in ,

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆ

ಕುಸುಬೆ
ಕುಸುಬೆ

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ, ರಾಯಚೂರು, ಧಾರವಾಡ ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯವಾಗಿರುವದರಿಂದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ಕುಸುಬಿ ಹೊಟ್ಟಿನಿಂದ (ತೌಡ) ದನ ಕರುಗಳಿಗಾಗಿ ಹಿಂಡಿ ಯನ್ನು ತಯಾರಿಸುತ್ತಾರೆ.

ಕಂಪಾಸಿಟೀ ಕುಟುಂಬಕ್ಕೆ ಸೇರಿದ ಕಾರ್ತಮಸ್ ಟಿಂಕ್ಟೋರಿಯಸ್ ಎಂಬ ವೈಜ್ಞಾನಿಕ ಹೆಸರು. ಇದು ಕುಸುಂಬಿ, ಕುಸುಬೆ, ಕುಸುಮೆ ಎಂದೂ ಪರಿಚಿತವಾಗಿದೆ. ಕಾಡು ಪ್ರಭೇದಗಳಾದ ಕಾರ್ತಮಸ್ ಲ್ಯಾನೇಟಸ್ ಅಥವಾ ಕಾರ್ತಮಸ್ ಆಕ್ಸಿಅಕ್ಯಾಂತ ಎಂಬುವುಗಳಿಂದ ಕುಸುಬೆ ವಿಕಾಸವಾಗಿದೆಯೆಂದು ಊಹಿಸಲಾಗಿದೆ.

ವಾರ್ಷಿಕ ಸಸ್ಯ. 1-3 ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಅಂಚು ಮತ್ತು ತುದಿಗಳಲ್ಲಿ ಮುಳ್ಳುಗಳಿವೆ. ಹೂಗಳು ಹಳದಿ ಅಥವಾ ಕಿತ್ತಳೆ-ಕೆಂಪುವರ್ಣವಾಗಿದ್ದು ಗೋಳಾಕಾರದ ಚಂಡುಮಂಜರಿಗಳಲ್ಲಿ ಜೋಡಿಸಿಕೊಂಡಿರುತ್ತವೆ. ಇದರ ಕಾಯಿ ನಯವಾಗಿದ್ದು ನಾಲ್ಕು ಮೂಲೆಯ ಒಂದೇ ಬೀಜವುಳ್ಳ ಅಕೀನ್ ಮಾದರಿಯದಾಗಿರುತ್ತದೆ ಕೆಲವು ತಳಿಗಳ ಎಲೆಗಳ ತುದಿ ಮತ್ತು ಅಂಚುಗಳಲ್ಲಿ ಬಲವಾದ ಮುಳ್ಳುಗಳಿವೆ. ಮಿಕ್ಕ ತಳಿಗಳು ಮುಳ್ಳಿಲ್ಲದ ಎಲೆಗಳುಳ್ಳವು. ಮುಳ್ಳೆಲೆಯ ತಳಿಗಳನ್ನು ಮುಖ್ಯವಾಗಿ ಎಣ್ಣೆಗಾಗಿಯೂ ಮುಳ್ಳಿಲ್ಲದ ಎಲೆಗಳ ತಳಿಗಳನ್ನು ಬಣ್ಣ ತಯಾರಿಕೆಗಾಗಿಯೂ ಬೆಳೆಸುತ್ತಾರೆ.

