in

ಪಾರ್ವತಿ ಪುತ್ರ ಗಣೇಶ

ಪಾರ್ವತಿ ಪುತ್ರ ಗಣೇಶ
ಪಾರ್ವತಿ ಪುತ್ರ ಗಣೇಶ

ಯಾವುದೇ ಶುಭಕಾರ್ಯ ನಡೆಯುವ ಸಂದರ್ಭದಲ್ಲಿ ಮೊದಲ ಪೂಜೆ ಗಣೇಶನಿಗೆ. ಯಾಕೆಂದರೆ ನಡೆಯುವ ಶುಭ ಕಾರ್ಯಗಳಿಗೆ ಯಾವುದೇ ವಿಘ್ನ ಬರಬಾರದು ಎಂದು, ಅದಕ್ಕಾಗಿ ಗಣೇಶನನ್ನು ವಿಘ್ನವಿನಾಶಕಾರಕ ಎಂದು ಕರೆಯುವುದು.ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.ಗಣೇಶ ಬುದ್ಧಿವಂತಿಕೆ, ಜ್ಞಾನ, ಹೊಸ ಆರಂಭಗಳ ದೇವತೆ, ವಿಘ್ನ ವಿನಾಶಕ.

ಆನೆಯ ಸೊಂಡಿಲು ಗಣೇಶ

ಪಾರ್ವತಿ ಪುತ್ರ ಗಣೇಶ
ಗಣೇಶ

ಮೊದಲು ಪಾರ್ವತಿದೇವಿ ಗಣೇಶನ ಮಾಡಿದಾಗ ಸಾಮಾನ್ಯ ಬಾಲಕರ ರೀತಿಯೇ ಮುಖ ಇತ್ತು. ಆಮೇಲೆ ಗಣಪನಿಗೆ ಆನೆಯ ಮುಖ ಬಂತು ಅನ್ನುವುದು ನಮ್ಮ ಪುರಾಣದ ಕಥೆ. ಪುರಾಣಗಳ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಕೇವಲ ಪಾರ್ವತಿಯ ಮುದ್ದುಮಗನೆನ್ನುವುದೇ ಹೆಚ್ಚು ಸಮರ್ಪಕವೆನಿಸುತ್ತದೆ. ಏಕೆಂದರೆ ಅವಳ ಸ್ನಾನ ಚೂರ್ಣದಿಂದ ಈತ ಮೈದಾಳಿ, ಅವಳ ಸ್ನಾನಜಲದೊಂದಿಗೆ ಗಂಗಾಮುಖವನ್ನು ಸೇರಿ. ಅಲ್ಲಿ ಗಜಮುಖಳಾದ ಮಾಲಿನಿಯೆಂಬ ದೇವತೆಯ ಗರ್ಭವನ್ನು ಸೇರಿ ಚತುರ್ಭುಜ ಮತ್ತು ಪಂಚಗಜಮುಖಗಳಿಂದ ಜನಿಸಿದನಂತೆ.
ಗಂಗೆ ಅವನನ್ನು ತನ್ನ ಸುತನೆಂದರೂ ಶಿವ ಅವನನ್ನು ಪಾರ್ವತೀಸುತನೆಂದೂ ತೀರ್ಮಾನಿಸಿ ಅವನನ್ನು ಏಕಮುಖನನ್ನಾಗಿ ಮಾಡಿದನಂತೆ. ಅಂಜನಗಿರಿಯಲ್ಲಿ ಅವನನ್ನು ವಿಘ್ನವಿನಾಶಕ ದೇವನೆಂದು ಈಶ್ವರ ಪಟ್ಟಗಟ್ಟಿದನಂತೆ. ಈ ವಿವರಗಳು ಕಾಶ್ಮೀರಕವಿಯಾದ ಜಯರಥನ ಹರಚರಿತ ಚಿಂತಾಮಣಿಯಲ್ಲಿ (13ನೆಯ ಶತಮಾನ) ದೊರೆಯುತ್ತದೆ. ಬ್ರಹ್ಮವೈವರ್ತ ಪುರಾಣದಲ್ಲಿ ಗಣೇಶನ ಜನ್ಮವೃತ್ತಾಂತ ವಿಸ್ತಾರವಾಗಿ ಬಂದಿದೆ.
ಅಲ್ಲಿಯ ಕಥೆ ಬೇರೆ ರೀತಿಯಾಗಿದೆ. ಪಾರ್ವತಿ ತನ್ನ ಕಂದನನ್ನು ತೋರಿಸಲು ಎಲ್ಲರೊಂದಿಗೆ ಶನಿಯನ್ನೂ ಕರೆಸಿದ್ದಳಂತೆ. ಶನಿಯ ವಕ್ರದೃಷ್ಟಿ ಬಿದ್ದೊಡನೆ ಗಣಪತಿಯ ತಲೆ ಬಿದ್ದು ಹೋಯಿತಂತೆ. ಆಮೇಲೆ ವಿಷ್ಣು ಅವನಿಗೆ ಆನೆಯ ತಲೆಯನ್ನು ತಂದು ಆಂಟಿಸಿದನಂತೆ. ಗಣೇಶನಿಗೆ ಇರುವುದು ಒಂದೇ ದಂತ. ಇನ್ನೊಂದು ದಂತ ಕಳೆದುದು ಹೇಗೆನ್ನಲು ಬೇರೆ ಬೇರೆ ಕಥೆಗಳಿವೆ.
ಅದನ್ನು ರಾವಣ ಮುರಿದನೆಂದು ಮಾಘಕವಿ (ಶಿಶುಪಾಲವಧ) ಹೇಳಿದರೆ, ಪರಶುರಾಮನೊಡನೆ ಯುದ್ಧದಲ್ಲಿ ಅದು ಮುರಿಯಿತೆಂದು ಬ್ರಹ್ಮವೈವರ್ತಪುರಾಣ ತಿಳಿಸುತ್ತದೆ. ಯಾರು ಜಗವನ್ನೆಲ್ಲ ಬೇಗ ಪ್ರದಕ್ಷಿಣೆ ಮಾಡುವರೆಂದು ಗಣೇಶನಿಗೂ ಕುಮಾರಸ್ವಾಮಿಗೂ ಸ್ಪರ್ಧೆ ಬಂದ ಕಾಲದಲ್ಲಿ ದಂತ ಮುರಿಯಿತೆಂದು ಹರಚರಿತಚಿಂತಾಮಣಿಯಲ್ಲಿ ಹೇಳಲಾಗಿದೆ.
