in

ಶಬರಿಮಲೆಗೆ ಹೆಣ್ಣುಮಕ್ಕಳು ಯಾಕೆ ಹೋಗಬಾರದು? ಎನ್ನುವುದಕ್ಕೆ ಶಾಸ್ತ್ರದ ಪ್ರಕಾರ ಕಾರಣ

ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಾಲಯಗಳಲ್ಲಿ ಒಂದಾಗಿದೆ. ಧಾರ್ಮಿಕ ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಭೋಲೆನಾಥನು ಭಗವಾನ್ ವಿಷ್ಣುವಿನ ಮೋಹಿನಿ ರೂಪದಿಂದ ಆಕರ್ಷಿತನಾದನು ಮತ್ತು ಈ ಕಾರಣದಿಂದಾಗಿ, ಒಂದು ಮಗು ಜನಿಸಿತು, ಅದನ್ನು ಅವನು ಪಂಪಾ ನದಿಯ ತೀರದಲ್ಲಿ ಬಿಟ್ಟನು. ಈ ಸಮಯದಲ್ಲಿ, ರಾಜ ರಾಜಶೇಖರ ಅವರನ್ನು 12 ವರ್ಷಗಳ ಕಾಲ ಬೆಳೆಸಿದರು. ಈ ಮಗುವನ್ನೇ ನಂತರ ಅಯ್ಯಪ್ಪ ಸ್ವಾಮಿ ಎಂದು ಕರೆಯಲಾಯಿತು.

ಮಹಿಷಾಸುರನು ಬ್ರಹ್ಮನನ್ನು ಕುರಿತು ನೂರು ವರ್ಷ ತಪಸ್ಸು ಮಾಡಿ ತ್ರಿಮೂರ್ತಿಗಳಿಂದ ತನಗೆ ಸಾವು ಬರೆದಂತೆ ವರವನ್ನು ಪಡೆದು ಲೋಕಕಂಟಕನಾದ. ತ್ರಿಮೂರ್ತಿಗಳ ಸಮ್ಮಿಳಿತ ಶಕ್ತಿರೂಪಿಣಿಯಾಗಿ ದುರ್ಗೆ ಮಹಿಷಾಸುರನನ್ನು ಕೊಂದಳು.

ಶಬರಿಮಲೆಗೆ ಹೆಣ್ಣುಮಕ್ಕಳು ಯಾಕೆ ಹೋಗಬಾರದು? ಎನ್ನುವುದಕ್ಕೆ ಶಾಸ್ತ್ರದ ಪ್ರಕಾರ ಕಾರಣ

ಕರಂಬನ ಮಗಳಾದ ಮಹಿಷಿ ತನ್ನ ದೊಡ್ಡಪ್ಪನ ಮಗ ಮಹಿಷಾಸುರನನ್ನು ದೇವತೆಗಳು ಕೂಡಿ ಕೊಂದರೆಂದು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸನ್ನು ಮಾಡಿದಳು. ಶಿವ ಮತ್ತು ವಿಷ್ಣು ಇವರಿಬ್ಬರ ಮಿಲನದಿಂದ ಹುಟ್ಟಿದ ಮಗನ ವಿನಃ ಅವನು ಮನುಷ್ಯರಾಜನೊಬ್ಬನ ಬಳಿ ಹನ್ನೆರಡು ವರ್ಷ ಊಳಿಗ ಮಾಡಿದ ವಿನಃ ಯಾರಿಂದಲೂ ತನಗೆ ಸಾವು ಬರಬಾರದೆಂದು ಆಕೆ ವರ ಪಡೆದಿದ್ದಳು. ಈ ವರದ ಧೈರ್ಯದಿಂದ ಮಹಿಷಿ ಮೂರೂ ಲೋಕಗಳನ್ನು ಪೀಡಿಸತೊಡಗಿದಳು.

