in

ಮೂರನೇ ಪಾಣಿಪತ್ ಯುದ್ದ

ಮೂರನೇ ಪಾಣಿಪತ್ ಯುದ್ದ
ಮೂರನೇ ಪಾಣಿಪತ್ ಯುದ್ದ

ಮೂರನೆಯ ಪಾಣಿಪತ್ ಯುದ್ಧ ೧೭೬೧ರ ಜನವರಿ ೧೪ರಂದು, ಇಂದಿನ ಹರ್ಯಾಣದಲ್ಲಿರುವ ಪಾಣಿಪತ್ನಲ್ಲಿ ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಶಾಹ್ ದುರ್ರಾನಿ ನೇತೃತ್ವದ ಪಾಶ್ತುನ್ ಜನರ ಸೇನೆಯ ಮಧ್ಯೆ ನಡೆದ ಯುದ್ಧ. ಇದು ಪಾಣಿಪತ್ ಅಲ್ಲಿ ನಡೆದ ಮೂರನೆಯ ಯುದ್ಧ. ಈ ಯುದ್ಧದಲ್ಲಿ ಫ್ರೆಂಚರಿಂದ ಮದ್ದು ಗುಂಡು ಮತ್ತಿ ತರಬೇತಿ ಗಳಿಸಿದ್ದ ಮರಾಠರಿಗೂ, ಅಹಮದ್ ಶಾ ಅಬ್ದಾಲಿಯ ಸಬಲ ಕುದುರೆ ಕಾಳಗ ನಿಪುಣರ ಮಧ್ಯೆ ಮುಖಾಮುಖಿಯಾಯಿತು.

ಮೊಘಲ್ ಸಾಮ್ರಾಜ್ಯ ಶಿಥಿಲವಾಗುತ್ತಿರುವುದರ ಲಾಭ ಪಡೆದ ಮರಾಠರ ಒಕ್ಕೂಟವು ತನ್ನ ರಾಜ್ಯವನ್ನು ವಿಸ್ತರಿಸತೊಡಗಿತು. ಇದರಿಂದ ಅಸಮಾಧಾನಗೊಂಡವರಲ್ಲಿ ಅಹಮದ್ ಶಾ ಅಬ್ದಾಲಿಯೂ ಒಬ್ಬನಾಗಿದ್ದ. ೧೭೫೯ರಲ್ಲಿ ಅಫ್ಘಾನಿಸ್ತಾನದ ಪಶ್ತೂನ್ ಜನಗಳ ಸೈನ್ಯವನ್ನು ಕಟ್ಟಿ , ಮರಾಠರ ಸಣ್ಣ ಪುಟ್ಟ ಸೈನ್ಯಗಳ ಮೇಲೆ ವಿಜಯ ಸಾಧಿಸಿದ. ಇದರಿಂದ ಕುಪಿತರಾದ ಮರಾಠರು ಸದಾಶಿವರಾವ್ ಭಾವುವಿನ ಮುಖಂಡತ್ವದಲ್ಲಿ ೧೦೦,೦೦೦ ಜನರ ಸೈನ್ಯದೊಂದಿಗೆ ದೆಹಲಿಗೆ ದಾಳಿ ಮಾಡಿ ನಗರವನ್ನು ಹಾಳುಗೆಡವಿದರು. ಇದರ ನಂತರ ಕರ್ನಾಲ್ ಮತ್ತು ಕುಂಜುಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಹಮದ್ ಶಾಹನಿಗೂ ಸಣ್ಣಪುಟ್ಟ ತಿಕ್ಕಾಟಗಳಾಗಿ, ಇದೇ ಮುಂದೆ ಮರಾಠರಿಗೆ ಎರಡು ತಿಂಗಳು ದಿಗ್ಬಂಧನದಲ್ಲಿ ಕೊನೆಯಾಯಿತು.

