in

ಶೃಂಗೇರಿ ಶಾರದಾಂಬೆ : ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು

ಶೃಂಗೇರಿ
ಶೃಂಗೇರಿ

ಶೃಂಗೇರಿಯು, ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲೂಕು. ೮ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಸ್ಥಾಪಿಸಿದರು. ಶೃಂಗೇರಿಯು ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು.

ಶೃಂಗೇರಿ ಎಂಬ ಹೆಸರು, ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ ಇದು ಸಮೀಪದಲ್ಲೇ ಇರುವ ಒಂದು ಬೆಟ್ಟದ ಹೆಸರು. ಪ್ರತೀತಿಗನುಸಾರವಾಗಿ ಈ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ಇದ್ದದ್ದು. ಋಷ್ಯಶೃಂಗನ ಪ್ರಸ್ತಾಪ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ. ವಸಿಷ್ಠ ತಿಳಿಸುವ ಉಪಕಥೆಗಳಲ್ಲಿ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ.

ಶಂಕರಾಚಾರ್ಯರು ಇಲ್ಲಿ ಬಂದಾಗ, ಹಾವೊಂದು ಸುಡುವ ಬಿಸಿಲಿನಿಂದ ಗರ್ಭಿಣಿ ಕಪ್ಪೆಯನ್ನು ರಕ್ಷಿಸಲು ತನ್ನ ಹೆಡೆಯನ್ನೇ ಅಡ್ಡವಾಗಿ ಹಿಡಿದುದನ್ನು ನೋಡಿ ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ ಹಾವುಗಳು ಕಪ್ಪೆಯನ್ನು ತಿನ್ನುತ್ತವೆ. ಆದರೆ, ಶೃಂಗೇರಿಯಲ್ಲಿ ಈ ವೈಚಿತ್ರ್ಯಕ್ಕೆ ಬೆರಗಾಗಿ ಇಲ್ಲಿಯೇ ದೇವಸ್ಥಾನ ಕಟ್ಟಿಸಲು ತೀರ್ಮಾನಿಸಿದರು. ಈಗಲೂ ಕೂಡಾ ಇಲ್ಲಿ ಹಾವು ಕಪ್ಪೆಗೆ ರಕ್ಷಣೆ ನೀಡುತ್ತಿರುವ ಕಲ್ಲಿನ ಆಕೃತಿಗಳಿವೆ. ಇದನ್ನು ಕಪ್ಪೆ ಶಂಕರ ಗುಡಿ ಎನ್ನಲಾಗುತ್ತದೆ.

ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ. ಇದನ್ನು ೧೪ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹುಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. ವಿಜಯನಗರ ಕಾಲದಲ್ಲಿ ಕಟ್ಟಿಸಿದ್ದಾದರೂ ಈ ದೇವಾಲಯ ಇನ್ನೂ ಹಿಂದಿನ ಹೊಯ್ಸಳ ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ.

ಶೃಂಗೇರಿ ಶಾರದಾಂಬೆ : ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು
ವಿದ್ಯಾಶಂಕರ ದೇವಸ್ಥಾನ

ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ – ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ. ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ.
ಶೃಂಗೇರಿಯ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಎರಡು ಪ್ರಮುಖ ದೇವಾಲಯಗಳಿವೆ. ಮೊದಲನೆಯದು, ಋಷ್ಯಶೃಂಗರ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿದೆ. ಇದಕ್ಕೆ ಮಲಹಾನಿಕೇಶ್ವರ ಎಂಬ ಹೆಸರಿದ್ದು, ಈ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಎರಡನೆಯದು, ಶೃಂಗೇರಿಯಿಂದ ೧೦ ಕಿ. ಮೀ. ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ ಋಶ್ಯಶೃಂಗರ ಆತ್ಮಜ್ಯೋತಿ, ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಶೃಂಗೇರಿ ತಾಲೂಕು ಕೊಪ್ಪ, ನರಸಿಂಹರಾಜಪುರನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.