ಆ ಸಮಯದಲ್ಲಿ ರಾಜಶೇಖರನ್ ಎಂಬ ಅರಸು ರಾಜ್ಯವಾಳಿಕೊಂಡಿದ್ದನು. ನೀತಿವಂತನೂ ಧರ್ಮನಿಷ್ಠನೂ ಆದ ಅರಸನ  ಆಡಳಿತ ಕಾಲದಲ್ಲಿ ಪ್ರಜಾ ಜನರು ಸಂತುಷ್ಟರಾಗಿದ್ದರು. ಆ ಕಾಲವು ರಾಜ್ಯದ ಸುವರ್ಣ ಕಾಲಘಟ್ಟವೆನಿಸಿತ್ತು. ರಾಜ್ಯವು ಸುಭಿಕ್ಷೆಯಿಂದ ಕೂಡಿದ್ದರೂ ಒಂದು ದುಃಖ ಮಾತ್ರ ರಾಜನನ್ನು ಸದಾ ಕಾಡುತ್ತಿತ್ತು. ಆ ರಾಜನಿಗೆ ಸಂತಾನ ಸೌಭಾಗ್ಯ ಪ್ರಾಪ್ತವಾಗಿರಲಿಲ್ಲ. ರಾಜ್ಯಾಧಿಕಾರವನ್ನು ಮುಂದೆ ವಹಿಸಿಕೊಳ್ಳಲು ಉತ್ತರಾಧಿಕಾರಿ ಇಲ್ಲವೆಂದು ರಾಜನೂ ರಾಣಿಯೂ ನಿಸ್ಸಹಾಯಕರಾಗಿ ಭಗವಾನ್ ಶಿವನಲ್ಲಿ ಮಗುವನ್ನು ಕರುಣಿಸಬೇಕೆಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದರು.

ಅಮೃತಮಂಥನ ಸಂದರ್ಭದಲ್ಲಿ ಶಿವ–ಮೋಹಿನಿಯರು ಕೂಡಿಕೊಂಡು, ಮೋಹಿನಿಯ ಬಲತೊಡೆಯಿಂದ ಹುಟ್ಟಿದ ಶಾಸ್ತನೇ ಮಣಿಕಂಠ. ಮಗುವನ್ನು ಸಂತಾನವಿಲ್ಲದೆ ದುಃಖಿತನಾಗಿದ್ದ, ಶಿವಭಕ್ತನೂ ಆದ, ಪಂದಳ ರಾಜನ ಸಂರಕ್ಷಣೆಯಲ್ಲಿ ಬೆಳೆಸಲು ಹರಿಹರ ಇಬ್ಬರು ನಿರ್ಧರಿಸಿದರು.

ಒಮ್ಮೆ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡುವ ಸಲುವಾಗಿ ಹೋದ ಪಂದಳ ರಾಜನು ಪ್ರಾಕೃತಿಕ ಸೌಂದರ್ಯ ಮತ್ತು ಜಲಪಾತಗಳ ಮನೋಹರತೆಯಲ್ಲಿ ಮುಳುಗಿ ಹೋದನು. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ಶಿಶುವಿನ ಅಳಲು ಕೇಳಿಬಂತು. ಅಚ್ಚರಿಗೊಂಡ ರಾಜನು ಆ ದನಿಯನ್ನು ಹಿಂಬಾಲಿಸಿ ಹೋದನು. ಅಲ್ಲಿ ಅರಸನು ಕೈಕಾಲು ಅಲ್ಲಾಡಿಸುತ್ತಿರುವ ಒಂದು ಮುದ್ದು ಮಗುವನ್ನು ಕಂಡನು. ಕೌತುಕದಿಂದ ಆ ಮಗುವನ್ನು ನೆಟ್ಟ ನೋಟದಿಂದ ನೋಡುತ್ತಿದ್ದ ರಾಜನ ಮುಂದೆ ಸನ್ಯಾಸಿಯೊಬ್ಬ ಪ್ರತ್ಯಕ್ಷನಾಗಿ ಆ ಶಿಶುವನ್ನು ಅರಮನೆಗೆ ಒಯ್ಯುವಂತೆ ಸೂಚಿಸಿದನು. ಆ ಮಗುವಿನ ಸಾನ್ನಿಧ್ಯದಿಂದ ರಾಜವಂಶದ ಮೇಲಿರುವ ಕರಿ ನೆರಳು ದೂರವಾಗುವುದೆಂದೂ ಹನ್ನೆರಡು ವರ್ಷ ಪ್ರಾಯ ಪೂರ್ತಿಯಾದಾಗ ಮಗುವಿನ ದಿವ್ಯತ್ವ ಪ್ರಕಟವಾಗುವುದೆಂದೂ ಹೇಳಿ ಸನ್ಯಾಸಿ ರಾಜನನ್ನು ಎಚ್ಚರಿಸಿದನು. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕಂಡ ಸನ್ಯಾಸಿ ಅವನಿಗೆ ಮಣಿಕಂಠನೆಂದು ನಾಮಕರಣ ಮಾಡಲು ಸೂಚಿಸಿದನು. ರಾಜಶೇಖರನು ಮಗುವಿಗೆ ಕಾಲಕಾಲಕ್ಕೆ ಬೇಕಾದ ಸಂಸ್ಕಾರಗಳನ್ನು ಮಾಡಿದನು. ಮಗುವಾಗಿದ್ದೂ ಮಣಿಕಂಠನು ಬುದ್ಧಿವಂತನೂ ಪರಿಪಕ್ವಮತಿಯೂ ಆಗಿದ್ದನು.