ಮೂರನೇ ಪಾಣಿಪತ್ ಯುದ್ದ
ಮೂರನೇ ಪಾಣಿಪತ್ ಯುದ್ದ

ಯುದ್ಧ ನಡೆದ ನಿರ್ದಿಷ್ಟ ಜಾಗದ ಬಗ್ಯೆ ವಿದ್ವಾಂಸರಲ್ಲಿ ಒಮ್ಮತವಿಲ್ಲದೆಯೇ ಹೋದರೂ, ಬಹುತೇಕ ಅಭಿಪ್ರಾಯಗಳ ಪ್ರಕಾರ ಇಂದಿನ ಕಾಲಾ ಆಂಬ್ ಮತ್ತು ಸನೌಲಿ ರಸ್ತೆ ಹತ್ತಿರದಲ್ಲೆಲ್ಲೋ ನಡೆದಿರಬೇಕು. ಅನೇಕ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ೧೨೫,೦೦೦ ಸೈನಿಕರು ಪಾಲ್ಗೊಂಡಿದ್ದರು. ಎರಡೂ ಪಕ್ಷಗಳಲ್ಲಿ ಲಾಭ ನಷ್ಟಗಳಿದ್ದವು. ಮರಾಠರ ಅನೇಕ ತುಕಡಿಗಳನ್ನು ಧ್ವಂಸ ಮಾಡಿದ ಅಬ್ದಾಳಿಯ ಸೈನ್ಯ ವಿಜಯಶಾಲಿಯಾಯಿತು. ಸತ್ತವರ ಸಂಖ್ಯೆಯ ಬಗ್ಯೆ ಭಿನ್ನಾಭಿಪ್ರಾಯಗಳಿದ್ದರೂ, ೬೦,೦೦೦-೭೦,೦೦೦ ಜನ ಸತ್ತಿರಬೇಕು ಎಂದು ಅಂದಾಜಿದೆ. ಗಾಯಗೊಂಡವರ ಮತ್ತು ಸೆರೆಸಿಕ್ಕವರ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸದಾಶಿವರಾವರಾವ್ ಭಾವು ಈ ಯುದ್ಧದಲ್ಲಿ ಮಡಿದನು. ಇತರ ಅನೇಕ ಮರಾಠಾ ಸೇನಾಧಿಕಾರಿಗಳನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಈ ಯುದ್ಧದ ಅತ್ಯಂತ ಮಹತ್ವದ ಪರಿಣಾಮವೆಂದರೆ, ಇದರಿಂದ ಮರಾಠರ ಉತ್ತರ ಭಾರತದತ್ತ ರಾಜ್ಯ ವಿಸ್ತಾರ ನಿಂತು ಹೋಯಿತು.

೧೭೦೭ರಲ್ಲಿ ಔರಂಗಜೇಬನ ಮರಣದ ನಂತರ ಮುಘಲ್ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಿತ್ತು. ೧೭೩೯ರಲ್ಲಿ ನಾದಿರ್ ಶಹಾನ ಭಾರತದ ಮೇಲಿನ ಆಕ್ರಮಣದಿಂದ ಈ ಅವನತಿ ಇನ್ನೂ ತೀವ್ರವಾಯಿತು. ದಕ್ಷಿಣದಲ್ಲಿ ಮರಾಠರ ಸತತ ದಂಗೆಗಳು, ಹೈದರಾಬಾದ್ ಮತ್ತು ಬಂಗಾಳ ಸೇರಿದಂತೆ ಅನೇಕ ಪ್ರಾಂತಗಳ ವಸ್ತುಶಃ ಸ್ವತಂತ್ರ ರಾಜ್ಯಭಾರ ಇವುಗಳು ಸಾಮ್ರಾಜ್ಯವನ್ನು ಇನ್ನೂ ಶಿಥಿಲಗೊಳಿಸಿದವು. ಔರಂಗಜೇಬ ತೀರಿಕೊಂಡ ಕೆಲವೇ ವರ್ಷಗಳಲ್ಲಿ ಮರಾಠರು ಅವನು ಗೆದ್ದಿದ್ದ ದಖ್ಖನಿನ ಎಲ್ಲಾ ಪ್ರದೇಶಗಳನ್ನು ಮರಳಿ ಗೆದ್ದದ್ದಲ್ಲದೆ, ಮಧ್ಯ ಮತ್ತು ಉತ್ತರ ಭಾರತದಲ್ಲಿ ಮುಘಲರ ಅಧೀನದಲ್ಲಿದ್ದ ಬಹುತೇಕ ಎಲ್ಲಾ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ೧೭೬೧ರಲ್ಲಿ ಅವರ ಇನ್ನೂ ಉತ್ತರಕ್ಕೆ ಮತ್ತು ವಾಯುವ್ಯಕ್ಕೆ ಹಬ್ಬುವ ಮಹತ್ವಾಕಾಂಕ್ಷೆಗೆ, ಅಫ್ಘಾನಿಸ್ತಾನದಿಂದ ಬಂದ, ಕೆಲ ವರ್ಷಗಳಿಂದ ಪಂಜಾಬಿನ ಮೇಲೆ ಆಕ್ರಮಣ ಮಾಡುತ್ತಿದ್ದ, ಅಹಮದ್ ಶಾ ಅಬ್ದಾಲಿಯು ಅಡ್ಡಿಯಾದನು.