ಶಿವ ಪುರಾಣದ ಪ್ರಕಾರ ಶಿವನೇ ಪಾರ್ವತಿಯ ಸ್ನಾನಗೃಹದ ಬಾಗಿಲಲ್ಲಿ ಕಾವಲಿದ್ದ ಗಣೇಶನ ತಲೆಯನ್ನು ಕಡಿದು ಅದಕ್ಕೆ ಬದಲಾಗಿ ಆನೆಯ ತಲೆಯನ್ನು ಜೋಡಿಸಿದನೆನ್ನಲಾಗಿದೆ. ಗಣಪತಿಗೆ ಮದುವೆಯೇ ಇಲ್ಲವೆನ್ನುವ ಕೆಲವು ಪುರಾಣಗಳಿದ್ದರೆ, ಅವನಿಗೆ ಸಿದ್ಧಿ, ಬುದ್ಧಿ ಎಂಬ ಇಬ್ಬರು ಹೆಂಡಿರನ್ನು ಹೇಳುವ ಪುರಾಣಗಳುಂಟು. ಸಿದ್ಧಿಯಲ್ಲಿ ಹುಟ್ಟಿದ ಕ್ಷೇಮ ಮತ್ತು ಬುದ್ಧಿಯಲ್ಲಿ ಹುಟ್ಟಿದ ಲಾಭ ಎಂಬ ಮಕ್ಕಳನ್ನು ಹೇಳುವ ಪುರಾಣಗಳೂ ಉಂಟು.
ಗಣೇಶನನ್ನು ಕನ್ನಡದಲ್ಲಿ, ಮಲೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ವಿನಾಯಕ ಎಂದೂ, ತಮಿಳು ಭಾಷೆಯಲ್ಲಿ ವಿನಾಯಗರ್, ಪಿಳ್ಳೈಯ್ಯಾರ್ ಎಂದೂ , ತೆಲುಗಿನಲ್ಲಿ ವಿನಾಯಕುಡು ಎಂದು ಕರೆಯಲಾಗುತ್ತದೆ. ಗಣೇಶನನ್ನು ವಿದ್ಯಾಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಗಣೇಶನ ಹೆಸರಿನೊಡನೆ “ಶ್ರೀ” ಎಂಬ ಅಕ್ಷರದೊಂದಿಗೆ ಸಂಬೋಧಿಸಲಾಗುತ್ತದೆ. ಗಣೇಶನ ಭಕ್ತರನ್ನು ಗಾಣಪತ್ಯರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಭಾರತದ ಅನೇಕ ನಗರಗಳಲ್ಲಿ, ವಿಶೇಷವಾಗಿ ಮುಂಬಯಿಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶಿವ, ವಿಷ್ಣು ಮುಂತಾದ ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪುಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ. ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ-ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪೂಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ; ಮಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲು.
ಗಣಪತಿಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಕವಾಹನ ಮುಂತಾದ ಹೆಸರುಗಳೂ ಇವೆ. ಈ ಒಂದೊಂದು ಹೆಸರೂ ಗಣಪತಿಯ ಒಂದೊಂದು ಗುಣಲಕ್ಷಣವನ್ನು ಸೂಚಿಸುತ್ತದೆ. ಕರ್ನಾಟಕವಷ್ಟೇ ಅಲ್ಲ, ಭಾರತದಲ್ಲೆಲ್ಲ ಊರ ಕೋಟೆಗಳಲ್ಲಿ, ಗಣಪತಿಯ ಮೂರ್ತಿಯನ್ನು ಇಂದೂ ನೋಡಬಹುದು.
ಎಲ್ಲ ದೇವಾಲಯಗಳಲ್ಲೂ ಶಿವನ ಪರಿವಾರವರ್ಗದಲ್ಲಿ ಗಣಪತಿಯ ಮೂರ್ತಿಯಿದ್ದೇ ಇರುತ್ತದೆ. ಗಣಪತಿ ವಿಶಿಷ್ಟ ಜಾತಿಗಳ ದೇವತೆಯೆನಿಸದೆ ಹಿಂದೂ ಧರ್ಮವನ್ನು ನಂಬುವ ಎಲ್ಲ ಜಾತಿಪಂಥಗಳೂ ಸಮಾನವಾಗಿ ಪೂಜಿಸುವ ದೇವತೆಯಾಗಿ ಈಗಲೂ ಮಹಿಮೆ ಪಡೆದಿದ್ದಾನೆ.

