in

ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯ
ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ ೧೪ ಕಿ.ಮೀ, ಬೆಂಗಳೂರಿನಿಂದ ೫೧ ಕಿ.ಮೀ ದೂರದಲ್ಲಿರುವ ಗ್ರಾಮ ಪಂಚಾಯತಿ ಕೇಂದ್ರವಾಗಿದೆ. ಘಾಟಿ ಸುಬ್ರಮಣ್ಯ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ.

ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರು ಗೋಚರವಾಗಿ ಸುಮಾರು 600 ವರ್ಷಗಳು ಕಳೆದಿವೆ. ಈ ಕ್ಷೇತ್ರದ ಪೂರ್ವೇತಿಹಾಸದ ರೀತಿ ವಿಳ್ಳೇದೆಲೆ ವ್ಯಾಪಾರಿಯೊಬ್ಬ ವ್ಯಾಪಾರಾರ್ಥ ಹೋಗಿ ಬರುವಾಗ ಇಲ್ಲಿ ತಂಗುತ್ತಿದ್ದನಂತೆ. ಆ ವ್ಯಾಪಾರಿಯು ಪಕ್ಕದಲ್ಲೇ ಇರುವ ಕುಮಾರತೀರ್ಥದ ಬಳಿ ಊಟ ಮಾಡಿ, ನೀರು ಕುಡಿದು, ಆಗ ಕುಮಾರ ತೀರ್ಥ ಕೇವಲ ಒಂದು ಸಣ್ಣ ದೋಣಿಯೋಪಾದಿಯಲ್ಲಿತ್ತಂತೆ, ಈಗ ಮೂಲಸ್ವಾಮಿ ಇರುವ ಬಲಭಾಗದಲ್ಲಿ ಏಳು ಹೆಡೆಗಳು ಉದ್ಭವಿಸಿರುವ ಶಿಲೆಯ ಮೇಲೆಯೇ ಮಲಗುತ್ತಿದ್ದನಂತೆ.
ಒಮ್ಮೆ ಆತ ಮಲಗಿದ್ದಾಗ ‘ನೆರಳಾಗಿರುವ ಮರದಡಿಯ ಈ ಶಿಲೆಯ ಮೇಲೆ ಭಾರವಾಗಿ ಏಕೆ ಮಲಗಿರುವೆ ಏಳು ಏಳು’ ಎಂಬ ಮಾತುಗಳು ಕೇಳಿತಂತೆ. ಇದು ಹಲವು ಬಾರಿ ಪುನರಾವರ್ತನೆಯಾಯಿತು. ಆಗ ಆತ ಇದು ಯಾವುದೋ ದುಷ್ಟಶಕ್ತಿಯ ಕೀಟಲೆ ಇರಬೇಕು ಎಂದುಕೊಂಡು ಸುಮ್ಮನಾದನಂತೆ.