೧೭೦೭ರಿಂದ ೧೭೫೭ರ ಅವಧಿಯಲ್ಲಿ ಮರಾಠರು ಭಾರತದ ಗಣನೀಯ ಭಾಗವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದ್ದರು. ೧೭೫೮ರಲ್ಲಿ, ಅವರು ದೆಹಲಿಯನ್ನು ಗೆದ್ದು, ಲಾಹೋರನ್ನು ಕೈವಶ ಮಾಡಿಕೊಂಡು, ಅಲ್ಲಿ ಆಡಳಿತಾಧಿಕಾರಿಯಾಗಿದ್ದ ಅಹಮದ್ ಶಾ ಅಬ್ದಾಲಿಯ ಮಗ, ತೈಮೂರ್ ಶಾ ದುರಾನಿಯನ್ನು, ಲಾಹೋರಿನಿಂದ ಓಡಿಸಿದರು. ಮರಾಠರ ರಾಜ್ಯ ವಿಸ್ತಾರದಲ್ಲಿ ಇದೊಂದು ಮಹತ್ವದ ಕಾಲಾವಧಿಯಾಗಿತ್ತು. ಅವರ ರಾಜ್ಯ ಸಿಂಧೂ ನದಿ, ಹಿಮಾಲಯ ಮತ್ತು ದಕ್ಷಿಣದಲ್ಲಿ ಉಪಖಂಡದ ಗಡಿಯವರೆಗೆ ಹಬ್ಬಿತ್ತು. ಮರಾಠರ ಅಧಿಪತಿ ಪೇಶ್ವೆಯು ತನ್ನ ಮಗ ವಿಶ್ವಾಸರಾವ್ ನನ್ನು ಮುಘಲರ ಸಿಂಹಾಸನದ ಮೇಲೆ ಕೂರಿಸುವ ಕನಸುಕಾಣುತ್ತಿದ್ದ. ದೆಹಲಿಯು ಹೆಸರಿಗೆ ಮಾತ್ರ ಮುಘಲರ ಅಂಕೆಯಲ್ಲಿ ಉಳಿದಿತ್ತು. ದೆಹಲಿ ಮತ್ತು ಪಂಜಾಬಿ ಮುಸ್ಲಿಮ್ ಧರ್ಮಗುರುಗಳು ಮತ್ತು ಬುದ್ಧಿಜೀವಿಗಳು ಈ ಬೆಳವಣಿಗೆಗಳಿಂದ ಕಳವಳಗೊಂಡು, ತಮ್ಮ ಸಹಾಯಕ್ಕೆ ಬರುವಂತೆ ಅಹಮದ್ ಶಾ ಅಬ್ದಾಲಿಗೆ ಮೊರೆಯಿಟ್ಟರು. ತನ್ನ ಮಗ ಮತ್ತು ಇತರ ಮಿತ್ರಪಕ್ಷಗಳಿಂದ ಮರಾಠರ ದಿಗ್ವಿಜಯಗಳ ಬಗ್ಯೆ ತಿಳಿದು ಕೋಪಗೊಂಡ ಅಬ್ದಾಲಿಯು ಮರಾಠರ ಪ್ರಗತಿಯನ್ನು ನಿಲ್ಲಿಸಬೇಕೆಂದು ನಿರ್ಣಯಿಸಿದನು. ೧೭೫೯ರಲ್ಲಿ ಅಫಘಾನಿಸ್ತಾನದ ಪಶ್ತೂನ್ ಬುಡಕಟ್ಟಿನವರ ಒಂದು ಹೊಸ ಸೈನ್ಯವನ್ನು ಕಟ್ಟಿದನು. ಆ ವರ್ಷದ ಕೊನೆಗಾಗಲೆ ಈ ಸೈನ್ಯವು ಲಾಹೋರ್‍ ಮತ್ತು ದೆಹಲಿಯನ್ನು ತಲುಪಿ ಅಲ್ಲಿಯ ಸಣ್ಣ ಪುಟ್ಟ ತುಕಡಿಗಳನ್ನು ಸೋಲಿಸಿದ್ದರು. ಔಧ್ ಸಂಸ್ಥಾನದ ನವಾಬ ಶುಜಾ ಉದ್ ದೌಲಾನ ಮನ ಒಲಿಸಿ ಅಬ್ದಾಲಿಯು ಅವನನ್ನು ತನ್ನ ಕಡೆಗೆ ಮಾಡಿಕೊಂಡನು.