ಇದು ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ೮೯ ಕಿ. ಮೀ. ಗಳ ದೂರದಲ್ಲಿದೆ. ಬೀರೂರು ಮತ್ತು ಶಿವಮೊಗ್ಗದ ರೈಲ್ವೆ ಸ್ಥಾನಕದಿಂದ ಶೃಂಗೇರಿ ಸುಮಾರು ೯೬ ಕಿ.ಮೀ.ದೂರದಲ್ಲಿದೆ. ರಸ್ತೆಯಲ್ಲಿ ಪ್ರಯಾಣ ಮಾಡಿದರೆ, ಮಂಗಳೂರು ಇಲ್ಲಿಗೆ ೧೦೭ ಕಿ.ಮೀ. ದೂರದಲ್ಲಿದೆ. ೩೨೦ ಕಿ. ಮೀ. ದೂರದ ಬೆಂಗಳೂರಿಗೆ ಹಗಲು-ರಾತ್ರಿಗಳ ಬಸ್ ಸೌಲಭ್ಯವಿದ್ದು, ಕಾಡು, ಕಣಿವೆ, ಗಿರಿಗಳ ಮಧ್ಯೆ, ನಿಸರ್ಗದ ರುದ್ರರಮಣೀಯತೆಯನ್ನು, ಪ್ರಯಾಣಿಸುವಾಗ ನೋಡಿ ಅನುಭವಿಸಬಹುದಾಗಿದೆ.

ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಅಡಿಕೆ ಹಾಗು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಕಾಫಿ, ಬಾಳೆ, ವೆನಿಲ್ಲಾ, ವೀಳ್ಯದೆಲೆ, ಕರಿಮೆಣಸು ಮತ್ತು ಏಲಕ್ಕಿಯನ್ನು ಅಡಿಕೆಯೊಂದಿಗೆ ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.

ಶೃಂಗೇರಿ ಶಾರದಾಂಬೆ : ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು
ಆದಿ ಶಂಕರಾಚಾರ್ಯರು

ಆದಿ ಶಂಕರಾಚಾರ್ಯರು ಆಜನ್ಮ ಬ್ರಹ್ಮಚಾರಿಗಳು. ಇವರು ವಿಶ್ವರೂಪರ ಮಡದಿ ಉಭಯಭಾರತಿಯವರ ಶಾಸ್ತ್ರಸಂಪನ್ನತೆ, ಅಪ್ರತಿಮ ಪಾಂಡಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಆಕೆಯ ಪ್ರತಿಭೆಗೆ ಮೆಚ್ಚಿ ಶ್ರೀಶಂಕರಾಚಾರ್ಯರು ಉಭಯಭಾರತಿ ಅವರಿಗೆ ನ್ಯಾಯಾಧೀಶರ ಪಟ್ಟವನ್ನು ಕೊಡುತ್ತಾರೆ. ಮುಂದೆ ಉಭಯಭಾರತಿ ಅವರು ವಿರಾಗಿಣಿಯಾಗಬೇಕೆಂದಾಗ, ಶ್ರೀಶಂಕರಾಚಾರ್ಯರು “ಅಮ್ಮಾ ತಾವು ಬ್ರಹ್ಮವಿದ್ಯಾಸ್ವರೂಪಿಣಿಯೇ ಆಗಿದ್ದೀರಿ, ತಾವು ಇರುವ ಸ್ಥಳವೇ ಶಾರದಾಮಂಡಲಪ್ರಭಾವಲಯವಾಗುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಶೃಂಗೇರಿಯಲ್ಲಿ ನೀವು ನೆಲೆಸಿ, ವಿದ್ವಾಂಸರನ್ನು ಅನುಗ್ರಹಿಸಬೇಕು. ನನ್ನ ಮಾನಸ ಮತ್ತು ಧೀಃಶಕ್ತಿಯ ಅಧಿದೇವತೆಯಾಗಿ, ಸರಸ್ವತಿಯಾಗಿ, ಮಾತೃಸ್ಥಾನದಲ್ಲಿ ನೆಲೆಸಿ” ಎಂದು ನಮ್ರವಾಗಿ ಕೋರುತ್ತಾರೆ. ಅವರ ಮಾತಿನಂತೆ ಉಭಯಭಾರತಿ ಅವರು ಶೃಂಗೇರಿಯಲ್ಲಿ ನೆಲೆಸುತ್ತಾರೆ.

