in

ರಕ್ಕಸ ತಂಗಡಿ ಕದನ 

ರಕ್ಕಸ ತಂಗಡಿ ಕದನ 
ರಕ್ಕಸ ತಂಗಡಿ ಕದನ 

1336ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದ ಇತಿಹಾಸದ ಸುವರ್ಣಮಯ ಅಧ್ಯಾಯವೊಂದು ಪ್ರಾರಂಭವಾಯಿತು.

ಧರ್ಮದ ಅವನತಿಯಾಗಿ, ಅಧರ್ಮದ ಪ್ರಗತಿಯಾದಾಗ ಯುಗಯುಗಗಳಲ್ಲೂ ಧರ್ಮ ಸಂಸ್ಥಾಪನೆಯಾಗುವುದು’ ಎಂದು ನಂಬಿದ್ದ ಹಿಂದೂಗಳ ನಂಬಿಕೆ ಆಗ ಹುಸಿಯಾಗಲಿಲ್ಲ. ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಯತಿವರೇಣ್ಯ ವಿದ್ಯಾರಣ್ಯರ ನಿರ್ದೇಶನದಂತೆ ಹರಿಹರ – ಬುಕ್ಕರ ನೇತೃತ್ವದಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ಮತ್ತು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಧರ್ಮ ಸಾಮ್ರಾಜ್ಯವಾದ ವಿಜಯನಗರದ ಸ್ಥಾಪನೆಯಾಯಿತು.

ರಕ್ಕಸ ತಂಗಡಿ ಕದನ 
ವಿಜಯನಗರ ಸಾಮ್ರಾಜ್ಯ

ತಾಳೀಕೋಟೆಯ ಯುದ್ಧ ಜನವರಿ ೨೩, ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ನಡೆದ ಯುದ್ಧ. ತಾಳೀಕೋಟೆ ಇಂದಿನ ಬಿಜಾಪುರದಿಂದ ೮೦ ಕಿ.ಮೀ ದೂರದಲ್ಲಿರುವ ಕರ್ನಾಟಕದ ಒಂದು ಐತಿಹಾಸಿಕ ಸ್ಥಳ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.

ಅಚ್ಯುತರಾಯನ ತರುವಾಯ ವಿಜಯನಗರದ ಸಿಂಹಾಸನವೇರಿದ ರಾಮರಾಯನು, ಅನೇಕ ಇತಿಹಾಸಜ್ನರ ಪ್ರಕಾರ, ನೆರೆಯ ಮುಸ್ಲಿಮ್ ಸುಲ್ತಾನರುಗಳ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದನು. ಮೊದಮೊದಲು ಇದರಲ್ಲಿ ಅವನಿಗೆ ಗೆಲುವು ದಕ್ಕಿದರೂ, ಒಟ್ಟಿನಲ್ಲಿ ಇದು ಸುಲ್ತಾನರುಗಳು ಒಟ್ಟಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳುವುದರಲ್ಲಿ ಪರ್ಯವಸಾನವಾಯಿತು. ರಾಮರಾಯನು ಸುಲ್ತಾನರುಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಎಂಬುದನ್ನು ಅಲ್ಲಗೆಳೆಯುವ ಮತ್ತೆ ಕೆಲವು ವಿದ್ವಾಂಸರು, ಸುಲ್ತಾನರುಗಳ ಒಳಜಗಳದ ಲಾಭ ವಿಜಯನಗರಕ್ಕೆ ದೊರೆಯುವಂತೆ ಮಾಡಿದ ಎಂದು ಅಭಿಪ್ರಾಯ ಪಡುತ್ತಾರೆ. ಮುಂದೆ ಪರಸ್ಪರ ವೈವಾಹಿಕ ಸಂಬಂಧಗಳೊಂದಿಗೆ ಈ ಸುಲ್ತಾನರುಗಳ ಅಂತರಿಕ ಕಲಹ ಕಡಿಮೆಯಾದದ್ದಷ್ಟೇ ಅಲ್ಲ , ತಮ್ಮೆಲ್ಲರ ವೈರಿ, ಏಕಮೇವ ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರದ ವಿರುದ್ಧವಾಗಿ ಅವರೆಲ್ಲಾ ಒಟ್ಟುಗೂಡಿದರು.