ಪಾರ್ವತಿ ಪುತ್ರ ಗಣೇಶ

ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ.
ಆನೆಯ ತಲೆ ನಂಬಿಕೆ, ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ;
ಗಣೇಶನಿಗೆ ಒಂದು ದಂತ ಇರುವುದು,ಇನ್ನೊಂದು ತುಂಡಾಗಿರುವುದು,ಎಲ್ಲ ದ್ವಂದ್ವಗಳನ್ನೂ ಮೀರಿ ನಿಲ್ಲುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ .
ಅಗಲವಾದ ಕಿವಿಗಳು ವಿವೇಕ,ನೆರವು ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುವುದಲ್ಲದೆ, ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಪ್ರಕಟಿಸುತ್ತದೆ.ಚಿಂತನೆಗಳನ್ನು ಅರ್ಥೈಸಿಕೊಳ್ಳಲು ಕೇಳಿಸಿ ಕೊಳ್ಳಬೇಕಾದುದರ ಪ್ರಾಮುಖ್ಯತೆಯನ್ನು ಅವು ಸೂಚಿಸುತ್ತವೆ.ಜ್ಞಾನವನ್ನು ಸಂಪಾದಿಸಲು ಕಿವಿಗಳು ಉಪಯೋಗಿಯಾಗಿವೆ.ಅಗಲವಾದ ಕಿವಿಗಳು “ಯಾವಾಗ ದೇವರು ಅರಿವಿಗೆ ಬರುವನೋ, ಆಗಲೇ ಎಲ್ಲಾ ಜ್ಞಾನವೂ ಅರಿವಾದಂತೆಯೇ” ಎಂಬುದನ್ನು ಸೂಚಿಸುತ್ತವೆ;
ವಕ್ರವಾದ ಸೊಂಡಿಲು ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಲ್ಲಿ ತಾನಾಗಿಯೇ ವಿವೇಚನಾಶಕ್ತಿಯ ರೂಪದಲ್ಲಿ ಪ್ರಕಟವಾಗುವ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ;
ಹಣೆಯ ಮೇಲೆ ಚಿತ್ರಿತವಾದ ತ್ರಿಶೂಲವು ಕಾಲವನ್ನು ಸಂಕೇತಿಸುವುದಲ್ಲದೆ(ಭೂತ, ವರ್ತಮಾನ ಮತ್ತು ಭವಿಷ್ಯತ್) ಅದರ ಮೇಲೆ ಗಣೇಶನ ಪ್ರಭುತ್ವವನ್ನು ಸೂಚಿಸುತ್ತದೆ.
ಗಣೇಶನ ದೊಡ್ಡ ಹೊಟ್ಟೆ ಯಲ್ಲಿ ಅಸಂಖ್ಯಾತವಾದ ಲೋಕಗಳು ಅಡಗಿವೆ.ಅದು ಪ್ರಕೃತಿಯ ಔದಾರ್ಯ ಹಾಗೂ ಸ್ಥೈರ್ಯವನ್ನು ಸಂಕೇತಿಸುವುದಲ್ಲದೆ,ಪ್ರಪಂಚದ ದುಃಖ,ಕ್ಲೇಶಗಳೆಲ್ಲವನ್ನೂ ನುಂಗಿ ಜಗತ್ತನ್ನು ರಕ್ಷಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ;
ಗಣೇಶನು ಕಾಲುಗಳನ್ನು ಇಟ್ಟಿರುವ ರೀತಿ, (ಒಂದು ನೆಲದ ಮೇಲೆ, ಇನ್ನೊಂದು ಎತ್ತಿರುವ ರೀತಿ) ಇಹ ಮತ್ತು ಪರಲೋಕಗಳಲ್ಲಿ ಬಾಳುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಲೋಕದಲ್ಲಿಲ್ಲದೆಯೇ ಲೋಕದಲ್ಲಿ ಬಾಳುವ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ.