ಈ ನಡುವೆ ರಾಣಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆ ಮಗುವಿಗೆ ರಾಜ ರಾಜನ್ ಎಂದು ನಾಮಕರಣ ಮಾಡಿದ್ದರು. ರಾಜ್ಯದಲ್ಲಿ ನಡೆದು ಹೋದ ಅದ್ಭುತ ಘಟನಾವಳಿಗಳು ರಾಜಶೇಖರನನ್ನು ಚಿಂತಿಸುವಂತೆ ಮಾಡಿದ್ದುವು. ಭಗವಾನ್ ಅಯ್ಯಪ್ಪನೇ ತನ್ನ ಮಗನಾಗಿ ಬಂದಿರುವನೆಂದು ಅವನು ಭಾವಿಸಿದನು. ಮಣಿಕಂಠನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿದನು. ದಿವಾನನ ಹೊರತಾಗಿ ಆಸ್ಥಾನದಲ್ಲಿರುವವರೆಲ್ಲರೂ ಸಂತೋಷಪಟ್ಟರು. ತನ್ನ ಮಹತ್ವಾಕಾಂಕ್ಷೆಯನ್ನು ರಹಸ್ಯವಾಗಿ ಪೋಷಿಸಿದ್ದ ಕುತಂತ್ರಿಯಾದ ಮಂತ್ರಿಯು ಮಣಿಕಂಠನನ್ನು ದ್ವೇಷಿಸುತ್ತಿದ್ದನು. ಅವನು ಈ ದೈವಿಕ ಅವತಾರವನ್ನು ನಿರ್ನಾಮಗೊಳಿಸಲು ಕಟಿಣಬದ್ಧನಾದನು. ವಿಷ ಪ್ರಾಶನವೇ ಮೊದಲಾದ ಹಲವಾರು ತಂತ್ರಗಳನ್ನು ಕೈಗೊಂಡನು. ಮಣಿಕಂಠನಿಗಾದ ಚಿಕ್ಕ ಚಿಕ್ಕ ತೊಂದರೆಗಳನ್ನು ಭಗವಾನ್ ಶಿವನೇ ದೂರೀಕರಿಸಿದನು. ಮಂತ್ರಿಯ ಕುಯುಕ್ತಿಗಳೆಲ್ಲ ವಿಫಲಗೊಂಡುವು.

ತನ್ನ ಯೋಜನೆಗಳು ಭಂಗವಾಗುವುದನ್ನು ಕಂಡು ನಿರಾಶನಾಗಿ ಹೋದ ದಿವಾನನು ರಾಣಿಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸತೊಡಗಿದನು. ಸ್ವಂತ ಮಗನು ಜೀವಿಸಿರುವಾಗಲೇ ಮಣಿಕಂಠನನ್ನು ರಾಜನನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಅವಳಿಗೆ ಹೇಳಿದನು. ಅನಾರೋಗ್ಯ ಇರುವಂತೆ ಅಭಿನಯಿಸಲು ರಾಣಿಗೆ ಸಲಹೆ ನೀಡಿದನು. ಆತನ ವಿಶ್ವಾಸದ ವೈದ್ಯನೊಬ್ಬನಿಂದ ರಾಣಿಯ ಅನಾರೋಗ್ಯ ನಿವಾರಣೆಗೆ ಹುಲಿಯ ಹಾಲು ಬೇಕು ಎಂದು ಹೇಳಿಸಿದನು. ಹುಲಿಯ ಹಾಲನ್ನು ಹುಡುಕಲು ಹೊರಟ ಮಣಿಕಂಠನನ್ನು ನರಭಕ್ಷಕರಿಗೆ ಆಹಾರವನ್ನಾಗಿಸುವುದು ಅವನ ಉದ್ದೇಶ. ಜವಾಬ್ದಾರಿ ನೆರವೇರಿಸಲು ಸಾಧ್ಯವಾಗದೆ ಪರಾಜಿತನಾಗಿ ಮಣಿಕಂಠನು ಹಿಂತಿರುಗಿ ಬಂದಲ್ಲಿ ಸಹಜವಾಗಿಯೇ ಆತನ ಮೇಲಿರುವ ರಾಜನ ಪ್ರೀತಿ ಕಡಿಮೆಯಾಗುವುದು ಎಂದು ರಾಣಿಗೆ ಹೇಳಿದನು.