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆ
ಕುಸುಬೆ ಬೀಜ

ಕುಸುಬೆಯನ್ನು ಮುಖ್ಯವಾಗಿ ಮಳೆ ನೀರನ್ನು ಆಧಾರ ಮಾಡಿಕೊಂಡಿರುವ ಹೊಲಗಳಲ್ಲಿ ಬೆಳೆಸುವರು. ಇದನ್ನು ಭಾರತ, ಚೀನ, ಪರ್ಷಿಯ, ಕಾಕಸಸ್, ಈಜಿಪ್ಟ್, ಇಟಲಿ, ಸ್ಪೇನ್, ಅಮೆರಿಕ ಸಂಯುಕ್ತಸಂಸ್ಥಾನಗಳು, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಬೆಳೆಸಲಾಗುತ್ತಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಇದರ ಬೇಸಾಯ ಇದೆ. ಮೈಸೂರು ರಾಜ್ಯದ ಉತ್ತರದ ಜಿಲ್ಲೆಗಳಾದ ಧಾರವಾಡ, ಬೆಳೆಗಾಂವಿ, ಗುಲ್ಬರ್ಗಾ, ರಾಯಚೂರು, ಬಿದರೆ ಮುಂತಾದೆಡೆಗಳಲ್ಲಿ ವ್ಯಾಪಕವಾಗಿ ಇದನ್ನು ಬೆಳೆಸುತ್ತಾರೆ. ಕುಸುಬೆಯ ಸುಮಾರು 60 ತಳಿಗಳು ಸದ್ಯದಲ್ಲಿ ಬೇಸಾಯದಲ್ಲಿವೆ. ಒಂದೊಂದು ರಾಜ್ಯದಲ್ಲೂ ಆಯಾ ರಾಜ್ಯದ ಹವಾಗುಣ್ಣಕ್ಕೆ ಒಗ್ಗುವ ತೆಳೆಗಳನ್ನು ರೂಪಿಸಿ ವ್ಯವಸಾಯಕ್ಕೆ ಅಣಿಗೊಳಿಸುವ ಯತ್ನ ನಡೆಯುತ್ತಿದೆ. ತಮಿಳುನಾಡಿನಲ್ಲಿ ಪೂಸಾ ಮಾದರಿ 1,28 ಎಂಬ ತಳಿಗಳನ್ನೂ ಉತ್ತರ ಪ್ರದೇಶದಲ್ಲಿ ಮಾದರಿ 56ನ್ನೂ ಹೆಚ್ಚಾಗಿ ಬೆಳೆಸಲಾಗುತ್ತಿದೆ. ಅವು ಆಯಾ ಪ್ರದೇಶಕ್ಕೆ ಅತ್ಯಂತ ಚೆನ್ನಾಗಿ ಹೊಂದಿಕೊಂಡಿವೆ. ಮಹಾರಾಷ್ಟ್ರ ಮತ್ತು ಮೈಸೂರು ರಾಜ್ಯಗಳಲ್ಲಿ ನಿಫಡ್-630 ಎಂಬ ತಳಿಯನ್ನು ಹೆಚ್ಚಾಗಿ ಬೆಳೆಸಿರುತ್ತಾರೆ.