ಗಣೇಶನನ್ನು “ಓಂಕಾರ” ಎಂದು ಕರೆಯಲಾಗುತ್ತದೆ. ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತಿದೆ. ಈ ಕಾರಣದಿಂದ ಗಣೇಶನನ್ನು ಇಡೀ ವಿಶ್ವದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೂಲದಲ್ಲಿರುವ ಕಾರಣ ವಿಶ್ವಾಧಾರ,ಜಗದೋದ್ಧಾರ ಎಂದೂ ಕರೆಯಲಾಗುತ್ತದೆ.

ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತವೆಂದು ತಿಳಿಯಲಾಗಿದೆ. ಒಂದು ವಿವರಣೆಯ ಪ್ರಕಾರ,ಗಣೇಶನ ದೈವಿಕ ವಾಹನ,ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ತನ್ನ ಮನದಿಂದ ಗಣೇಶ ಉದಿಸಿದ ಈತ ಪ್ರಥಮ ಪೂಜಿತನೆಂದು ಶಿವ ನಿರ್ಧರಿಸಿದ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ ಇತರ ದೇವರನ್ನು ಪೂಜಿಸುವುದ ರಿಂದ ಫಲದೊರಕದು ಎಂದೂ ಆತ ಸಂಕಲ್ಪಿಸಿದ. ಇದಾದ ನಂತರ, ಒಮ್ಮೆ ಶಿವನು ತ್ರಿಪುರ ಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಹೊರಟ. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮವನ್ನು ಮರೆತುಬಿಟ್ಟ.
ಯುದ್ದದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವ ತಲುಪಿದ. ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಅಷ್ಟರಲ್ಲಿ ಶಿವನಿಗೆ ತಾನು ಹೊರಡುವ ಮೊದಲು ಗಣೇಶನಿಗೆ ಪೂಜೆಸಲ್ಲಿಸಲು ಮರೆತಿರುವುದು ನೆನಪಾಯಿತು. ಈ ಕಷ್ಟಕ್ಕೆ ಅದೇ ಕಾರಣ ಎಂದು ತಿಳಿದನು. ನಂತರ, ಮಗನನ್ನು ಪೂಜಿಸಿದ ಮತ್ತು ಯಶಸ್ವಿಯಾಗಿ ತ್ರಿಪುರಾಂತಕ ಯುದ್ಧವನ್ನು ಯಶಸ್ವಿಯಾಗಿ ಜಯಿಸಿದನು.