ಮೂರನೇ ಪಾಣಿಪತ್ ಯುದ್ದ
ಅಬ್ದಾಲಿ

ಅಬ್ದಾಲಿಯ ಹೊಸ ಸೈನ್ಯದ ಆಗಮನದ ಸುದ್ದಿ ಕೇಳಿದ ಮರಾಠರು ಇನ್ನೂ ದೊಡ್ಡ ಸೈನ್ಯವನ್ನು ಒಟ್ಟುಗೂಡಿಸಿ, ಸದಾಶಿವರಾವ್ ಭಾವು ನೇತೃತ್ವದಲ್ಲಿ, ಉತ್ತರದ ಕಡೆಗೆ ಹೊರಟರು. ಇತರ ಮರಾಠಾ ಸಂಸ್ಥಾನಗಳಾದ ಹೋಳ್ಕರ್‍, ಸಿಂಧಿಯಾ ಮತ್ತು ಗಾಯಕವಾಡ್, ಇತರ ಸಂಸ್ಥಾನಗಳಾದ ಬುಂದೇಲಖಂಡ, ರಜಪೂತರ ಮತ್ತು ಜಾಟರ ಸೈನ್ಯಗಳೂ ಇದರಲ್ಲಿ ಶಾಮೀಲಾಗಿದ್ದವು. ಸುಮಾರು ೧೦೦,೦೦೦ರಷ್ಟಿದ್ದ ಈ ಒಟ್ಟು ಸೈನ್ಯವು ದೆಹಲಿ ಮೇಲೆ ಡಿಸೆಂಬರ್‍ ೧೭೫೯ರಲ್ಲಿ ಮುತ್ತಿಗೆ ಹಾಕಿ, ಅಫಘನಿ ಕಾವಲುದಂಡನ್ನು ಸೋಲಿಸಿ ಆ ರಾಜಧಾನಿಯನ್ನು ವಶಕ್ಕೆ ತೆಗೆದುಕೊಂಡಿತು.

ಭಾವು ಈಗಾಗಲೇ ಸಾಕಷ್ಟು ನಿರ್ಜನವಾಗಿದ್ದ ದೆಹಲಿಯನ್ನು ಕೊಳ್ಳೆ ಹೊಡೆಯಲು ಆಜ್ಞೆ ಮಾಡಿದನು. ಮುಘಲ್ ಸಿಂಹಾಸನದ ಮೇಲೆ ತನ್ನ ಸೋದರ ಸಂಬಂಧಿ. ಪೇಶ್ವೆಯ ಮಗ, ವಿಶ್ವಾಸ ರಾವನನ್ನು ಕೂರಿಸುವ ಹಂಚಿಕೆಯೂ ಅವನಿಗಿತ್ತು ಎನ್ನಲಾಗಿದೆ. ಸಿಖ್ಖರು ಮತ್ತು ಬಹುತೇಕ ಜಾಟರು, ತಮ್ಮೆಲ್ಲ ಸಾಮಗ್ರಿ ಸರಬರಾಜಿನ ದಾರಿಯಲ್ಲಿದ್ದ ದೆಹಲಿಯನ್ನು ಕೊಳ್ಳೆಹೊಡೆಯಲು ನಿರಾಕರಿಸಿ ಮರಾಠರಿಂದ ದೂರವಾದರು. ಇದು ಮುಂದೆ ಮಹತ್ವದ ಪರಿಣಾಮವನ್ನುಂಟು ಮಾಡಿತು.