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆ
ಕುಸುಬೆ ಎಣ್ಣೆ

ಈಗ ಕುಸುಬೆಯನ್ನು ಎಣ್ಣೆಯ ಬೀಜಕ್ಕಾಗಿ ವ್ಯವಸಾಯ ಮಾಡಲಾಗುತ್ತಿದೆ. ಹಿಂದೆ ಇದರ ಹೂದಳದಿಂದ ತಯಾರಾಗುತ್ತಿದ್ದ ಬಣ್ಣಕ್ಕಾಗಿ ಸಹ ಇದನ್ನು ಬೆಳೆಸುತ್ತಿದ್ದರು. ಕೃತಕ ವರ್ಣಗಳ ತಯಾರಿಕೆಯಿಂದ ಕುಸುಬೆಯನ್ನು ಬಣ್ಣ ತಯಾರಿಸಲು ಅಷ್ಟಾಗಿ ಈಗ ಬಳಸುತ್ತಿಲ್ಲ. ಅಷ್ಟಾಗಿ ಮಳೆಯಾಗದ ಮತ್ತು ಅಷ್ಟಾಗಿ ಫಲವತ್ತಾಗಿರದ ಪ್ರದೇಶಗಳಲ್ಲೂ ಇದು ಬೆಳೆಯಬಲ್ಲದು. ಇದನ್ನು ಗೋದಿ, ಬಾರ್ಲಿ, ಹುರಳಿ, ಜೋಳ ಇತ್ಯಾದಿ ಬೆಳೆಗಳೊಡನೆ ಮಿಶ್ರಬೆಳೆಯಾಗಿ ಬೆಳೆಸುವರು. ಇದನ್ನೆ ಪ್ರಧಾನ ಬೆಳೆಯನ್ನಾಗಿ ಇಡುವುದೂ ಉಂಟು. ಸಾಮಾನ್ಯವಾಗಿ ಅಕ್ಟೋಬರ್, ನವಂಬರ್, ಡಿಸಂಬರ್ ತಿಂಗಳುಗಳಲ್ಲಿ ಬೀಜ ಬಿತ್ತುವರು. ಇದನ್ನೇ ಶುದ್ಧ ಬೆಳೆಯನ್ನಾಗಿ ಬಿತ್ತಲು ಎಕರೆಗೆ 10-15 ಕೆಜಿ. ಬೀಜ ಬೇಕಾಗುವುದು. ಗಿಡದಲ್ಲಿ ಮೊಗ್ಗುಗಳು ಕಾಣಿಸಿಕೊಳ್ಳುವ ಸುಮಾರಿಗೆ ಕೊಂಬೆಯನ್ನು ಜಿಗುಟಿ ಹಾಕುವರು. ಇದರಿಂದ ಕೊಂಬೆ ಬೇಕಾದ ಹಾಗೆ ಕವಲೊಡೆದು ಹೆಚ್ಚು ಹೂ ಮತ್ತು ಕಾಯಿಗಳನ್ನು ಬಿಡುವುದು. ಕೇವಲ ಬಣ್ಣ ತಯಾರಿಕೆಗೆ ಇದನ್ನು ಬೆಳೆಸುವಾಗ ಅರಳಿದ ಹೂಗಳನ್ನು ಬಾಡುವ ಮುನ್ನ ಸಂಗ್ರಹಿಸುವರು. ಎಣ್ಣೆಗಾಗಿ ಬೆಳೆಸುವಾಗ ಕಾಯಿಗಳು ಚೆನ್ನಾಗಿ ಬಲಿತೊಡನೆ ಗಿಡಗಳನ್ನು ಕಿತ್ತು ಒಣಗಿಸಿ, ಬಡಿದು ಕಾಳನ್ನು ಸಂಗ್ರಹಿಸುವರು. ಎಕರೆಯೊಂದಕ್ಕೆ 80-120 ಪೌಂಡು ಒಣ ಹೂದಳಗಳು ಅಥವಾ 100-250 ಪೌಂಡುಗಳಷ್ಟು ಕಾಳುಗಳು ದೊರಕುತ್ತವೆ.