ಪುತ್ರ ಪ್ರೀತಿಯಿಂದ ಕುರುಡಿಯಾದ ರಾಣಿ ದಿವಾನನ ಮಾತುಗಳನ್ನು ನಂಬಿದಳು. ಆತನು ಸೂಚಿಸಿದಂತೆ, ಸಹಿಸಲು ಅಸಾಧ್ಯವೆನಿಸಿದ ತಲೆನೋವಿನಿಂದ ಬಳಲುತ್ತಿರುವುದಾಗಿ ರಾಜನನ್ನು ನಂಬಿಸಿದಳು. ಭ್ರಮೆಗೊಳಗಾದ ರಾಜನು ಅರಮನೆಯ ವೈದ್ಯನನ್ನು ಕರೆಸಿದನು. ಎಷ್ಟು ಕಷ್ಟಪಟ್ಟರೂ ರಾಣಿಯ ಕಾಯಿಲೆ ಯಾವುದೆಂದು ತಿಳಿದುಕೊಳ್ಳಲು ಅರಮನೆಯ ವೈದ್ಯನಿಂದ ಸಾಧ್ಯವಾಗಲಿಲ್ಲ. ಈ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ದಿವಾನನು ತಾನು ಏರ್ಪಾಡು ಮಾಡಿದ ವೈದ್ಯನನ್ನು ಕರೆಸಿದನು. ರಾಣಿಯನ್ನು ಪರೀಕ್ಷಿಸಿದಂತೆ ನಟಿಸಿದ ಆ ವೈದ್ಯನು ಈಂದ ಹುಲಿಯ ಹಾಲಿನಿಂದ ಮಾತ್ರವೇ ರಾಣಿಯ ರೋಗ ಶಮನಗೊಳ್ಳುವುದೆಂದು ಸೂಚಿಸಿದನು. ರಾಣಿಯ ಕಾಯಿಲೆಯನ್ನು ಗುಣಪಡಿಸಿದವರಿಗೆ ಅರ್ಧರಾಜ್ಯವನ್ನೇ ಕೊಡುವುದಾಗಿ ರಾಜನು ಡಂಗುರ ಸಾರಿಸಿದನು. ಹುಲಿಯ ಹಾಲು ಸಂಗ್ರಹಿಸುವ  ಸಲುವಾಗಿ ಕಾಡಿಗೆ ಹೋದ ಸೈನಿಕರು ಬರಿಗೈಯಲ್ಲಿ ಹಿಂತಿರುಗಿದರು.