ಒಂದು ಹಬ್ಬದ ದಿನ ಎಲೆ ಮಾರಿ ಆಯಾಸಗೊಂಡು ಆತ ಅದೇ ಶಿಲೆಯ ಮೇಲೆ ಮಲಗಿದ್ದಾಗ, ಸ್ವಾಮಿಯು ಕನಸಿನಲ್ಲಿ ವ್ಯಾಪಾರಿಗೆ ತನ್ನ ನಿಜ ಸ್ವರೂಪದಲ್ಲಿ ದರ್ಶನ ನೀಡಿ, ತಾನು ಈ ಶಿಲೆಗೆ 20 ಗಜಾಂತರದಲ್ಲಿ ಇರುವುದಾಗಿಯೂ ಈ ವಿಷಯವನ್ನು ತನ್ನ ಭಕ್ತರಾದ ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹಾರಾಜರಿಗೆ ಈ ವಿಷಯ ತಿಳಿಸು, ಅವರು ಇಲ್ಲಿ ಗುಡಿಗೋಪುರ ಕಟ್ಟಿಸುತ್ತಾರೆ’ ಎಂಬುದಾಗಿ ತಿಳಿಸಿತು.
ನಿನಗೆ ನಾನು ಜೀವನಾಂತ್ಯದಲ್ಲಿ ಮುಕ್ತ ನೀಡುವೆನು ಎಂದು ಆಣತಿ ನೀಡಿ, ಅದೃಶ್ಯನಾದನಂತೆ. ಈ ಸ್ವಪ್ನ ದಿಂದ ಎಚ್ಚೆತ್ತ ವ್ಯಾಪಾರಿ ಎದುರು ಒಬ್ಬ ಬ್ರಾಹ್ಮಣನನ್ನು ಕಂಡು, ಎಲ್ಲ ವೃತ್ತಾಂತವನ್ನೂ ಆ ಬ್ರಾಹ್ಮಣನಿಗೆ ತಿಳಿಸಿದನಂತೆ. ಬ್ರಾಹ್ಮಣ ಆ ಶಿಲೆಯ ಬಳಿ ಬಂದಾಗ, ಸ್ವಾಮಿಯು ಕ್ಷಣ ಮಾತ್ರ ಸರ್ಪ ರೂಪದಲ್ಲಿ ಬ್ರಾಹ್ಮಣನಿಗೂ ದರ್ಶನ ನೀಡಿ ಅಂತರ್ಧಾನನಾದನು.
ಆಗ ಬ್ರಾಹ್ಮಣ ಮತ್ತು ವ್ಯಾಪಾರಿ ಇಬ್ಬರೂ ಕೂಡಿ ಸಂಡೂರಿಗೆ ಹೋಗಿ ರಾಜರ ದರ್ಶನ ಮಾಡಿ ತಮ್ಮ ಸ್ವಪ್ನದ ವೃತ್ತಾಂತ ತಿಳಿಸಿದರಂತೆ. ಆದರೆ, ರಾಜನು ತನಗೆ ಹಲವು ರಾಜಕಾರ್ಯಗಳಿದ್ದು, ತತ್‌ಕ್ಷಣವೇ ಅಲ್ಲಿಗೆ ಬರಲಾಗುವುದಿಲ್ಲವೆಂದೂ, ಅಗತ್ಯವಿದ್ದರೆ ಧನಕನಕ ಸಹಾಯ ಮಾಡುವುದಾಗಿಯೂ, ನೀವೇ ದೇಗುಲ ಕಟ್ಟಿ ಎಂದು ಹೇಳಿದನಂತೆ.

ಘಾಟಿ ಸುಬ್ರಹ್ಮಣ್ಯ
ಘಾಟಿ ಸುಬ್ರಹ್ಮಣ್ಯ ಕ್ಷೇತ್ರ

ಇದರಿಂದ ನೊಂದ ವರ್ತಕ ಮತ್ತು ಬ್ರಾಹ್ಮಣನು, ಮಹಾಸ್ವಾಮಿ ಆ ಭಗವಂತನ ಆಣತಿಯನ್ನು ನಿಮಗೆ ತಿಳಿಸಿದ್ದೇವೆ. ನಮಗೆ ಹೊರಡಲು ಅಪ್ಪಣೆ ಕೊಡಿ ಎಂದು ಹೇಳಿ ಹೊರಟರಂತೆ. ಅಷ್ಟು ದೂರ ಪ್ರಯಾಣ ಮಾಡಿದ್ದ ಆ ಇಬ್ಬರೂ ಅದೇ ಊರಿನ ಬ್ರಾಹ್ಮಣನ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಲೂ ನಿರ್ಧರಿಸಿದರಂತೆ. ಅದೇ ದಿನ ರಾತ್ರಿ, ರಾಜನ ಸ್ವಪ್ನದಲ್ಲಿ ಉಗ್ರವಾಗಿ ಕಾಣಿಸಿಕೊಂಡ ಸ್ವಾಮಿ, ತನ್ನ ಆಜ್ಞೆಯನ್ನು ತಿರಸ್ಕರಿಸಿದ ರಾಜನ ಮೇಲೆ ವ್ಯಗ್ರನಾದನಂತೆ.