ಹೂದಳಗಳಲ್ಲಿ ಕಾರ್ತಮಿನ್, ಕುಸುಬೆ ಹಳದಿ ಮತ್ತು ಐಸೊಕಾರ್ತಮಿನ್  ಎಂಬ ಮೂರು ವರ್ಣಾಂಶಗಳಿವೆ. ಕಾರ್ತಮಿನ್ನನ್ನು ಸಂಗ್ರಹಿಸಿ ರೇಷ್ಮ ಹತ್ತಿ ದಾರಗಳಿಗೆ ತೀವ್ರ ಕೆಂಪುವರ್ಣವನ್ನು ಕಟ್ಟಲು ಬಳಸುವರು. ದಳಗಳಲ್ಲಿ ಕುಸುಬೆ-ಹಳದಿ ಅಧಿಕವಾಗಿದ್ದರೂ ಅದು ಯಾವ ಉಪಯೋಗಕ್ಕೂ ಬರುವುದಿಲ್ಲ. ಅದನ್ನು ಪ್ರತ್ಯೇಕಿಸಿ ತೆಗೆದುಹಾಕಿಯೇ ಕಾರ್ತಮಿನ್ನಾಗಿ ಪರಿವರ್ತನೆ ಹೊಂದುವುದು. ಒಣಗಿದ ಹೂದಳಗಳನ್ನು ಆಮ್ಲಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆದು ಅದರಲ್ಲಿರುವ ಕುಸುಬೆ-ಹಳದಿಯನ್ನು ಬೇರ್ಪಡಿಸುವರು. ಅನಂತರ ಆ ದಳಗಳನ್ನು ಸುಮಾರಾಗಿ ಒಣಗಿಸಿ ಬಿಲ್ಲೆಗಳಾಗಿ ಕಟ್ಟಿ ಮಾರಾಟಕ್ಕಿಡುವರು. ಅಥವಾ, ತೊಳೆದ ದಳಗಳನ್ನು ಸೋಡಿಯಂ ಕಾರ್ಬೊನೇಟ್ ದ್ರಾವಣದಲ್ಲಿ ಸಂಗ್ರಹಿಸಿ ದುರ್ಬಲ ಆಮ್ಲದಿಂದ ಸಂಸ್ಕರಿಸಿ ಅಂಗಡಿಯಲ್ಲಿ ಮಾರುವ ಕಡುಗೆಂಪು ಬಣ್ಣದ ವಸ್ತುವನ್ನು ತಯಾರಿಸುವರು. ಇದನ್ನು ರೇಷ್ಮೆ ಮತ್ತು ಹತ್ತಿಗಳಿಗೆ ಬೇರೆ ಬೇರೆ ತೀವ್ರತೆಯ ಕೆಂಪುಬಣ್ಣ ಕಟ್ಟಲು ಬಳಸುವರು. ಕೃತಕವರ್ಣಗಳು ಪ್ರಚಾರಕ್ಕೆ ಬಂದಿರುವುದರಿಂದ ಈಗ ಇದನ್ನು ಬಟ್ಟೆಗೆ ಬಣ್ಣಕಟ್ಟಲು ಅಷ್ಟಾಗಿ ಬಳೆಸುತ್ತಿಲ್ಲ. ಆದರೆ ಭಾರತದಲ್ಲಿ ಶುಭಕಾರ್ಯಗಳಲ್ಲಿ ಬಳಸುವ ವಸ್ತ್ರಾದಿಗಳಿಗೆ ಬಣ್ಣ ಕಟ್ಟಲು ಇಂದಿಗೂ ಉಪಯೋಗ ಉಂಟು. ಎರಡನೆಯ ಮಹಾಯುದ್ಧದವರೆಗೂ ಬಂಗಾಳದಿಂದ ಈ ರಂಗು ಹಾಂಕಾಂಗ್, ಜಾವಾ, ಜಪಾನ್, ಮುಂತಾದ ದೇಶಗಳಿಗೆ ರಫ್ತಾಗುತ್ತಿತ್ತು. 1942 ರಿಂದ ಅದಕ್ಕೆ ಗಿರಾಕಿಗಳು ಇಲ್ಲವಾಗಿದೆ.