ಕುಟುಂಬಕ್ಕಾಗಿ ಒಂದು ಉಪಕಾರವನ್ನು ಮಾಡಲು ತನಗೆ ಒಪ್ಪಿಗೆಯನ್ನು ನೀಡಬೇಕೆಂದು ಮಣಿಕಂಠನು ತಂದೆಯನ್ನು ಒತ್ತಾಯಿಸಿದನು. ಜವಾಬ್ದಾರಿಯುತನಾದ ತಂದೆ ಎಂಬ ನೆಲೆಯಲ್ಲಿ ಮಗನ ಅಪೇಕ್ಷೆಯನ್ನು ಕಡೆಗಣಿಸಿದರೂ ಸನ್ನಿವೇಶದ ಒತ್ತಡದಿಂದಾಗಿ ಹುಲಿಯ ಹಾಲು ತರುವ ಸಲುವಾಗಿ ಕಾಡಿಗೆ ತೆರಳಲು ಮಗನಿಗೆ ಒಪ್ಪಿಗೆ ನೀಡಬೇಕಾಗಿ ಬಂತು. ಮಣಿಕಂಠನ ನೆರವಿಗಾಗಿ ಸಾಹಸಿಗಳಾದ ಭಟರ ಒಂದು ತಂಡವನ್ನು ಅವನೊಂದಿಗೆ ಕಾಡಿಗೆ ಕಳಿಸಲು ಅರಸನು ತೀರ್ಮಾನಿಸಿದನು. ಆದರೆ ಜನರ ಗುಂಪುಗಳನ್ನು ಕಂಡೊಡನೆ ಹುಲಿಯು ಓಡಿ ಹೋಗುವುದೆಂಬ ಕಾರಣದಿಂದ ಮಣಿಕಂಠನು ತಂದೆಯ ತೀರ್ಮಾನವನ್ನು ಒಪ್ಪಲಿಲ್ಲ. ಕೊನೆಗೆ ವಾತ್ಸಲ್ಯಮಯಿಯಾದ ತಂದೆಯು ಆಹಾರ ಸಾಮಗ್ರಿಗಳನ್ನೂ ಶಿವಭಕ್ತಿಯ ಸೂಚಕವಾದ ಹಾಗೂ ಮೂರು ಕಣ್ಣುಗಳಿರುವ ತೆಂಗಿನಕಾಯಿಯನ್ನೂ ಇತ್ತು ಮಗನನ್ನು ಕಳಿಸಿಕೊಟ್ಟನು.

ಮಣಿಕಂಠನು ಅರಣ್ಯವನ್ನು ಪ್ರವೇಶಿಸಿದಾಗ ಭಗವಾನ್ ಶಿವನ ಪಂಚಭೂತಗಣಗಳೂ ಒಟ್ಟಿಗೆ ಸೇರಿಕೊಂಡವು. ಪಯಣದ ನಡುವೆ ದೇವಲೋಕದಲ್ಲಿ ಮಹಿಷಿಯು ನಡೆಸುತ್ತಿರುವ ಅನ್ಯಾಯಗಳೆಲ್ಲ ಮಣಿಕಂಠನ ಗಮನಕ್ಕೆ ಬಂದುವು. ಅವನಲ್ಲಿರುವ ನ್ಯಾಯದ ಪ್ರಜ್ಞೆ ಜಾಗೃತವಾಯಿತು. ಅವನು ಮಹಿಷಿಯನ್ನು ಹಿಡಿದೆಳೆದು ಭೂಲೋಕಕ್ಕೆ ಎಸೆದನು. ಅವಳು ನದಿಯ ದಂಡೆಗೆ ಬಂದು ಬಿದ್ದಳು. ಇಬ್ಬರ ನಡುವೆ ಘೋರವಾದ ಯುದ್ಧ ನಡೆಯಿತು. ಕೊನೆಗೆ ಮಣಿಕಂಠನು ಮಹಿಷಿಯ ಎದೆಯನ್ನೇರಿ ತಾಂಡವ ನೃತ್ಯಗೈದನು. ಅದರ ಪ್ರತಿಧ್ವನಿ ಭೂಮಿಯಲ್ಲೂ ಸ್ವರ್ಗದಲ್ಲೂ ವ್ಯಾಪಿಸಿತು. ದೇವತೆಗಳೂ ಭಯ ಚಕಿತರಾದರು. ತನ್ನ ಮೇಲೆ ನೃತ್ಯ ಮಾಡುವುದು ಹರಿಹರಸುತನಾದ ಪುಣ್ಯ ಪುರುಷನೆಂಬುದನ್ನು ಮಹಿಷಿ ಅರಿತುಕೊಂಡಳು. ಆ ಚಿಕ್ಕ ಬಾಲಕನಿಗೆ ನಮಸ್ಕರಿಸಿ ಮರಣಕ್ಕೆ ಶರಣಾದಳು.