ನೀನು ನನ್ನ ಆಣತಿ ತಿರಸ್ಕರಿಸಿರುವ ಫಲವಾಗಿ, ನಿನ್ನ ಖಜಾನೆ ಬರಿದಾಗಿ, ನಿನ್ನ ಪುತ್ರ, ಪೌತ್ರ ಕಳತ್ರಾದಿಗಳಿಗೆ ಕಷ್ಟ ಬರಲಿದೆ ಎಂದು ಎಚ್ಚರಿಸಿದನಂತೆ. ಕೂಡಲೇ ನಿದ್ದೆಯಿಂದೆದ್ದ ರಾಜನು ತನ್ನ ತಪ್ಪಿಗೆ ದೇವರ ಕ್ಷಮೆ ಕೋರಿ, ಆ ವರ್ತಕ ಮತ್ತು ಬ್ರಾಹ್ಮಣನನ್ನು ಹುಡುಕಿ ಕರೆಸಿ ಅವರೊಂದಿಗೇ ಘಾಟಿಯತ್ತ ಪ್ರಯಾಣ ಬೆಳೆಸಿದನಂತೆ.
ಆ ಕ್ಷೇತ್ರಕ್ಕೆ ಬಂದು ಮೂಲ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಆಣತಿಯಂತೆ ಗುಡಿ ಗೋಪುರ ಕಟ್ಟಿಸಿ, ಆ ಬ್ರಾಹ್ಮಣನನ್ನೇ ಪೂಜೆಗೆ ನೇಮಿಸಿದರಂತೆ. ಪೂಜಾದಿಗಳಿಗೆ ಭೂಮಿಯನ್ನು ದಾನವಾಗಿ ನೀಡಿದರಂತೆ. ಇಂದೂ ಅದೇ ಅರ್ಚಕರ ವಂಶಸ್ಥರು ಇಲ್ಲಿ ಪೂಜೆ ಮುಂದುವರಿಸಿ ಕೊಂಡು ಬಂದಿದ್ದಾರೆ. ಈ ಸ್ಥಳದಲ್ಲಿ ಮಹಾರಾಜರಿಗೆ ಹುತ್ತದಲ್ಲಿ ದೊರೆತ ಲಕ್ಷ್ಮೀನರಸಿಂಹ ಸಮೇತ ಸ್ವಾಮಿಯು ನೆಲೆಸಿದ್ದಾನೆ.
ಪೂರ್ವಾಭಿಮುಖನಾದ ಏಳು ಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ನೆರವಿನಿಂದ ದರ್ಶಿಸಬಹುದಾಗಿದೆ. ಇಲ್ಲಿ ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಬ್ರಹ್ಮ ರಥೋತ್ಸವ ಜರುಗುತ್ತದೆ. ಅನ್ನದಾನವೂ ನಡೆಯುತ್ತದೆ. ಪ್ರತಿನಿತ್ಯ ಮೂರು ಕಾಲ ದೀಪಾರಾಧನೆ ಮೊದಲಾದ ಕೈಂಕರ್ಯಗಳು ನಡೆಯುತ್ತವೆ. ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಘಾಟಿಯ ದನಗಳ ಜಾತ್ರೆಯೂ ಬಹು ವಿಖ್ಯಾತವಾದುದು.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ಸಂಡೂರಿನ ಘೋರ್ಪಡೆ ವಂಶದ ಅರಸರು 1600ರಲ್ಲಿ ಶ್ರೀ ಸ್ವಾಮಿಯವರಿಗೆ ದೇವಾಲಯವನ್ನು ನಿರ್ಮಿಸಿದರು. ಇದು ಪುರಾತನವಾದ ದೇವಾಲಯವಾಗಿದೆ. ಶ್ರೀ ಸ್ವಾಮಿಯವರಿಗೆ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1900ರಲ್ಲಿ ದೇವಾಲಯದ ಮುಂಭಾಗ ಮುಖದ್ವಾರ(ರಾಜದ್ವಾರ) ವನ್ನು ನಿರ್ಮಿಸಿಕೊಟ್ಟಿದ್ದಾರೆ.