ಕುಸುಬೆ ಎಣ್ಣೆ ಒಂದು ಪ್ರಮುಖ ವಾಣಿಜ್ಯವಸ್ತು, ಕಚ್ಚಾ ಕುಸುಬೆಯನ್ನು ಗಾಣದಲ್ಲಿ ಹಿಂಡಿ ಹಸಿ ಎಣ್ಣೆ ತೆಗೆಯುವರು ಅಥವಾ ಕಾಳನ್ನು ಹರಿದು ಎಣ್ಣೆ ಬಟ್ಟಿಯಿಳಿಸುವುದೂ ಉಂಟು. ದೊಡ್ಡ ಪ್ರಮಾಣದಲ್ಲಿ ತಯಾರಿಸುವಾಗ ಎಕ್ಸ್ ಪೆಲರ್‍ಗಳ ಸಹಾಯದಿಂದ ಎಣ್ಣೆ ತೆಗೆಯುವರು. ಕುಸುಬೆಯಲ್ಲಿ ಸುಮಾರು 20% ರಿಂದ 30% ರಷ್ಟು ಎಣ್ಣೆಯಿರುತ್ತದೆ. ಹಸಿ ಬೀಜದಿಂದ ತೆಗೆದ ಎಣ್ಣೆಯ ಬಣ್ಣ ಹೊನ್ನು ಹಳದಿ. ಅದನ್ನು ಮುಖ್ಯವಾಗಿ ಪದಾರ್ಥಗಳನ್ನು ಕರಿಯುವ ಖಾದ್ಯ ತೈಲವನ್ನಾಗಿ ಹಿಂದಿನಿಂದಲೂ ಬಳಸುತ್ತಾರೆ. ದೀಪಕ್ಕೂ ಉಪಯೋಗಿಸುತ್ತಿದ್ದಾರೆ. ಈಚೆಗೆ ಸಾಬೂನು ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಕೆಲವು ಕೇಶತ್ಯೆಲಗಳ ತಯಾರಿಕೆಯಲ್ಲೂ ಬಳಸುವುದುಂಟು. ಕುಸುಬೆ ಎಣ್ಣೆ ನಾರಗಸೆಯ (ಲಿನ್‍ಸೀಡ್) ಎಣ್ಣೆಯನ್ನು ಹೋಲುವುದಾದರೂ ಅದರಲ್ಲಿರುವ ಲಿನೊಲೆನಿಕ್ ಆಮ್ಲದ ಪ್ರಮಾಣ ತೀರ ಅಲ್ಪ. ನಾರಗಸೆ ಎಣ್ಣೆಗಿಂತ ನಿಧಾನವಾಗಿ ಇದು ಮಂದಗಟ್ಟುತ್ತದೆ. ಇದು ಬೇಗ ಆರುವ ವಸ್ತುವಾದ್ದರಿಂದ ಬಣ್ಣ, ವಾರ್ನಿಷ್, ಲಿನೋಲಿಯಂ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತಿದೆ. ಇದನ್ನು ಬಳಸಿ ತಯಾರಿಸಿದ ಬಣ್ಣಗಳು ಬೇಗ ಆರುವುವಲ್ಲದೆ ಅವು ತುಂಬ ಹೊಳಪನ್ನೂ ಕೊಡುತ್ತವೆ. ಈ ಎಣ್ಣೆಯನ್ನು 3000 ಸೆಂ. ಉಷúತೆಯಲ್ಲಿ ಎರಡು ಗಂಟೆಗಳ ಕಾಲ ಕಾಯಿಸಿ ತಣ್ಣೀರಿಗೆ ಸುರಿದಾಗ ಒಂದು ರೀತಿಯ ಪಾಕದಂಥ ವಸ್ತುವಾಗುತ್ತದೆ. ಇದನ್ನು ಗಾಜು, ಹರಳು, ಹಂಚು ಮುಂತಾದವನ್ನು ಕೂಡಿಸಲು ಪ್ಲಾಸ್ಟರ್ ಆಫ್ ಪ್ಯಾರಿಸ್‍ಗೆ ಬದಲಾಗಿ ಬಳಸುವರು. ಕುಸುಬೆ ಕಾಳನ್ನು ಹುರಿದು ತಯಾರಿಸಿದ ಎಣ್ಣೆ ಕಪ್ಪಾಗಿ ಅಂಟು ಅಂಟಾಗಿರುತ್ತದೆ. ಈ ಎಣ್ಣೆಯನ್ನು ಬಾವಿಯ ಹಗ್ಗ, ಚರ್ಮ ಮುಂತಾದವಕ್ಕೆ ಗ್ರೀಸಿಗೆ ಬದಲಾಗಿ ಬಳಸುವರು. ಕುಸುಬೆ ಎಣ್ಣೆಯನ್ನು ಈಚೆಗೆ ಕೆಲವು ಹೃದ್ರೋಗಗಳಿಗೆ (ಕರೋನರಿ, ತ್ರಾಂಬೊಸಿಸ್, ಇತ್ಯಾದಿ) ನಡೆಸುವ ಚಿಕಿತ್ಸೆಯಲ್ಲೂ ಬಳೆಸುತ್ತಿದ್ದಾರೆ. ಕುಸುಬೆಯ ಹಿಂಡಿ ಒಂದು ಮುಖ್ಯ ಉತ್ಪನ್ನ, ಬೀಜದ ಸಿಪ್ಪೆ ತೆಗೆದು ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿಯನ್ನು ದನಗಳ ಮೇವಿಗೆ ಬಳಸುವರು. ಸಿಪ್ಪೆ ತೆಗೆಯುವ ಬೀಜಗಳಿಂದ ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿಯನ್ನು ಗೊಬ್ಬರಕ್ಕೆ ಬಳಸುವರು. ಎಳೆಯವಾಗಿರುವಾಗ ಇದರ ಸೊಪ್ಪನ್ನು ಪಲ್ಯ, ಹುಳಿ ಮುಂತಾದವಕ್ಕೆ ಉಪಯೋಗಿಸುವರು. ಇದರ ಹೂದಳಗಳನ್ನು ಶಾಮಕ ಔಷಧವಾಗಿಯೂ (ಸಿಡೆಟೀವ್) ಉತ್ತೇಜಕ ವಸ್ತುವಾಗಿಯೂ ವಿರೇಚಕವಾಗಿಯೂ ಬಳಸುವರು. ಇದರ ದಳಗಳನ್ನು ಕುಂಕುಮ ಕೇಸರಿಯೊಡನೆ ಕಲಬೆರಕೆ ಮಾಡುವುದೂ ಉಂಟು. ಕುಸುಬೆ ಬೀಜಗಳನ್ನು ಮೂತ್ರಸ್ರಾವ ಉತ್ತೇಜಕವಾಗಿ ಮತ್ತು ಹುರಿದ ಬೀಜಗಳನ್ನು ಹುರಿಗಾಳಿನೊಡನೆ ಬೆರೆಸುವುದಕ್ಕೆ ಬಳಸುವರು.