ಶಬರಿಮಲೆಗೆ ಹೆಣ್ಣುಮಕ್ಕಳು ಯಾಕೆ ಹೋಗಬಾರದು? ಎನ್ನುವುದಕ್ಕೆ ಶಾಸ್ತ್ರದ ಪ್ರಕಾರ ಕಾರಣ

ಮಹಿಷಿಯ ನಿಗ್ರಹದ ಬಳಿಕ ಮಣಿಕಂಠನು ಹುಲಿಯ ಹಾಲನ್ನು ಸಂಗ್ರಹಿಸುವ ಸಲುವಾಗಿ ಅರಣ್ಯವನ್ನು ಪ್ರವೇಶಿಸಿದನು.  ಹುಲಿಯ ಹಾಲನ್ನು ಸಂಗ್ರಹಿಸಲು ದೇವೇಂದ್ರನ ಸಹಾಯವನ್ನು ಕೋರುತ್ತಾನೆ.  ದೇವೇಂದ್ರನು ಹುಲಿಯ ರೂಪ ತಾಳಿ ಮಣಿಕಂಠನೊಡನೆ ಅರಮನೆಯತ್ತ ಹೊರಟನು. ಉಳಿದ ದೇವತೆಗಳು ಗಂಡು ಹುಲಿಗಳಾಗಿ ದೇವಿಯರು ಹೆಣ್ಣು ಹುಲಿಗಳಾಗಿ ಅವರನ್ನು ಹಿಂಬಾಲಿಸಿದರು. ಮರಿಹುಲಿಯೂ ಇತರ ದೊಡ್ಡ ಹುಲಿಗಳ ತಂಡವೂ ಬರುತ್ತಿರುವುದನ್ನು ಕಂಡು ಹೆದರಿದ ಪಂದಳದ ಜನರು ಓಡಿ ಹೋಗಿ ಮನೆಗಳಲ್ಲಿ ಅವಿತರು. ಆಶ್ಚರ್ಯಚಕಿತನಾದ ರಾಜನ ಮುಂದೆ ಹಿಂದೆ ಕಾಡಿನಲ್ಲಿ ಭೇಟಿಯಾಗಿದ್ದ ಸನ್ಯಾಸಿಯು ಫಕ್ಕನೆ ಪ್ರತ್ಯಕ್ಷನಾಗಿ ಮಣಿಕಂಠನ ದೈವತ್ವದ ರಹಸ್ಯವನ್ನು ಸ್ಪಷ್ಟಪಡಿಸಿದನು. ಮಣಿಕಂಠನು ಹುಲಿಗಳೊಂದಿಗೆ ಅರಮನೆಯ ಪ್ರವೇಶ ದ್ವಾರಕ್ಕೆ ಹತ್ತಿರವಾಗಲು ರಾಜನಲ್ಲಿ ಮೌನ ಹಾಗೂ ವಿಷಾದಭಾವ ತುಂಬಿತು. ಹುಲಿಯ ಬೆನ್ನಿನ ಮೇಲಿಂದ ಕೆಳಗಿಳಿದ ಬಾಲಕನು ಚಕ್ರವರ್ತಿಯೊಂದಿಗೆ ಹೇಳಿದನು ‘‘ಮರಿ ಹಾಕಿದ ಹುಲಿಯನ್ನು ತಂದಿದ್ದೇನೆ. ಇನ್ನು ಆದಷ್ಟು ಬೇಗನೆ ಹಾಲು ಸಂಗ್ರಹಿಸಿ ತಾಯಿಯ ರೋಗವನ್ನು ದೂರೀಕರಿಸಿ,ಎಂದು ಹೇಳುತ್ತಾನೆ. ರಾಜನು ಹೆಚ್ಚು ಹೊತ್ತು ತಡೆಯಲಾರದೆ ಬಾಲಕನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಕೊನೆಗೆ, ರಾಣಿಯ ಕಪಟ ನಾಟಕದ ರಹಸ್ಯ ಬಯಲಾದ ಆ ನಿಮಿಷದಲ್ಲಿ ಮಣಿಕಂಠನು ಅರಣ್ಯದತ್ತ ತೆರಳಿದನು. ಕಾಡಿನಿಂದ ಹಿಂತಿರುಗಿ ಬರುವಾಗ ಅವನಿಗೆ ಹನ್ನೆರಡು ವರ್ಷ ಪ್ರಾಯವಾಗಿತ್ತು. ತನ್ನ ಮಗನು ನಾಡನ್ನು ಬಿಟ್ಟು ಕಾಡಿಗೆ ತೆರಳಲು ಕಾರಣನಾದ ದಿವಾನನನ್ನು ದಂಡಿಸಬೇಕೆಂದು ಅರಸನು ತೀರ್ಮಾನಿಸಿದನು. ಆದರೆ, ಎಲ್ಲವೂ ದೈವೇಚ್ಛೆಯಂತೆ ನಡೆಯುವುದೆಂದೂ ಸಂಯಮವನ್ನು ಪಾಲಿಸಬೇಕೆಂದೂ ಮಣಿಕಂಠನು ಸಲಹೆ ನೀಡಿದನು. ತನ್ನ ಅವತಾರದ ಉದ್ದೇಶವನ್ನು ಪೂರ್ತಿಗೊಳಿಸಿದ್ದರಿಂದ ತಾನು ದೇವಲೋಕಕ್ಕೆ ಹಿಂತಿರುಗುವುದಾಗಿಯೂ ತಂದೆಗೆ ಸೂಚಿಸಿದನು. ತನ್ನಲ್ಲಿ ತೋರಿದ ಭಕ್ತಿ ವಿಶ್ವಾಸಗಳ ಬಗ್ಗೆ ತಾನು ಸಂತುಷ್ಟನೆಂದೂ ಅದಕ್ಕಿರುವ ಪ್ರತಿಫಲ ಎಂಬ ನೆಲೆಯಲ್ಲಿ ರಾಜನಿಗೆ ಆತನು ಬಯಸಿದ ಒಂದು ವರವನ್ನು ನೀಡಲು ಸಿದ್ಧನಾಗಿರುವುದಾಗಿಯೂ ತಿಳಿಸಿದನು. ಮಣಿಕಂಠನ ಸ್ಮರಣೆಗಾಗಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂಬ ಅಭಿಲಾಷೆ ಇದೆಯೆಂದೂ ಅದಕ್ಕೆತಕ್ಕುದಾದ ಜಾಗವನ್ನು ತೋರಿಸಿಕೊಡಬೇಕೆಂದೂ ಆ ಕ್ಷಣದಲ್ಲಿ ರಾಜಶೇಖರನು ತನ್ನ ಅಪೇಕ್ಷೆಯನ್ನು ಮುಂದಿಟ್ಟನು. ಕೂಡಲೇ ಮಣಿಕಂಠನು ಒಂದು ಶರವನ್ನು ತೆಗೆದು ದೂರಕ್ಕೆ ಎಸೆದನು. ಆ ಶರವು ಶ್ರೀರಾಮನ ಕಾಲದಲ್ಲಿ ಶಬರಿ ಎಂದು ಖ್ಯಾತಳಾದ ಸನ್ಯಾಸಿನಿ ತಪಸ್ಸನ್ನಾಚರಿಸಿದ್ದ ಶಬರಿ ಎಂಬ ಸ್ಥಳದಲ್ಲಿ ಹೋಗಿ ನಾಟಿತು. ಆ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಸೂಚಿಸಿದ ಬಳಿಕ ಮಣಿಕಂಠನು ಅಪ್ರತ್ಯಕ್ಷನಾದನು.