600 ವರ್ಷಗಳ ಇತಿಹಾಸವಿರುವ ಮಾಕಳಿದುರ್ಗವು ಘಾಟಿಸುಬ್ರಹ್ಮಣ್ಯಕ್ಕೆ ಸಮೀಪದಲ್ಲಿದೆ. ಮಾಕಳಿದುರ್ಗದಲ್ಲಿ ಸುಮಾರು ಕೆಂಪೇಗೌಡರಿಂದ ನಿರ್ಮಿತವಾಗಿ ನಂತರ ಸಂಡೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಇಂದಿಗೂ ಮಾಕಳಿದುರ್ಗ ಬೆಟ್ಟದ ಮೇಲೆ ಪುರಾತನ ಕೋಟೆ ಇದೆ ಕೋಟೆಯ ಒಳಗೆ ಮಲ್ಲೇಶ್ವರ ಸ್ವಾಮಿಯ ದೇವಾಲಯ ಇದೆ.

ಘಾಟಿ ಸುಬ್ರಹ್ಮಣ್ಯ
ಮಾಕಳಿದುರ್ಗ ಬೆಟ್ಟ

ಕುಮಾರಧಾರ ಪುಷ್ಕರಣಿಯು ಘೋರ್ಪಡೆ ಅರಸರು ನಿರ್ಮಿಸಿದ್ದಾರೆ. ಶ್ರೀ ಕ್ಷೇತ್ರದ ಮಹಿಮೆಯ ಸ್ಥಳವಾಗಿಯು ಪುಣ್ಯಜಲವಾಗಿಯು ಕುಮಾರ ಧಾರ ಪುಷ್ಕರಣಿಯನ್ನು ಭಕ್ತಾಧಿಗಳು ಕಾಣುತ್ತಾ. ಇದರಲ್ಲಿ ಶ್ರೀ ಸ್ವಾಮಿಯವರು ಸ್ನಾನವನ್ನು ಆಚರಿಸುತ್ತಾರೆ ಎಂದು ನಂಬಿಕೆ ಇದೆ. ಆದ್ದರಿಂದ ಇಲ್ಲಿನ ಜಲದಿಂದ ಸ್ನಾನ ಮಾಡಿದರೆ ಚರ್ಮರೋಗವು ನಿವಾರಣೆಯಾಗುತ್ತದೆ ಎಂದು ಸಾವಿರಾರು ಭಕ್ತಾಧಿಗಳು ಹೇಳುತ್ತಾರೆ.

ಘಾಟಿ ಸುಬ್ರಹ್ಮಣ್ಯದಲ್ಲಿರುವ ಈ ಬನ್ನಿ ಮಂಟಪಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ. ಈ ಮಂಟಪದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ವಿಜಯದಶಮಿಯಂದು ಉಯ್ಯಾಲೆ ಸೇವೆ ಹಾಗೂ ಭಜಂತ್ರಿ ಸೇವೆಗಳು ನಡೆದುಕೊಂದು ಬಂದಿದೆ. ಇದನ್ನು ಘೋರ್ಪಡೆ ವಂಶಸ್ಥರು ಕಟ್ಟಿಸಿರುತ್ತಾರೆ. ಇದನ್ನು ಸಾಧು ಮಂಟಪ ಎಂದು ಕರೆಯುವುದುಂಟು. ಈ ಮಂಟಪವು ದೇವಾಲಯದ ಮುಂಭಾಗ ಪೂರ್ವಕ್ಕೆ ಇದ್ದು ದೇವಾಲಯದ ಮುಂಭಾಗಕ್ಕೆ ಗೊಚರಿಸುತ್ತದೆ.

ವರ್ತಕರುಗಳಾದ ಅಯೋಧ್ಯಾನಗರದ ಶಿವಾಚಾರ ವೈಶ್ಯನಗರ್ತ ಜನಾಂಗದವರು ಶ್ರೀ ಕ್ಷೇತ್ರದಲ್ಲಿ ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು 1850ರಲ್ಲಿ ಅರವಂಟಿಕೆ ಕೇಂದ್ರವನ್ನು ತೆರೆದರು ನಂತರ 1914ರಲ್ಲಿ ಧರ್ಮಛತ್ರವಾಗಿ ಮಾರ್ಪಡಿಸಿ ಆರ್ಯವೈಶ್ಯ ಧರ್ಮಛತ್ರ ಸ್ಥಾಪಿಸಿದರು.