ಒಂದು ದಿನ ಕೈಲಾಸ ವಾಸನಾದ ಶಿವ ಮತ್ತು ಮಡದಿ ಪಾರ್ವತಿ ತಮ್ಮಿಬ್ಬರು ಪುತ್ರರಾದ ಗಣೇಶ ಮತ್ತು ಸುಬ್ರಹ್ಮಮಣ್ಯರೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದರು. ಶಿವ-ಪಾರ್ವತಿಯರು ತಮ್ಮಿಬ್ಬರು ಪುತ್ರರಿಗೆ ಎರಡು ಸುಂದರ ಹಣ್ಣನ್ನು ನೀಡಿದ್ದರು. ಇಬ್ಬರಿಗೂ ಅವೆರಡೂ ತಮಗೇ ಸೇರಬೇಕೆಂಬ ಆಸೆಯಿತ್ತು. ಆ ಹಣ್ಣಿನಲ್ಲಿ ವಿಶೇಷವಾದ ಜ್ಞಾನ ಮತ್ತು ಎಂದಿಗೂ ಅಳಿಯದ ವಿಶೇಷತೆಯೊಂದು ಅಡಕವಾಗಿರುವುದೆಂದು ಜನುಮದಾತರು ತಿಳಿಸಿದ್ದರು.
ಆ ಹಣ್ಣನ್ನು ಪಡೆಯಲು ಇಬ್ಬರೂ ಸ್ಫರ್ಧಿಸಬೇಕಾಗಿತ್ತು ಮತ್ತು ಯಾರು ಅದರಲ್ಲಿ ಗೆಲ್ಲುತ್ತಾರೋ ಅವರು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕಾಗಿತ್ತು. ಕೊನೆಗೂ ಸ್ಫರ್ಧೆಯಲ್ಲಿ ಕಾರ್ತಿಕೇಯನೇ ಮೊದಲಿಗನಾಗಿ ಲೋಕ ಸುತ್ತಲು ತನ್ನ ವಾಹನವಾದ ನವಿಲನ್ನೇರಿ ಹೊರಟ. ಆಕಾಶದಲ್ಲಿ ಹಾರಾಡುತ್ತಾ ಪವಿತ್ರವೂ ಪಾವನಪೂಜ್ಯವೂ ಆದ ಸ್ಥಳಗಳಲ್ಲಿ ನಿಂದು ದೇವದೇವೋತ್ತಮರನ್ನೆಲ್ಲಾ ಪೂಜಿಸುತ್ತಾ ಮುಂದೆ ಸಾಗುತ್ತಿದ್ದ.
ಆದರೆ ಗಣೇಶನಿಗೆ ತನ್ನ ದೇಹದ್ದೇ ಚಿಂತೆಯಾಗಿತ್ತು. ತನ್ನ ಡೊಳ್ಳು ಹೊಟ್ಟೆಯನ್ನೆತ್ತಿಕೊಂಡು ನಿಧಾನವಾಗಿ ಸಾಗಿದರೆ ಯಾವುದೇ ರೀತಿಯಲ್ಲೂ ತಾನು ಕಾರ್ತಿಕೇಯನನ್ನು ಹಿಂದಿಕ್ಕಲಾರೆನೆಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅವನ ಬುದ್ಧಿಯು ಅವನ ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಿತ್ತು. ಅವನು ಮರುಯೋಚಿಸದೆ ತನ್ನ ಜನುಮದಾತರಾದ ಸಾಕ್ಷಾತ್ ಪಾರ್ವತಿ ಪರಮೇಶ್ವರರಿಗೆ ಪ್ರದಕ್ಷಿಣೆ ಹಾಕಿ ನಿಂತನು.
ನನ್ನ ಮಾತಾ-ಪಿತರಾದ ಶಿವ ಪಾರ್ವತಿಯರಲ್ಲಿ ಇಡೀ ಜಗತ್ತೇ ಮೈದುಂಬಿರಲು, ಅವರೇ ಸರ್ವಸ್ವವಾಗಿರುವಾಗ ನಾನು ಬೇರೆಲ್ಲೂ ಹೋಗಬೇಕಾದ ಅವಶ್ಯಕತೆಯಿಲ್ಲ ಎಂದು ಗಣೇಶ ತನ್ನ ನಿಲುವನ್ನು ಸಮರ್ಥಿಸಿಕೊಂಡನು. ಕೊನೆಗೆ ಗಣೇಶನೇ ಪಂದ್ಯ ಗೆದ್ದ. ಜತೆಗೆ ಆ ಸುಂದರ ಹಣ್ಣಗಳನ್ನೂ ತನ್ನದಾಗಿಸಿಕೊಂಡ ಪ್ರಥಮ ಪೂಜ್ಯ ಗಣೇಶ.