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆ
ಕುಸುಬೆ ಆರೋಗ್ಯ ಸಹಕಾರಿ

ಉಪಯೋಗಗಳು
ಈ ಸಸ್ಯದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ. ಪಾರ್ಶ್ವವಾಯುವಿನಿಂದ ಪೀಡಿತರಾದವರಿಗೆ ಮಾಂಸವೇಶಿಗಳ ಉತ್ತೇಜನ ಮಾಡಲು ಇದರ ಎಣ್ಣೆಯ ಅಭ್ಯಂಗ ಮಾಡಿಸುತ್ತಾರೆ. ಕುದಿಯುತ್ತಿರುವ ನೀರಿಗೆ ಬೀಜ ಹಾಕಿ, ರಾತ್ರಿ ಇಟ್ಟು ಬೆಳಿಗ್ಗೆ ಶೋಧಿಸಿ ಉಪಯೋಗ ಮಾಡಿದರೆ ಮಲಬಧ್ಹತೆ ನಿವಾರಣೆಯಾಗುತ್ತದೆ. ಸಸ್ಯವನ್ನು ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ, ತೆಣಿಸಿ ಶರೀರದಲ್ಲಾಗುವ ನವೆಗೆ ಉಪಯೋಗಿಸಬಹುದು. ಕುಸುಬಿ ಸೊಪ್ಪಿನ ತರಕಾರಿಗಿಂತ ನಮ್ಮ ರಾಜ್ಯದ ಪ್ರಮುಖವಾದ ಎಣ್ಣೆ ಕಾಳಿನ ಖುಷ್ಕಿ ಬೆಳೆಗಳಲ್ಲಿ ಒಂದು. ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಸೊಪ್ಪಿನ ಬೆಳೆಯಾಗಿ ಪ್ರಸಿದ್ದಿ ಪಡೆದಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಟಾಟಾ ಮೋಟಾರ್ಸ್

ಈದೀಗ ಟಾಟಾ ಮೋಟಾರ್ಸ್ ಲಾಂಚ್ ಮಾಡಿದೆ : ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 

ಶಂಕರ್‌ನಾಗ್ ಹುಟ್ಟಿದ ದಿನ

ಇಂದು ನಟ, ನಿರ್ದೇಶಕ ಶಂಕರ್‌ನಾಗ್ ಹುಟ್ಟಿದ ದಿನ