ಶೃಂಗೇರಿ ಪಟ್ಟಣದಲ್ಲಿ ಅನೇಕ ದೇವಾಲಯಗಳಿದ್ದು ಅವುಗಳದ್ದೇ ಆದ ಮಹತ್ವ ಹೊಂದಿರುತ್ತದೆ. ಆವುಗಳಲ್ಲಿ ಕಾಳಿಕಾಂಬ ದೇವಸ್ಥಾನ, ದುರ್ಗಾ ದೇವಸ್ಥಾನ, ಕೆರೆ ಆಂಜನೇಯ ದೇವಸ್ಥಾನ, ಕಾಲ ಭೈರವ ದೇವಸ್ಥಾನ ಇವು ೪ ದಿಕ್ ಪಾಲಕ ದೇವರುಗಳಾಗಿದ್ದು, ಇವನ್ನು ಆದಿ ಶಂಕರರು ಸ್ತಾಪಿಸಿರುತ್ತಾರೆ. ಇವಲ್ಲದೆ, ಬೆಟ್ಟದ ಮಲಹಾನಿಕೇಶ್ವರ ದೇವಾಲಯ ಋಷ್ಯಶೃಂಗ ಮುನಿಗಳ ತಂದೆ, ಚಪ್ಪರದಾಂಜನೇಯ ದೇವಾಲಯ, ವೆಂಕಟರಮಣ ದೇವಾಲಯಗಳನ್ನೂ ಸಹ ನೋಡಬಹುದಾಗಿದೆ. ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ. ಶೃಂಗೇರಿಯು ತುಂಗಾ ನದೀ ತೀರದಲ್ಲಿ ಇದೆ.

ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ. ಈ ಜಲಪಾತವು ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನದಿಂದ ಕೇವಲ ಐದು ಕಿಲೋ ಮೀಟರುಗಳ ದೂರದಲ್ಲಿದೆ.
ಮಘೇಬೈಲು ಜಲಪಾತ – ಇದು ಸಿರಿಮನೆಗೆ ಹತ್ತಿರವಿರುವ ಇನ್ನೊಂದು ಜಲಪಾತ.
ನರಸಿಂಹ ವನ – ತುಂಗಾ ನದಿಯ ಇನ್ನೊಂದು ಪಕ್ಕದಲ್ಲಿ ನರಸಿಂಹ ವನವಿದೆ. ಇಲ್ಲಿ ಜಗದ್ಗುರುಗಳ ನಿವಾಸವಿದ್ದು ಪ್ರತಿ ದಿನ ಭಕ್ತರಿಗೆ ದರ್ಶನ ಕೊಡುತ್ತಾರೆ. ಇದಲ್ಲದೆ ವೇದ ಪಾಠಶಾಲೆ, ಸಂಸ್ಕ್ರತ ಗ್ರಂಥಾಲಯವಿದೆ. ಇಲ್ಲಿಯೇ ಗೋಶಾಲೆ, ಗಜ ಶಾಲೆ ಕೂಡ ಇದೆ.
ಕುದುರೆಮುಖ – ಕುದುರೆಮುಖ ಸುಂದರ ಗಿರಿಧಾಮವಾಗಿದ್ದು, ಕರ್ನಾಟಕದ ಅತ್ಯಂತ ಸುಂದರ ಪರಿಸರ ತಾಣಗಳಲ್ಲಿ ಒಂದಾಗಿದೆ. ಚಾರಣಿಗರ ಸ್ವರ್ಗವೆನಿಸಿದೆ. ಇದು ಶೃಂಗೇರಿಯಿಂದ ೫೦ ಕಿ.ಮೀ. ದೂರದಲ್ಲಿದೆ.
ಗಂಗಾಮೂಲ – ತುಂಗಾ ಭದ್ರಾಹಾಗೂ ನೇತ್ರಾ ನದಿಗಳ ಉಗಮ ಸ್ಥಾನ.
ನರಸಿಂಹ ಪರ್ವತ – ಚಾರಣಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ.
ಹನುಮಾನ್ ಗುಂಡಿ ಜಲಪಾತ- ಇದು ಗಂಗಾಮೂಲದ ಸಮೀಪವಿದೆ. ಕೆರೆಕಟ್ಟೆಯಿಂದ ಕುದುರೆಮುಖಕ್ಕೆ ಹೋಗುವ ಮಾರ್ಗದಲ್ಲಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಾಳೆ ಜೂನ್ 22 ಭಯಂಕರ ಬುಧವಾರ 8 ರಾಶಿಯವರಿಗೆ ಜೀವನವೇ ಬದಲಾಗುತ್ತದೆ.

ನಾಳೆ ಜೂನ್ 22 ಭಯಂಕರ ಬುಧವಾರ 8 ರಾಶಿಯವರಿಗೆ ಜೀವನವೇ ಬದಲಾಗುತ್ತದೆ.

ಮಧುರೈ ನಗರ

ಮಧುರೈ ನಗರ ಈಗ ಹೀಗಿದೆ