್ರಸಿದ್ಧವಾದುದು. ದೇವಾಲಯಗಳ ಶಿಲ್ಪ ಮತ್ತು ವಾಸ್ತುವಿನ ಮೇಲೆ ರಥಗಳ ಕೆತ್ತನೆಗಳು ಅಲ್ಲಲ್ಲಿ ಕಂಡುಬರುತ್ತವೆ. ಹನ್ನೆರಡನೆಯ ಶತಮಾನದ ಚೋಳರ ಶಿಲ್ಪಕಲೆಗೆ ಉತ್ತಮ ನಿದರ್ಶನವಾದ ತಂಜಾವೂರಿನ ಐರಾವತೇಶ್ವರ ಗುಡಿಯ ಅಲಂಕಾರ ಮಂಟಪ ಒಂದು ರಥದ ಆಕಾರದಲ್ಲಿಯೇ ಇದೆ. ಎಂಟು ಗ್ರಹಗಳಿಂದ ಸುತ್ತುವರೆದ ಕಮಲದ ಹೂವಿನ ಮುಖವುಳ್ಳ ಸೂರ್ಯ ಏಳು ಕುದುರೆಗಳು ಎಳೆಯುತ್ತಿರುವ ರಥದಲ್ಲಿ ಕುಳಿತಿರುವುದನ್ನು ತಿರುಚನಾಪಳ್ಳಿಯ ಗಂಗೈಕೊಂಡ ಚೋಳಪುರದ ಬೃಹದೇಶ್ವರ ದೇವಾಲಯದಲ್ಲಿ ಕೆತ್ತಲಾಗಿದೆ. ಪಲ್ಲವರ ಬಂದರಾಗಿದ್ದ ಮಹಾಬಲಿಪುರದಲ್ಲಿ ದ್ರಾವಿಡ ಶಿಲ್ಪಶೈಲಿಯ ಮಂಟಪಗಳಿವೆ. ಇವುಗಳನ್ನು ರಥಗಳೆಂದೇ ಕರೆಯಲಾಗುತ್ತದೆ. ಅಂತಸ್ತುಗಳಿಂದ ಕೂಡಿ ಪಿರಮಿಡ್‍ನ ಆಕಾರದಲ್ಲಿರುವ ಮಂಟಪವನ್ನು ಧರ್ಮರಾಯನ ರಥವೆಂದೂ ಶಿಖರಗಳಿಂದ ಕೂಡಿದ್ದು ಕಲಾತ್ಮಕ ಕೆತ್ತನೆಗಳಿರುವ ಮಂಟಪಗಳನ್ನು ಅರ್ಜುನ, ಭೀಮ, ನಕುಲ, ಸಹದೇವರ ರಥಗಳೆಂದೂ ಹುಲ್ಲಿನ ಜೋಪಡಿಯಂತೆ ಕಾಣುವ ಮಂಟಪವೊಂದನ್ನು ದ್ರೌಪದಿಯ ರಥವೆಂದೂ ಕರೆಯುತ್ತಾರೆ. ಈ ಮಂಟಪಗಳನ್ನು ದೇವಾಲಯಗಳೆಂದೇ ಗುರುತಿಸಿರುವುದೂ ಒಂದು ವಿಶೇಷ. ಹಂಪೆಯ ಕಲ್ಲಿನರಥವಂತೂ ವಿಶಿಷ್ಟವಾದುದು. ಜಗತ್ಪ್ರಸಿದ್ಧವಾದುದು.