ಬ್ರಹ್ಮವೈವರ್ತ ಪುರಾಣದಲ್ಲಿನ, ಅಷ್ಟೇನೂ ಪ್ರಸಿದ್ಧವಲ್ಲದ ಕಥೆಯೊಂದು ಗಣೇಶನ ಹುಟ್ಟಿನ ಬಗ್ಗೆ ಬೇರೆಯೇ ಚಿತ್ರಣವನ್ನು ಕೊಡುತ್ತದೆ. ವಿಷ್ಣುವನ್ನು ಒಲಿಸಿಕೊಂಡರೆ ಒಬ್ಬ ಮಗನನ್ನು ಕರುಣಿಸುವನೆಂದು, ಪಾರ್ವತಿಯು, ಶಿವನ ಆಜ್ಞಾನುಸಾರವಾಗಿ ಒಂದು ವರ್ಷ ಉಪವಾಸ (ಪುಣ್ಯಕ ವ್ರತ)ಮಾಡುತ್ತಾಳೆ.
ಭಗವಾನ್ ಕೃಷ್ಣನು ಅವತಾರ ಸಮಾಪ್ತಿಯಾದ ನಂತರ, ಪ್ರತಿಯೊಂದು ಕಲ್ಪದಲ್ಲೂ ತಾನು ಅವಳ ಮಗನಾಗಿ ಅವತರಿಸುವೆನೆಂದು ಘೋಷಿಸುತ್ತಾನೆ. ಅದರಂತೆಯೇ,ಕೃಷ್ಣನು ಮನೋಹರ ರೂಪದ ಶಿಶುವಾಗಿ ಪಾರ್ವತಿಗೆ ಜನ್ಮ ತಳೆಯುತ್ತಾನೆ.ಈ ಘಟನೆಯನ್ನು ಅತ್ಯಧಿಕ ಸಂಭ್ರಮದಿಂದ ಆಚರಿಸಿ, ಎಲ್ಲಾ ದೇವಾನುದೇವತೆಗಳನ್ನು ಮಗುವನ್ನು ನೋಡಲು ಆಹ್ವಾನಿಸಲಾಗುತ್ತದೆ.
ಆದರೆ ಸೂರ್ಯನ ಮಗನಾದ ಶನಿಯು ,ಶನಿದೃಷ್ಟಿ ಶಿಶುವಿಗೆ ಹಾನಿಕಾರಕವಾದುದರಿಂದ ಮಗುವನ್ನು ದೃಷ್ಟಿಸಲು ಹಿಂಜರಿಯುತ್ತಾನೆ. ಆದರೂ ಪಾರ್ವತಿಯು ಶನಿಯನ್ನು ಶಿಶುವನ್ನು ನೋಡೆಂದು ಆಗ್ರಹಿಸಲು, ಶನಿಯು ಮಗುವನ್ನು ನೋಡಿದ್ದೇ ತಡ,ತಕ್ಷಣವೇ ಶಿಶುವಿನ ತಲೆ ಉರುಳಿ ಬಿದ್ದು ಗೋಲೋಕಕ್ಕೆ ಹಾರಿ ಹೋಗುತ್ತದೆ.
ದುಃಖದಲ್ಲಿ ಮುಳುಗಿದ ಶಿವ ಮತ್ತು ಪಾರ್ವತಿಯರನ್ನು ಕಂಡು, ವಿಷ್ಣು ತನ್ನವಾದ ಗರುಡನನ್ನು ಏರಿ,ಪುಷ್ಪ-ಭದ್ರವೆಂಬ ನದೀತೀರದಿಂದ ಮರಿಯಾನೆಯೊಂದರ ತಲೆಯನ್ನು ತರುತ್ತಾನೆ. ಆನೆಯ ತಲೆಯನ್ನು ಪಾರ್ವತಿಯ ಮಗನ ರುಂಡವಿಲ್ಲದ ದೇಹಕ್ಕೆ ಜೋಡಿಸಿ, ಅವನನ್ನು ಪುನರುಜ್ಜೀವಿತಗೊಳಿಸುತ್ತಾರೆ.ಆ ಶಿಶುವನ್ನು ಗಣೇಶನೆಂದು ಹೆಸರಿಸಿ,ದೇವತೆಗಳೆಲ್ಲರೂ ಅವನನ್ನು ಆಶೀರ್ವದಿಸುತ್ತಾರೆ ಮತ್ತು ಅವನಿಗೆ ಶಕ್ತಿ ಸಾಮರ್ಥ್ಯ ಹಾಗೂ ಅಭಿವೃದ್ಧಿಯನ್ನು ಹಾರೈಸುತ್ತಾರೆ.