ಮಣಿಕಂಠನು ಮಹಿಷಿಯನ್ನು ಕೊಂದ ಬಳಿಕ, ಎಮ್ಮೆಯ ಮೈಯಿಂದ ಲೀಲೆ ತನ್ನ ಸ್ವರೂಪವನ್ನು ತಳೆದು ಹೊರಗೆ ಬಂದು ಮಣಿಕಂಠನನ್ನು ಮದುವೆಯಾಗೆಂದು ನಿರ್ಬಂಧಿಸಿದಳಂತೆ. ಶಬರಿಮಲೆ ಯಾತ್ರಿಕರಲ್ಲಿ ಯಾವುದಾದರೂ ವರ್ಷ ‘ಸರಂಕುಟ್ಟಿಯಲ್’ನಲ್ಲಿ ಆಲದ ಮರಕ್ಕೆ ಬಾಣ ಬಿಡುವ ‘ಕನ್ನಿ ಅಯ್ಯಪ್ಪ’ (ಮರಿ ಸ್ವಾಮಿ ಅಂತ ಕೂಡ ಕರೆಯುತ್ತಾರೆ) ಒಬ್ಬನೂ ಇರದಿದ್ದರೆ ಆ ವರ್ಷ ಲೀಲೆಯನ್ನು ಮದುವೆಯಾಗುವೆನೆಂದ ಮಣಿಕಂಠ ವಾಗ್ದಾನ ಮಾಡಿದನಂತೆ. ಆದರೆ ‘ಕನ್ನಿ ಅಯ್ಯಪ್ಪ’ಗಳ ಸಂಖ್ಯೆ ವರ್ಷವರ್ಷವೂ ಹೆಚ್ಚುತ್ತಲೇ ಬರುತ್ತಿದೆಯಾಗಿ ಲೀಲೆ ಇನ್ನೂ ಅವಿವಾಹಿತಳಾಗಿಯೇ ಇದ್ದಾಳೆಂದೂ, “ಸರಂಕುಟ್ಟಿಯಲ್” ಎಂಬೆಡೆ ಆಕೆ ಕಾಯುತ್ತಿದ್ದಾಳೆಂದೂ ನಂಬಿಕೆ. ಮಣಿಕಂಠ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾನೆ!