ಬೆಂಗಳೂರಿನ ಮಲ್ಲೇಶ್ವರಂನ ವ್ಯಾಪಾರಿಗಳಾದ ಅಂಗಡಿ ಪಾಪಯ್ಯನವರು ಘಾಟಿ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳು ತಂಗಲು ಹಾಗೂ ಅನ್ನದಾನ ಸೇವೆ ಮಾಡಲು 1932ರಲ್ಲಿ ಧರ್ಮಛತ್ರವನ್ನು ಕಟ್ಟಿಸಿದರು.

ವಿಶ್ವೇಶ್ವರಯ್ಯ ಜಲಾಶಯ ಘಾಟಿ ಸುಬ್ರಮಣ್ಯ ಬಳಿ ಇದೆ. ಘಾಟಿ ಸುಬ್ರಹ್ಮಣ್ಯ ಸುಂದರ ಪ್ರಕೃತಿ ಸೌಂದರ್ಯದ ನಡುವೆ ವ್ಯರ್ಥವಾಗಿ ಹರಿದು ಹೊಗುತ್ತಿದ್ದ ನೀರನ್ನು ಕಂಡ ಸರ್.ಎಂ.ವಿಶ್ವೇಶ್ವರಯ್ಯನವರು ೧೯೧೭ರಲ್ಲಿ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಅನ್ನು ನಿರ್ಮಿಸಿದರು.

ಬಂಡಿಹಳ್ಳ ಜಲಾಶಯವು ಘಾಟಿ ಸುಬ್ರಮಣ್ಯ ಮತ್ತು ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ , ಘಾಟಿ ಸುಬ್ರಹ್ಮಣ್ಯಕ್ಕೆ ೩ಕೀ.ಮಿ ದೂರದಲ್ಲಿ ಇದೆ ಇದನ್ನು ಸುಮಾರು ೧೦೦ ವರ್ಷಗಳ ಹಿಂದೆ ನಿರ್ಮಿಸಲಾಯಿತು. ಇದೆ ಜಲಾನಯನ ಪ್ರದೇಶವು ಸುಮಾರು ೧೫೦೦ ಹೇಕ್ಟೆರ್ ಪ್ರದೇಶಗಳಿಗೆ ನೀರು ಅಣಿಸಬಲ್ಲದು. ಬಂಡಿಹಳ್ಳ ಜಲಾಶಯ ಜಲಾನಯನ ಪ್ರದೇಶ ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಹೋಬಳಿಯ ಸೂಮಾರು ೫೦ ಹಳ್ಳಿಗಳಿಗೆ ಇದೆ ಆಧಾರ. ಇದು ಉತ್ತರ ಪಿನಾಕಿನಿಯ ಉಪನದಿಯಾಗಿದ್ದು ಸುಮಾರು ೫೦ ಕೀ.ಮಿ ಕ್ರಮಿಸಿ ಗೌರಿಬಿದನೂರಿನ ಸಮೀಪ ಉತ್ತರ ಪಿನಾಕಿನಿಗೆ ಸೇರುತ್ತದೆ. ಈಗ ಈ ನದಿಗೆ ಘಾಟಿ ಸುಬ್ರಹ್ಮಣ್ಯದ ಬಳಿ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಹಾಗೂ ಗೂಂಜುರು ಬಳಿ ೫೦೦ ಹೇಕ್ಟೆರ್ ಪ್ರದೇಶದಲ್ಲಿ ಕೆರೆಯನ್ನು ನಿರ್ಮಿಸಲಾಗಿದೆ. ಆದ ಕಾರಣ ಬಂಡಿಹಳ್ಳ ನದಿಯ ಜಾಡು ನಶಿಸಿಹೋಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ

ಚ್ಯವನ ಋಷಿ

ಚ್ಯವನ ಋಷಿ