ಅಹಮದ್ ನಗರ, ಮುಂದೆ ಹೈದರಾಬಾದ್ ನಿಜಾಮನ ರಾಜ್ಯದ ಭಾಗ, ಬೀದರ್, ಬಿಜಾಪುರ ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಕ್ಕೂಟದ ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ ಕರ್ನಾಟಕ ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು. ಇಂತಹಾ ಒಕ್ಕೂಟದ ಸಮರ ವ್ಯೂಹ ಮಧ್ಯಕಾಲದ ಭಾರತದ ಇತಿಹಾಸದಲ್ಲಿ ಅಪರೂಪ. ವಿಜಯನಗರ ಸಾಮ್ರಾಜ್ಯದೊಂದಿಗೆ ವಿರಸವಿದ್ದ ಕೆಲ ಕಿರು ಹಿಂದೂ ರಾಜ್ಯಗಳೂ ಈ ಯುದ್ಧದಲ್ಲಿ ಸುಲ್ತಾನರ ಒಕ್ಕೂಟದ ಬೆಂಬಲಕ್ಕೆ ಬಂದವು. ಸುಲ್ತಾನರುಗಳ ಸೇನೆಯಲ್ಲಿ ೮೦ ಸಾವಿರ ಪದಾತಿಗಳೂ, ೩೦ ಸಾವಿರ ಅಶ್ವಸೈನ್ಯವೂ ಇದ್ದರೆ, ವಿಜಯನಗರದ ಸೇನೆಯಲ್ಲಿ ೧೪೦ ಸಾವಿರ ಕಾಲಾಳುಗಳೂ, ೧೦ ಸಾವಿರ ಅಶ್ವ ಸೈನಿಕರೂ ಇದ್ದರು. ಎರಡೂ ಸೈನ್ಯಗಳಲ್ಲಿ ಬಹುಸಂಖ್ಯೆಯಲ್ಲಿ ಆನೆಗಳೂ ಇದ್ದವು. ಈ ಯುದ್ಧ ಘೋರವಾಗಿದ್ದರೂ ಅಲ್ಪಾವಧಿಯಲ್ಲಿಯೇ ಮುಗಿದುಹೋಯಿತು. ಕಲ್ಲು ಬಂಡೆಗಳ ಈ ಯುದ್ಧ ಪ್ರದೇಶದಲ್ಲಿ, ತೋಪುಗಳಿಂದ ಹಲ್ಲೆ ನಡೆಸಿ, ವಿಜಯನಗರದ ಸೈನ್ಯದ ಮಂಚೂಣಿಯನ್ನು ಒಕ್ಕೂಟದ ಸೇನೆ ಹಣ್ಣು ಮಾಡಿತು. ಈ ಫಿರಂಗಿಗಳ ಈ ತೀವ್ರ ದಾಳಿಯಿಂದ ತತ್ತರಿಸಿದ ವಿಜಯನಗರ ಸೇನೆಯ ಮೇಲೆ ಒಕ್ಕೂಟದ ಸೇನೆ ನುಗ್ಗಿ ಅದನ್ನು ಧೂಳೀಪಟ ಮಾದಿತು. ರಾಮರಾಯನ ಶಿರಛ್ಛೇದ ಮಾಡಿ ಸಾರ್ವಜನಿಕರಿಗೆ ಪ್ರದರ್ಶನ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯವನ್ನು ಲೂಟಿಮಾಡಿ ಸಂಪೂರ್ಣವಾಗಿ ಧ್ವಂಸಮಾಡಲಾಯಿತು.

ರಕ್ಕಸ ತಂಗಡಿ ಕದನ 
ಯುದ್ಧಭೂಮಿಯ ಮಾಸ್ಟರ್, ಫಿರಂಗಿ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಎರಕಹೊಯ್ದ ಕಂಚಿನ ಆರ್ಡನೆನ್ಸ್ , ಕದನದ ಸಮಯದಲ್ಲಿ ಡೆಕ್ಕನ್ ಸುಲ್ತಾನರು ಬಳಸಿದರು. ಇದನ್ನು ಅಲಿ ಆದಿಲ್ ಷಾ I ಬಿಜಾಪುರ ಸುಲ್ತಾನ ಒದಗಿಸಿದ