ಈ ಪ್ರಕಾರ ವಯಸ್ಸಿನ ಹೆಣ್ಣುಮಕ್ಕಳು ಅಯ್ಯಪ್ಪನ ಸನ್ನಿಧಿಗೆ ಹೋಗುವಂತಿಲ್ಲ ಎಂದು ನಂಬಿಕೆ.

ಅಯ್ಯಪ್ಪನ ದೇವಾಲಯದಲ್ಲಿ ಮಹಿಳೆಯರಿಗೆ ಸಂಪೂರ್ಣ ನಿಷೇಧವಿಲ್ಲ, ನಿರ್ದಿಷ್ಟ ವಯೋಮಾನದವರಿಗೆ ಮಾತ್ರವೇ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧಕ್ಕೂ ದೇವಾಲಯದ ಆಚರಣೆಗೂ ಸಂಬಂಧವಿದೆ. ಈ ನಿರ್ಬಂಧವನ್ನು ಮುರಿಯುವುದು ಎಂದರೆ ಅಲ್ಲಿಯ ಪೂಜಾಪದ್ಧತಿಗೇ ಅಪಚಾರ ಮಾಡಿದಂತೆ  ಎನ್ನುವುದು ತೀರ್ಪಿನ ವಿರೋಧಿಗಳ ವಾದ. ಈ ನಿರ್ಬಂಧಕ್ಕೆ ಮಹಿಳೆಯರ ಋತುಚಕ್ರವೇ ಕಾರಣ ಎನ್ನುವುದೂ ಪೂರ್ಣಸತ್ಯವಲ್ಲ.

ಪ್ರತಿ ವರ್ಷ  ಮಕರ ಸಂಕ್ರಾತಿಗೆ ಭಕ್ತರು ಶ್ರದ್ಧೆ ಭಕ್ತಿಯಿಂದ, ವೃತವನ್ನು ಆಚರಿಸಿ,ಇರುಮುಡಿ ಕಟ್ಟಿಕೊಂಡು  ಹದಿನೆಂಟು ಮೆಟ್ಟಿಲು ಏರಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.ಅಯ್ಯಪ್ಪನು ಮಕರ ಜ್ಯೋತಿಯ ರೂಪದಲ್ಲಿ ದರ್ಶನ ಕೊಡುತ್ತಾನೆ ಎಂಬ ನಂಬಿಕೆ.ರಾಜನ ಆಸೆಯ ಪ್ರಕಾರ ಅವತ್ತಿನ ಒಂದು ದಿನ ಆಭರಣಗಳ ಅಲಂಕಾರ ಮಾಡಿಕೊಳ್ಳಲು ಒಪ್ಪಿಕೊಂಡಿರುತ್ತಾರೆ. ಆಭರಣಗಳ ಪೆಟ್ಟಿಗೆ ತರುವ ಸಂದರ್ಭದಲ್ಲಿ ಈಗಲೂ ನಾವು ಗಮನಿಸಬಹುದು ಹದ್ದೊಂದು ಕಾವಲಿಗೆ ಬರುತ್ತದೆ. ಭಗವಂತ ವಿಷ್ಣುವಿನ ವಾಹನ ಹದ್ದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಖಳನಾಯಕನಲ್ಲ, ಮಹಾನ್ ನಾಯಕ ಕರ್ಣ

ಖಳನಾಯಕನಲ್ಲ, ಮಹಾನ್ ನಾಯಕ ಕರ್ಣ

ತುಳುವ ನಾಡಿನ ಅಮರ್ ಬೊಳ್ಳಿಳು, ಕೋಟಿ ಚೆನ್ನಯರು