ಮುತ್ತಿಗೆಯ ಮುಂದಿನ ಎರಡು ತಿಂಗಳುಗಳಲ್ಲಿ ಎರಡೂ ಪಕ್ಷಗಳ ನಡುವೆ ಸತತ ಹೊಡೆದಾಟಗಳು ನಡೆದವು. ಯಾವುದೇ ಪಕ್ಷಕ್ಕೆ ಸ್ಪಷ್ಟ ಗೆಲುವು ಸಿಗಲಿಲ್ಲ. ಅಬ್ದಾಲಿ ಮಾಡಿದ ಸಂಧಾನದ ಪ್ರಸ್ತಾಪಕ್ಕೆ ಸದಾಶಿವರಾಯನು ಸಮ್ಮತಿಯಿತ್ತನು. ಆದರೆ ಅಬ್ದಾಲಿಯ ಸಹಚರ ನಜೀಬ್ ಖಾನನು ಧಾರ್ಮಿಕ ಆಧಾರದ ಮೇಲೆ ಈ ಸಂಧಾನವನ್ನು ವಿರೋಧಿಸಿದ್ದಲ್ಲದೆ ಮರಾಠರು ಈ ಸಂಧಾನದ ಕರಾರುಗಳನ್ನು ಪಾಲಿಸುವುದರ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದನು.

ಸಾಮಾನು ಸರಬರಾಜು ನಿಲ್ಲದಂತೆ ನೋಡಿಕೊಳ್ಳಲು ಮರಾಠರಿಗೆ ಹೆಚ್ಚು ಹೆಚ್ಚು ಕಷ್ಟವಾದಂತೆ ಅವರ ಹತಾಶೆಯೂ ಹೆಚ್ಚಾಗುತ್ತಾ ಹೋಯಿತು. ಸುತ್ತಮುತ್ತಲ ಊರುಗಳವರನ್ನೂ ಸಾಮಾನುಗಳಿಗಾಗಿ ಲೂಟಿ ಮಾಡಿದ್ದ ಕಾರಣ ಸ್ಥಳೀಯರೂ ಅವರ ವಿರುದ್ಧವಾಗಿದ್ದರು.

ಈ ಪರಿಸ್ಥಿತಿಯಲ್ಲಿ ಸದಾಶಿವರಾಯನು ಸಂಧಾನಕ್ಕೆ ತಯಾರಿದ್ದರೂ, ಯುದ್ಧ ಮುಂದುವರಿಸುವಂತೆಯೂ, ಸಾಮಾನುಗಳ ಸರಬರಾಜು ಸದ್ಯದಲ್ಲಿಯೇ ಆಗುವುದಾಗಿಯೂ ಅವನಿಗೆ ಆದೇಶ ಬಂದಿತು. ಸರಬರಾಜಿಲ್ಲದೆ ಪರಿಸ್ಥಿತಿ ಬಿಗಡಾಯಿಸಲು, ಸದಾಶಿವರಾಯನು ಮುತ್ತಿಗೆಯನ್ನು ಮುರಿಯಲು ನಿರ್ಧಾರ ಮಾಡಿದನು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕದಂಬರ ಆಳ್ವಿಕೆ

ಕನ್ನಡದ ಮೊದಲ ರಾಜವಂಶ ಕದಂಬರು

ಕೀಟಗಳ ಕಡಿತದಿಂದ ಆಗುವ ತೊಂದರೆ

ಕೀಟಗಳ ಕಡಿತದಿಂದ ಆಗುವ ತೊಂದರೆಗಳಿಗೆ ಸುಲಭ ಪರಿಹಾರಗಳು