ಈ ಯುದ್ಧ ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯದ ಅವನತಿಗೆ ಕಾರಣವಾದದ್ದಷ್ಟೇ ಅಲ್ಲ, ಸಂಪೂರ್ಣ ಭಾರತದಲ್ಲಿಯೇ ಹಿಂದೂ ರಾಜ್ಯಗಳ ಕೊನೆಗಾಲಕ್ಕೆ ನಾಂದಿ ಹಾಡಿತು. ವಿಜಯೋನ್ಮತ್ತ ಸುಲ್ತಾನರ ಸೇನೆ, ಇತರ ಕಳ್ಳಕಾಕರು ಮತ್ತು ಕಾಡುನಿವಾಸಿಗಳ ಗುಂಪುಗಳೊಂದಿಗೆ ವಿಜಯನಗರಕ್ಕೆ ಲಗ್ಗೆ ಇಟ್ಟಿತು. ಲೂಟಿ, ದರೋಡೆ, ಕಗ್ಗೊಲೆ, ಸುಲಿಗೆಗಳು ಅವ್ಯಾಹತವಾಗಿ ನಡೆದವು. ಕೊಡಲಿ, ಗಡಾರಿ, ಕತ್ತಿ ಇತ್ಯಾದಿಗಳೊಂದಿಗೆ ನಗರವನ್ನು ಹಾಳುಗೆಡವಿ, ಬೆಂಕಿ ಹಚ್ಚಲಾಯಿತು. ಈ ಧಾಳಿಯಿಂದ ವಿಜಯನಗರ ಮುಂದೆಂದೂ ಚೇತರಿಸಿಕೊಳ್ಳಲಿಲ್ಲ. ಪೆನುಗೊಂಡೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಜಯನಗರ ಮತ್ತೆ ಮೇಲೇಳುವ ಪ್ರಯತ್ನ ಮಾಡಿದರೂ, ಅದು ಯಶಸ್ವಿಯಾಗಲಿಲ್ಲ. ಜನಬೆಂಬಲ ಅಳಿಯ ರಾಮರಾಯನ ತಮ್ಮನ ಪರವಾಗಿದ್ದ ಕಾರಣ , ಪಟ್ಟವೇರುವ ತಿರುಮಲನ ಪ್ರಯತ್ನ ಫಲಿಸಲಿಲ್ಲ. ಅದಕ್ಕಾಗಿ ಆತ ಮತ್ತೂ ಆರು ವರ್ಷ ಕಾಯಬೇಕಾಯಿತು. ಈ ಆರು ವರ್ಷಗಳಲ್ಲಿ ಅರಾಜಕತೆ ತಾಂಡವವಾಡಿತು.