ಗಣಪನಿಗೆ ತಾಯಿ ಅಂದರೆ ಬಲು ಪ್ರೀತಿ :

ಪಾರ್ವತಿ ಪುತ್ರ ಗಣೇಶ
ಪಾರ್ವತಿ ಪುತ್ರ ಗಣೇಶ

ಒಮ್ಮೆ ಆಟವಾಡುತ್ತಿದ್ದಾಗ ಗಣೇಶ ಒಂದು ಬೆಕ್ಕನ್ನು ಗಾಯಗೊಳಿಸಿದ. ಅವನು ಮನೆಗೆ ಹಿಂದಿರುಗಿದಾಗ,ಅವನ ತಾಯಿಯ ಶರೀರದ ಮೇಲೆ ಒಂದು ಗಾಯವನ್ನು ಕಂಡ.ಅವಳು ಹೇಗೆ ಗಾಯಗೊಂಡಳೆಂದು ಕೇಳಿದ.ತಾಯಿ ಪಾರ್ವತಿ ಇದಕ್ಕೆ ಕಾರಣ ಬೇರಾರೂ ಅಲ್ಲ,ಸ್ವಯಂ ಗಣೇಶನೇ! ಎಂದು ತಿಳಿಸಿದಳು. ಆಶ್ಚರ್ಯಗೊಂಡ ಗಣೇಶ ತಾನು ಯಾವಾಗ ಆಕೆಯನ್ನು ಗಾಯಗೊಳಿಸಿದೆನೆಂದು ತಿಳಿಯಲಿಚ್ಛಿಸಿದ.
ಆಗ ಪಾರ್ವತಿ ತಾನೇ ದೇವಿ,ದೈವಿಕಶಕ್ತಿ,ಎಲ್ಲ ಜೀವರಾಶಿಗಳಲ್ಲಿ ಅಂತರ್ಗತವಾಗಿ ಇರುವವಳು ಎಂದು ವಿವರಿಸಿದಳು. ಅವನು ಬೆಕ್ಕನ್ನು ಗಾಯಗೊಳಿಸಿದಾಗ ಅವಳಿಗೇ ಘಾಸಿಯಾಯಿತು. ಆಗ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಪ್ರಕಟರೂಪ(ಪ್ರತಿರೂಪ)ವೆಂದು ಜ್ಞಾನೋದಯವಾಯಿತು.ಅವನು ಮದುವೆಯಾಗುವುದಿಲ್ಲವೆಂದು ನಿಶ್ಚಯಿಸಿದ.
ಹೀಗೆ ಗಣಪತಿಯು ಆಜನ್ಮ ನೈಷ್ಠಿಕ ಬ್ರಹ್ಮಚಾರಿಯಾಗಿ, ಬ್ರಹ್ಮಚರ್ಯದ ಕಟ್ಟುನಿಟ್ಟಿನ ನಿಯಮಗಳ ಪಾಲಕನಾಗಿ ಉಳಿದ. ಆದರೂ,ಕೆಲವು ಸನಾತನ ಗ್ರಂಥ ಹಾಗೂ ಪ್ರತಿಮೆಗಳಲ್ಲಿ ಕೆಲವು ಕಡೆ ಗಣೇಶನು ಬ್ರಹ್ಮನ ಇಬ್ಬರು ಪುತ್ರಿಯರನ್ನು ವಿವಾಹವಾಗಿರುವಂತೆ ಚಿತ್ರಿಸಲಾಗಿದೆ : ಬುದ್ಧಿ (ಬುದ್ಧಿಶಕ್ತಿ) ಮತ್ತು ಸಿದ್ಧಿ (ಆಧ್ಯಾತ್ಮಿಕ ಶಕ್ತಿ).

ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಹಲವು ನಾಮಗಳು ಇವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರೇಷ್ಮೆ ಹುಳು

ರೇಷ್ಮೆ ಬೆಳೆ ಬೆಳೆಯುವ ವಿಧಾನಗಳು

ಅಡಿಕೆ ಬೆಳೆ

ಅಡಿಕೆ ಬೆಳೆ ಬೆಳೆಯುವ ವಿಧಾನಗಳು