ಎಂತು ಬಣ್ಣಿಸಲಿ ಕವಿತಾಗುಣಾರ್ಣವನ…,
ಎಂತು ಹೊಗಳಲಿ ಈ ನಾಡೋಜನಾ,
ಎಂತು ನಮಿಸಲಿ ಈ ಸರಸ್ವತಿ ಮಣಿಹಾರನ,
ಎಂತು ವಿವರಿಸಲಿ ಈ ಹಿತಮಿತ ಮೃದು ವಚನನ,
ಹಾಡಲೇ, ಕವಿವರ್ಯರು ಗೌರವಿಸಿದಂತೆ,
“ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ”
“ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ” 🙏
ಮಹತ್ವದ ಕುರಿಕ್ಯಾಲ ಅಥವಾ ಕುರ್ಕ್ಯಾಲ್ ಶಾಸನದ ಆಧಾರದಿಂದ ಪಂಪನು ತನ್ನ ತಾಯಿಯ ತವರುಮನೆಯಾಗಿದ್ದ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಶಾಲಿವಾಹನ ಶಕೆ ೮೨೪ರ ದುಂದುಭಿ ಸಂವತ್ಸರದಲ್ಲಿ ಜನಿಸಿದನು. ಇದು ಕ್ರಿ.ಶ.೯೦೨-೦೩ಕ್ಕೆ ಸರಿಯಾಗುತ್ತದೆ.ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ.
ಇವನು ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿ ಆಸ್ಥಾನ ಪಂಡಿತನಾಗಿದ್ದನು.
ಪಂಪನು ಗಣಿತ, ವ್ಯಾಕರಣ,ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ, ವೇದ ಶಾಸ್ತ್ರವನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು. ದೇವೇಂದ್ರ ಮುನೀಂದ್ರ ಈತನ ಗುರುಗಳು.
ಆದಿಕವಿ ಎಂದರೆ ಮೊಟ್ಟಮೊದಲು ಕಾವ್ಯ ರಚನೆ ಮಾಡಿದವನು ಎಂದು ಅರ್ಥ. ಅಂದರೆ ಪಂಪನಿಗಿಂತ ಮೊದಲು ಕನ್ನಡದಲ್ಲಿ ಯಾರೂ ಕಾವ್ಯಗಳನ್ನು ಬರದೇ ಇರಲಿಲ್ಲವೆಂದು ಅರ್ಥವಲ್ಲ. ಹಿಂದೆ ಅನೇಕ ಕವಿಗಳು ಕನ್ನಡದಲ್ಲಿ ಇದ್ದರು; ಇವರೂ ಅನೇಕ ಕಾವ್ಯಗಳನ್ನು ಬರೆದಿದ್ದರು ಎಂಬ ವಿಷಯ “ಕವಿರಾಜಮಾರ್ಗ” ಗ್ರಂಥದಲ್ಲಿ ಉಲ್ಲೇಖಿತವಾಗಿದೆ. ಆದರೆ ಅವು ಯಾವುವೂ ಸಿಕ್ಕಿಲ್ಲ; ಸಿಕ್ಕಿರುವ ಕಾವ್ಯಗಳಲ್ಲಿ ಪಂಪನು ಬರೆದ “ವಿಕ್ರಮಾರ್ಜುನ ವಿಜಯ” ಮತ್ತು “ಆದಿಪುರಾಣ”ಗಳೇ ಮೊದಲನೆಯವು. ಆದ ಕಾರಣ ಪಂಪನನ್ನು ಕನ್ನಡದ ಆದಿಕವಿ ಎಂದು ಕರೆಯುತ್ತಾರೆ.
ಪಂಪನು ಧಾರ್ಮಿಕ ಕಾವ್ಯವಾದ ಆದಿಪುರಾಣವನ್ನು ಮತ್ತೊಂದು ಲೌಕಿಕ ಕಾವ್ಯವಾದ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ ಮೇರು ಕೃತಿಗಳನ್ನು ರಚಿಸಿದ್ದಾನೆ.
ಆದಿಪುರಾಣ-ಮೊದಲನೆಯ ತೀರ್ಥಂಕರನಾದ ಪುರದೇವ/ವೃಷಭದೇವನ ಬಗ್ಗೆ ರಚಿತವಾದ ಚಂಪೂ ಕಾವ್ಯ.ಜಿನಸೇನಾಚಾರ್ಯರ ಪೂರ್ವಪುರಾಣ ಇದರ ಆಕರ ಗ್ರಂಥ. ಇದರಲ್ಲಿ ೧೬ ಆಶ್ವಾಸಗಳು ಮತ್ತು ೧೫೫೫ ಪದ್ಯಗಳೂ ಇವೆ.ಪ್ರಮುಖವಾಗಿ ಆದಿತೀರ್ಥಂಕರನಾದ ವೃಷಭದೇವ ಮತ್ತು ಅವನ ಮಕ್ಕಳಾದ ಭರತ ಮತ್ತು ಬಾಹುಬಲಿಗಳ ಪ್ರಸಂಗವು ಚಿತ್ರಿತವಾಗಿದೆ ಹಾಗೂ ಜೈನಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಕವಿ ಪಂಪನು ಮೆರೆದಿದ್ದಾನೆ.
ವಿಕ್ರಮಾರ್ಜುನ ವಿಜಯ-ಪಂಪಭಾರತವೆಂದೇ ಪ್ರಸಿದ್ಧಿ. ಇದರಲ್ಲಿ ವ್ಯಾಸರಚಿತವಾದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪ ಭಾರತದಲ್ಲಿ ಅರ್ಜುನನನ್ನು ಪ್ರಧಾನ ಭೂಮಿಕೆಯಲ್ಲಿ ನಿಲ್ಲಿಸಿ ತನ್ನ ದೊರೆ ಅರಿಕೇಸರಿಗೆ ಹೋಲಿಸಿದ್ದಾನೆ. ಮಹಾಭಾರತದ ಕಾವ್ಯದ ವರ್ಣನೆಯ ಜೊತೆಗೆ ಪಂಪ ತನ್ನ ಕಾಲದ ಸಮಾಜದ ನಾಗರೀಕತೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಜನ ಸಾಮನ್ಯರ ಜೀವನದ ಪೂರ್ಣ ಚಿತ್ರಣನೀಡಿದ್ದಾನೆ. ಅಂದಿನ ಕಾಲದ ಆಟಗಳು, ವಿದ್ಯಾಭ್ಯಾಸ ಪದ್ಧತಿ, ಜನರ ವಿಲಾಸಿಜೀವನ, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿದ್ದಾನೆ.
ಸದಾ ಬೆಳಗಿದ,ಸದಾ ಬೆಳಗುತ್ತಿರುವ ನಮ್ಮ ಕನ್ನಡ ಸಾಹಿತ್ಯದ ಕಿರಣಗಳಿಗೆ ನಮಿಸೋಣ.🙏
ಆದಿ ಕವಿ ಪಂಪನ ಬಗೆಗಿನ ಶುಭವಿಚಾರಧಾರೆಗಳು..,ಪಂಪ ಕವಿಯು ಸೂಸಿದ ಕನ್ನಡದ ಕಂಪು ಇನ್ನೂ ಮುಂದುವರೆಯುವುದು.
GIPHY App Key not set. Please check settings