ಅಳಿಯ ರಾಮರಾಯನಿಂದ ಮಹತ್ವದ ಸ್ಥಾನಗಳಿಗೆ ನೇಮಿಸಲ್ಪಟ್ಟಿದ್ದ ಅವನ ಹತ್ತಿರದ ಸಂಬಂಧಿಕರಲ್ಲಿ ಈಗ ಒಳಜಗಳ ಪ್ರಾರಂಭವಾಯಿತು. ಅಷ್ಟೇ ಅಲ್ಲ ಇದರಿಂದ ಅಸಂತುಷ್ಟರಾಗಿದ್ದ ಸಾಮ್ರಾಜ್ಯ ನಿಷ್ಠ ಅಧಿಕಾರಿಗಳು ಈಗ ದಂಗೆ ಎದ್ದರು. ಹಿಂದೆ ಯಶಸ್ವಿಯಾಗಿ ನಢೆದುಕೊಂಡು ಬಂದಿದ್ದ ಪಾಳೆಯಗಾರಿ ಪದ್ಧತಿಯೂ ಸಾಮ್ರಾಜ್ಯವು ಅನೇಕ ಹೋಳಾಗುವುದಕ್ಕೆ ಕಾರಣವಾಯಿತು. ತಮಿಳು ಭಾಷಿಕರಾಗಿದ್ದ ಜಿಂಜೀ, ಮಧುರೈ ಮತ್ತು ತಂಜಾವೂರಿನ ನಾಯಕ ಮನೆತನದವರು ಸ್ವತಂತ್ರರಾಗಲು ತಹತಹಿಸತೊಡಗಿದರು. ಬಿಜಾಪುರದಿಂದ ದಾಳಿಯ ಭೀತಿಯಲ್ಲಿದ್ದ ತಿರುಮಲನು, ನಾಯಕರುಗಳ ಸ್ವತಂತ್ರ ಆಳ್ವಿಕೆಗೆ ಮೌನಸಮ್ಮತಿ ನೀಡಬೇಕಾಯಿತು. ಚಂದ್ರಗಿರಿಗೆ, ಅದರ ನಂತರ ವೆಲ್ಲೂರಿಗೆ ರಾಜಧಾನಿಯನ್ನು ಮುಂದೆ ಬದಲಾಯಿಸಲಾಯಿತು. ಈ ಅವಧಿಯಲ್ಲಿಯೇ ಮೈಸೂರು, ಕೆಳದಿ, ವೆಲ್ಲೂರು ಮೊದಲಾದ ಸಾಮಂತರು ವಿಜಯನಗರದಿಂದ ಸ್ವತಂತ್ರರಾಗಿದ್ದರು. ವಿಜಯನಗರದ ಅವನತಿಯಿಂದಾಗಿ, ದಕ್ಷಿಣಭಾರತದ ರಾಜಕೀಯ ವ್ಯವಸ್ಥೆ ಛಿದ್ರಛಿದ್ರವಾಯಿತು. ಆದರೂ ಈ ಸಾಮ್ರಾಜ್ಯದ ತೆಲುಗು ಭಾಷಿಕ ಅವಶೇಷಗಳು ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಉಳಿದುಕೊಂಡವು. ಮೈಸೂರು ಸಂಸ್ಥಾನ, ಕೆಳದಿ ನಾಯಕರು, ಚಿತ್ರದುರ್ಗದ ನಾಯಕರು ಇತ್ಯಾದಿ ಸಣ್ಣ ರಾಜ್ಯಗಳ ತಲೆ ಎತ್ತುವುದರೊಂದಿಗೆ, ಮುಂದಿನ ನಾಲ್ಕು ಶತಮಾನಗಳ ಕಾಲ ಕನ್ನಡ ನಾಡಿನಲ್ಲಿ ಏಕಾಧಿಪತ್ಯವು ಎರವಾಯಿತು. ಮುಂದೆ ಚಿತ್ರದುರ್ಗ ಮತ್ತು ಕೆಳದಿ ನಾಯಕರ ಸಂಸ್ಥಾನಗಳು ಮೈಸೂರಿನಲ್ಲಿ ಲೀನವಾದವು. ವಿಜಯನಗರದ ಮೇಲೆ ವಿಜಯ ಸಾಧಿಸಿದರೂ ಸುಲ್ತಾನರುಗಳು ತಮ್ಮತಮ್ಮಲ್ಲಿಯೇ ಕಚ್ಚಾಡಿಕೊಳ್ಳುವುದನ್ನು ಮುಂದುವರಿಸಿ, ಮುಂದೆ ಮೊಘಲರ, ಅದರ ನಂತರ ಬ್ರಿಟಿಷರ, ಅಧೀನಕ್ಕೆ ಸೇರಿಹೋದರು. ಕೆಲ ಕನ್ನಡ ಪ್ರದೇಶಗಳು ಹೈದರಾಬಾದಿನ ನಿಜಾಮನ ಆಳ್ವಿಕೆಗೆ ಸೇರಿದರೆ, ಮತ್ತೊಂದು ಭಾಗ ಬ್ರಿಟಿಷರ ಅಧೀನದಲ್ಲಿ ಆಳುತ್ತಿದ್ದ ಮರಾಠರ ಮುಂಬಯಿ ಪ್ರಸಿಡೆನ್ಸಿಗೆ ಸೇರಿತು.

ಅಳಿಯ ರಾಮರಾಯರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಏರೋ ಇಂಡಿಯಾ ಶೋ 

ಆಕಾಶದಲ್ಲಿ ಹಾರಡುವ ಹಕ್ಕಿಗಳಂತೆ ಕಾಣಲು ಸಿದ್ದವಾಗುತ್ತಿದೆ ಏರೋ ಇಂಡಿಯಾ ಶೋ 

ಟೈಪ್ 2 ಡಯಾಬಿಟಿಸ್

ಟೈಪ್ 2 ಡಯಾಬಿಟಿಸ್ ಎಂದರೆ ಏನು? ಮತ್ತು ನಿಯತ್ರಿಸುವುದು ಹೇಗೆ?