ರಥಗಳನ್ನು ಮನರಂಜನೆಗೆ ಬಳಸುವುದು, ಸ್ಪರ್ಧೆಗಳೀಗೆ ಬಳಸುವುದು ಇತಿಹಾಸ ಕಾಲದಿಂದಲೂ ಕಂಡುಬರುವ ಒಂದು ಸಾಮಾನ್ಯ ಅಂಶ. ಭಾರತೀಯರಲ್ಲಿ ಕ್ರೀಡಾ ರಥಗಳನ್ನು ಪುಷ್ಯರಥವೆಂಬ ಹೆಸರಿನಿಂದ ಕರೆದಿರುವುದನ್ನೂ ಪಂದ್ಯಗಳಲ್ಲಿ ಬಳಸುವ ರಥಕ್ಕೆ ನಾಲ್ಕು ಚಕ್ರಗಳು ಇರಬೇಕು ಎಂದಿರುವುದನ್ನೂ ಗಮನಿಸಿದರೆ ರಥದ ಕ್ರೀಡೆ ಮತ್ತು ಪಂದ್ಯಗಳ ನಮ್ಮಲ್ಲಿಯೂ ನಡೆಯುತ್ತಿತ್ತು ಎಂದು ತಿಳಿಯಬಹುದಾಗಿದೆ. ಆದರೆ ರಥ ಓಟ ಸ್ಪರ್ಧೆಗಳಿಗೆ ಗ್ರೀಕ್ ಮತ್ತು ರೋಮನ್ನರು ನೀಡಿದ ಪ್ರಾಶಸ್ತ್ಯ ಭಾರತೀಯ ಪರಂಪರೆಯಲ್ಲಿ ಕಂಡುಬರುವುದಿಲ್ಲವೆನ್ನಬಹುದು. ರಥ ಸ್ಪರ್ಧೆ ಪ್ರಾಚೀನ ಗ್ರೀಕರ ಮತ್ತು ರೋಮನ್ನರ ಮೆಚ್ಚಿನ ಕ್ರೀಡೆಯೇ ಆಗಿತ್ತು. ಸಾಮ್ರಾಜ್ಯಕ್ಕೆ ಆಗಮಿಸಿದ ಅತಿಥಿಗಳ ಸಂತೋಷಕೂಟದಲ್ಲಿ ಹಾಗೂ ಸಾಮ್ರಾಟರ ಸಿಂಹಾಸನಾರೋಹಣ ಸಂದರ್ಭಗಳಲ್ಲಿ ರಾಜನ ಗೌರವಾರ್ಥ ಏರ್ಪಡಿಸುತ್ತಿದ್ದ ರಥ ಸ್ಪರ್ಧೆಗಳು ವಿಶೇಷವಾಗಿರುತ್ತಿದ್ದವು. ಗ್ರೀಕ್ ಕವಿ ಹೋಮರನ ಇಲಿಯಡ್ ಕೃತಿಯಲ್ಲಿ ಈ ಪಂದ್ಯಗಳ ವರ್ಣನೆ ಅಲ್ಲಲ್ಲಿ ಬರತ್ತವೆ. ರೋಮ್ ನಗರದಲ್ಲಿ ವೃತ್ತಿಪರ ಸ್ಪರ್ಧಿಗಳಿದ್ದು ಪಂದ್ಯಗಳಲ್ಲಿ ಗುಂಪು ಗುಂಪಾಗಿ ನೆರೆಯುತ್ತಿದ್ದರು. ಅವರು ದಿನಕ್ಕೆ ಕನಿಷ್ಠವೆಂದರೂ ಇಪ್ಪತ್ತು ಬಾರಿ ನಾಲ್ಕರಿಂದ ಹನ್ನೆರಡು ಪ್ರತಿಸ್ಪರ್ಧಿ ತಂಡಗಳೊಂದಿಗೆ ಸಾಮಾನ್ಯವಾಗಿ ನಾಲ್ಕು ಕುದುರೆಗಳ ರಥದಲ್ಲಿ ಸ್ಪರ್ಧಿಸಬಲ್ಲವರಾಗಿದ್ದರು. ಬಿಳಿ, ಕೆಂಪು, ನೀಲಿ ಮತ್ತು ಹಸುರು ಬಣ್ಣಗಳಿಂದ ಸ್ಪರ್ಧಾಳುಗಳನ್ನು ಗುರುತಿಸಲಾಗುತ್ತಿತ್ತು. ಆಯಾ ಗುಂಪಿಗೆ ಹುರುಪು ಉತ್ಸಾಹ ತುಂಬುತ್ತಿದ್ದ ಪ್ರೇಕ್ಷಕರು ತಮ್ಮ ಅಭಿಮಾನೀ ಸ್ಪರ್ಧಿಗಳ ಬಣ್ಣದ ಬಾವುಟಗಳನ್ನು ತೋರುತ್ತ ಸಂಭ್ರಮ ಪಡುತ್ತಿದ್ದರು. ಸ್ಪರ್ಧೆಯಲ್ಲಿ ಪಣಗಳೂ ಇರುತ್ತಿದ್ದವು. ಕಟ್ಟುನಿಟ್ಟಿನ ನೀತಿ ನಿಯಮಾವಳಿಗಳೂ ಇರುತ್ತಿದ್ದವು. ನೀತಿ, ನಿಯಮಗಳನ್ನು ಮೀರುವ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಪ್ರೇಕ್ಷಕರಿಗೂ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಯಶ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಹೊಂಬಾಳೆ ತಿರುಗಿಬಿದ್ದ ದರ್ಶನ್ ಫ್ಯಾನ್ಸ್.

ಯಶ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಹೊಂಬಾಳೆ ತಿರುಗಿಬಿದ್ದ ದರ್ಶನ್ ಫ್ಯಾನ್ಸ್.

ಅನಿಲ್ ಕುಂಬ್ಳೆ

ಗೂಗ್ಲಿ ಪ್ರಸಿದ್ಧವಾದ ಅನಿಲ್ ಕುಂಬ್ಳೆ